ಜನರ ಸಹಕಾರ, ಬೆಂಬಲ ದೊರೆತರೆ ಗಿಡಗಳನ್ನು ನೆಡುವ ಯೋಜನೆ ಯಶಸ್ಸು: ಸಂಗಾಲಕ

ಮುದ್ದೇಬಿಹಾಳ 26: ಅರಣ್ಯ ಇಲಾಖೆಯ ಗಿಡಗಳನ್ನು ನೆಡುವ ಕೆಲಸಕ್ಕೆ ಎಲ್ಲರೂ ಅಡ್ಡಿ ಪಡಿಸುವವರೇ ಹೆಚ್ಚು. ನಮ್ಮ ಹೊಲದ ಬಾಜೂ ಗಿಡ ಹಚ್ಚಬ್ಯಾಡ್ರಿ, ಕಿತ್ತಿ ಒಗಿತಿವಿ ನೋಡ್ರಿ ಅನ್ನೋರು ಜಾಸ್ತಿ ಇರುವಾಗ, ಬನ್ನಿ, ನಮ್ಮ ಕಡೆ ಗಿಡಗಳನ್ನು ಹಚ್ರಿ ಎನ್ನುವವರನ್ನು ಕಂಡರೆ ನಮಗೆ ಬಹಳ ಸಂತೋಷ ಎಂದು ತಾಲ್ಲಕು ಸಾಮಾಜಿಕ ವಲಯ ಅರಣ್ಯಾಧಿಕಾರಿ ಎಸ್‌.ಜಿ.ಸಂಗಾಲಕ ಹೇಳಿದರು.  

ಅವರು ಮಂಗಳವಾರ ಬೆಳಿಗ್ಗೆ ರೇವಣಸಿದ್ದೇಶ್ವರ ಹಿರೇಗುಡ್ಡದಲ್ಲಿ ಅರಣ್ಯ ಇಲಾಖೆ, ಹಸಿರು ತೋರಣ ಗೆಳೆಯರ ಬಳಗ ಹಾಗೂ ಸರೂರ ಗ್ರಾಮಸ್ಥರು ಸಂಯುಕ್ತವಾಗಿ ಹಮ್ಮಿಕೊಂಡ "ಸರೂರ ಗುಡ್ಡ ಉಳಿಸಿ" ಅಭಿಯಾನದಂಗವಾಗಿ ನಡೆದ ಸಭೆಯಲ್ಲಿ ಮಾತನಾಡಿದರು.  

 ಅರಣ್ಯ ಇಲಾಖೆ ಈ ವರ್ಷ ಮಾಡಬೇಕಾದ ಯೋಜನೆಗಳನ್ನು ಹಿಂದಿನ ವರ್ಷವೇ ಮಾಡಿರುತ್ತದೆ. ಆದಾಗ್ಯೂ ಸ್ಥಳ ಬದಲಾವಣೆ ಮಾಡಿ ಯೋಜನೆ ಅನುಷ್ಠಾನ ಮಾಡಲು ಯತ್ನಿಸುತ್ತೇವೆ. ನಮ್ಮೆಲ್ಲರ ಉದ್ದೇಶ ಗಿಡಗಳನ್ನು ನೆಡುವುದಾಗಿದೆ. ಜನರ ಸಹಕಾರ, ಬೆಂಬಲ ದೊರೆತರೆ ಅದು ಯಶಸ್ಸು ಕಾಣುತ್ತದೆ ಎಂದರು.  

ಬಸನಗೌಡ ಪಾಟೀಲ ಮಾತನಾಡಿ ಸರೂರ ಗುಡ್ಡ 160 ಎಕರೆ ವಿಸ್ತೀರ್ಣ ಹೊಂದಿದ್ದು, ಬಹಳಷ್ಟು ಕಡೆ ಅತಿಕ್ರಮಣ ನಡೆಯುತ್ತಿದೆ. ಇದು ತಪ್ಪಬೇಕು. ಗುಡ್ಡದಲ್ಲಿ ಗಿಡಗಳನ್ನು ನೆಡುವ ಕೆಲಸ ಮಾಡಬೇಕು. ತಾಲೂಕು ಆಡಳಿತದ ಅಧಿಕಾರಿಗಳು ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯೋನ್ಮುಖರಾಗಬೇಕು ಎಂದರು.  

ಸಾಹಿತಿ ಸಿದ್ದನಗೌಡ ಬಿಜ್ಜೂರ ಮಾತನಾಡಿ, ಸರೂರ ಗ್ರಾಮವು ರೇವಣಸಿದ್ದೇಶ್ವರರ ಮೂಲಪೀಠವಾಗಿ ನಾಡಿಗೇ ಚಿರಪರಿಚಿತ. ಒಂದು ಕಾಲದಲ್ಲಿ ಸಾವಿರಾರು ಗಿಡಗಳಿಂದ ಸಮೃದ್ಧವಾಗಿದ್ದ ಹಿರೇಗುಡ್ಡ ಈಗ ಬೋಳು ಬೋಳಾಗಿ ಕಾಣುತ್ತಿರುವುದು ನೋವು ತರಿಸುತ್ತದೆ. ಸರೂರ ಗುಡ್ಡ ತನ್ನ ಗತಕಾಲದ ವೈಭವವನ್ನು ಮರಳಿ ಪಡೆಯಲು ಹಸಿರು ತೋರಣ ಗೆಳೆಯರ ಬಳಗ ಮತ್ತು ಅರಣ್ಯ ಇಲಾಖೆ ಜೊತೆಯಲ್ಲಿ ಬಂದು ಕೆಲಸ ಮಾಡುತ್ತಿರುವುದು ಸಂತಸ ತಂದಿದೆ ಎಂದರು.  

