ಜೈಲು ಸಿಬ್ಬಂದಿಗಳ ಮೇಲೆ ಖೈದಿಗಳಿಬ್ಬರಿಂದ ಹಲ್ಲೆ: ಜೈಲು ಸಿಬ್ಬಂದಿಗಳು ಆಸ್ಪತ್ರೆಗೆ ದಾಖಲು

ಜೈಲು ಸಿಬ್ಬಂದಿಗಳ ಮೇಲೆ ಖೈದಿಗಳಿಬ್ಬರಿಂದ ಹಲ್ಲೆ: ಜೈಲು ಸಿಬ್ಬಂದಿಗಳು ಆಸ್ಪತ್ರೆಗೆ ದಾಖಲು Prison staff attacked by two inmates: Prison staff admitted to hospital

                         ಕಾರವಾರ  06 :  ಕಾರವಾರ ಜಿಲ್ಲಾ ಕಾರಾಗೃಹದಲ್ಲಿ ಮಾದಕ ವಸ್ತುಗಳ ಪೂರೈಕೆಗೆ ಕಡಿವಾಣ ಹಾಕಿದ ಹಿನ್ನೆಲೆಯಲ್ಲಿ, ರೊಚ್ಚಿಗೆದ್ದ ಮಂಗಳೂರು ಮೂಲದ ರೌಡಿಗಳು ಜೈಲರ್ ಹಾಗೂ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಗಂಭೀರ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ. ಈ ಘಟನೆಯಲ್ಲಿ ಜೈಲರ್ ಕಲ್ಲಪ್ಪ ಗಸ್ತಿ ಸೇರಿದಂತೆ ,  ಕರ್ತವ್ಯ ನಿರತ  ಮೂವರು ಜೈಲು  ಇತರ ಸಿಬ್ಬಂದಿಗಳ  ಮೇಲೆ ಹಲ್ಲೆ ನಡೆದಿದೆ. ಜೈಲಿನಲ್ಲಿ ತಂಬಾಕು,  ಗಾಂಜಾ , ಸಿಗರೇಟುನಂಥ ಮಾದಕ  ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಿ, ತಪಾಸಣೆಯನ್ನು ಬಿಗಿ ಮಾಡಿದ ಕ್ರಮವನ್ನು ಸಹಿಸದ ಆರೋಪಿಗಳು, ಸಿಬ್ಬಂದಿಗಳೊಂದಿಗೆ ತಗಾದೆ ತೆಗೆದಿದ್ದಾರೆ. ಈ ವೇಳೆ  ಮಾತುಕತೆ ವಿಕೋಪಕ್ಕೆ ಹೋಗಿ, ಜೈಲರ್ ಹಾಗೂ ಜೈಲು  ಸಿಬ್ಬಂದಿಗಳ  ಬಟ್ಟೆ ಹರಿದು,  ಮನಬಂದಂತೆ ಥಳಿಸಿದ್ದಾರೆ.

                      ಜೈಲು ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಮಂಗಳೂರು ಮೂಲದ ಮೊಹಮ್ಮದ್ ಅಬ್ದುಲ್ ಫಯಾನ್ ಮತ್ತು ಕೌಶಿಕ್ ನಿಹಾಲ್ ಎಂದು ಗುರುತಿಸಲಾಗಿದೆ. ಈ ಆರೋಪಿಗಳು , ಡಕಾಯತಿ ಸೇರಿದಂತೆ 12ಕ್ಕೂ ಹೆಚ್ಚು ಗಂಭೀರ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ. ಮಂಗಳೂರು ಜೈಲಿನಲ್ಲಿ ವಿಚಾರಣಾಧೀನ  ಕೈದಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಇವರನ್ನು ಕಾರವಾರ ಜೈಲಿಗೆ ಸ್ಥಳಾಂತರಿಸಲಾಗಿತ್ತು.ಕಳೆದ ಕೆಲ ದಿನಗಳಿಂದ ಜೈಲಿನಲ್ಲಿ ಶಿಸ್ತು ಕ್ರಮಗಳನ್ನು ಬಿಗಿಗೊಳಿಸಲಾಗಿತ್ತು. ಇದರಿಂದ ಆಕ್ರೋಶಗೊಂಡಿದ್ದ ರೌಡಿಗಳು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಹಲ್ಲೆಯಿಂದ ಗಾಯಗೊಂಡಿರುವ ಜೈಲರ್ ಹಾಗೂ ಸಿಬ್ಬಂದಿಯನ್ನು ಚಿಕಿತ್ಸೆಗಾಗಿ ಕಾರವಾರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.