ಹಸಿರು ತೋರಣ ಗೆಳೆಯರ ಬಳಗದ ಸಂಚಾಲಕ ಮಹಾಬಲೇಶ್ವರ ಗಡೇದ ಮಾತನಾಡಿ, ಯಾವುದೇ ಯೋಜನೆಯ ಆರಂಭದಲ್ಲಿ ವಿಘ್ನಗಳು, ಸ್ಥಳೀಯ ವಿರೋಧ, ಅಪಸ್ವರ ಸಾಮಾನ್ಯ. ಅದನ್ನು ಮೀರಿ ಪರಿಸರ ಉಳಿಸಬೇಕು ಎನ್ನುವ ಸಮಾನ ಮನಸ್ಸಿನ ಜನರು ಸೇರಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಕೆಲವೇ ವರ್ಷಗಳಲ್ಲಿ ಸರೂರ ಗುಡ್ಡದಲ್ಲಿ ಹೆಚ್ಚಿನ ಹಸಿರು ಕಾಣಬಹುದು ಎಂದರು.  

ಕಿರುತೆರೆ ಕಲಾವಿದ ಶ್ರೀಶೈಲ ಹೂಗಾರ, ಸಿದ್ದು ತೊಂಡಿಹಾಳ, ತಬಸಯ್ಯ ಗುರವಿನ, ಸಿದ್ದಯ್ಯ ಶರಬಯ್ಯಾ ಗುರವಿನ, ಸಿದ್ದಯ್ಯ ಸಣ್ಣಯ್ಯ ಗುರವಿನ, ಶಿವಯ್ಯ ಗುರುಶಿದ್ದಯ್ಯ ಗುರವಿನ ಮಾತನಾಡಿ, ಸರೂರ ಗುಡ್ಡ ಉಳಿಸುವ ಅಭಿಯಾನದಲ್ಲಿ ಎಲ್ಲ ರೀತಿಯ ನೆರವು, ಸಹಕಾರ ನೀಡುವುದಾಗಿ ಹೇಳಿದರು.  

ಮಹಾಂತೇಶ ಬೋರಗಿ, ಸಿದ್ರಾಮ ವಾಲಿಕಾರ, ಸುಭಾಷ್ ಬಡಿಗೇರ, ಶಿವು ಬೋರಗಿ, ಸಂತೋಷ ಜಾಧವ, ದೇವಲಪ್ಪ ನಾಯಕ್, ಶಿವಾನಂದ ನಾಯಕ, ಹಸಿರು ತೋರಣ ಬಳಗದ ಅಧ್ಯಕ್ಷ ಡಾ.ವೀರೇಶ ಇಟಗಿ, ಉಪಾಧ್ಯಕ್ಷ ಬಸವರಾಜ ಬಿಜ್ಜೂರ, ಮಾಜಿ ಅಧ್ಯಕ್ಷ ನಾಗಭೂಷಣ ನಾವದಗಿ, ಬಿ.ಎಸ್‌.ಮೇಟಿ, ಅಶೋಕ ರೇವಡಿ, ರಾಜಶೇಖರ ಕಲ್ಯಾಣಮಠ, ರವಿ ತಡಸದ, ಜಿ.ಎಂ.ಹುಲಗಣ್ಣಿ, ಶ್ರೀಶೈಲ ಮರೋಳ, ಪುಟ್ಟು ಕಡಕೋಳ, ಅರಣ್ಯ ಇಲಾಖೆಯ ಅಧಿಕಾರಿಗಳಾದ ಅಶೋಕ ಚವ್ಹಾಣ, ಮಲ್ಲಪ್ಪ ತೇಲಿ, ಅನಿಲ ಚವ್ಹಾಣ, ಬಸವರಾಜ ಬ್ಯಾಕೋಡ ಸೇರಿದಂತೆ ಸರೂರ ಗ್ರಾಮಸ್ಥರು ಇದ್ದರು.  

ಸಭೆಯ ನಂತರ ಸಾಂಕೇತಿಕವಾಗಿ ಗಿಡಗಳನ್ನು ನೆಡಲಾಯಿತು. ಸಿದ್ದಯ್ಯ ಶರಬಯ್ಯ ಗುರವಿನ ಮಂತ್ರ ಪಠಣ ಮಾಡಿದರು. ಶ್ರೀಶೈಲ ಹೂಗಾರ ಸ್ವಾಗತಿಸಿದರು. ಮಹಾಬಲೇಶ್ವರ ಗಡೇದ ನಿರೂಪಿಸಿದರು. ಸಿದ್ದನಗೌಡ ಬಿಜ್ಜೂರ ವಂದಿಸಿದರು.