ಗುಬ್ಬೆವಾಡ ಗ್ರಾಪಂ ವ್ಯಾಪ್ತಿಯ ಬೋರಗಿ ಗ್ರಾಮದ ನರೇಗಾ ದಿನ ಆಚರಣೆ
ಸಿಂದಗಿ 06: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಅಧಿನಿಯಮ 2005 ರಲ್ಲಿ ಜಾರಿಗೆ ಬಂದಿತು ಹಾಗೂ ಇದು ಒಂದು ಯೋಜನೆ ಆಗದೆ ಕಾಯ್ದೆಯಾಗಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ರಾಮು ಜಿ ಅಗ್ನಿ ಹೇಳಿದರು.
ತಾಲೂಕಿನ ಗುಬ್ಬೆವಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೋರಗಿ ಗ್ರಾಮದ ಚೌಡೇಶ್ವರಿ ದೇವಸ್ಥಾನಲ್ಲಿ ಹಮ್ಮಿಕೊಂಡ ನರೇಗಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಲ್ಲಿಂದ ಇಲ್ಲಿವರೆಗೂ ಜಾರಿಯಾಗಿ 20 ವರ್ಷ ಕಳೆಯಿತು. ಇದರ ಉದ್ದೇಶವೆಂದರೆ ಗ್ರಾಮೀಣ ಜನರಿಗೆ ಮತ್ತು ಹಿಂದುಳಿದ ಎಲ್ಲ ಸಮುದಾಯದ ಸಮಾಜದ ಕಟ್ಟಕಡೆಯ ಕೂಲಿ ಕಾರ್ಮಿಕರ ಕುಟುಂಬಕ್ಕೆ ವರ್ಷಕ್ಕೆ ಕನಿಷ್ಠ 100 ದಿನ ಕೆಲಸ ಒದಗಿಸುವದು ಇದರ ಉದ್ದೇಶ ಮತ್ತು ಜನರ ಜೀವನ ಗುಣಮಟ್ಟ ಸುಧಾರಿಸುವದಾಗಿದೆ. ಈ ಯೋಜನೆಯಲ್ಲಿ ವ್ಯಯಕ್ತಿಕ ಕಾಮಗಾರಿಗಳಾದ ಬದು ನಿರ್ಮಾಣ, ಕೃಷಿ ಹೊಂಡ, ತೋಟಗಾರಿಕೆ ಬೆಳೆಗಳು, ರೇಷ್ಮೆ ಬೆಳೆ, ಅರಣ್ಯ ಇಲಾಖೆಯಿಂದ ಸಹಾಯಧನ ಪಡೆಯಬಹುದು. ಆದ್ದರಿಂದ ತಾವುಗಳು ಇದರ ಸದುಪಯೋಗ ಪಡೆಯಿರಿ ಎಂದು ತಿಳಿಸಿದರು.
ನರೇಗಾದಡಿ ಪ್ರಸ್ತುತ ಆರ್ಥಿಕ ವರ್ಷದಲ್ಲಿ 100 ದಿನ ಪೂರೈಸಿದ 10 ಜನರಿಗೆ ಸನ್ಮಾನಿಸಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷರ ಪ್ರತಿನಿಧಿ ನಿತ್ಯಾನಂದ ಕಟ್ಟಿಮನಿ, ಸದಸ್ಯರಾದ ಬಸವರಾಜ ಚಾವರ, ಪರಸು ಕೋಟಾರಗಸ್ತಿ, ಕಾರ್ಯದರ್ಶಿ ಈರಣ್ಣ ಮಾಗಣಗೇರಿ, ತಾಲೂಕು ಐ ಇ ಸಿ ಸಂಯೋಜಕರು ಭೀಮರಾಯ ಚೌಧರಿ, ಗ್ರಾಮ ಕಾಯಕ ಮಿತ್ರ ಲಕ್ಷ್ಮೀ ಮಾದರ, ನರೇಗಾ ಕೂಲಿಕರರ ಕಾಯಕ ಬಂಧು ಶಾಂಭವಿ ಕೊಟರಗಸ್ತಿ, ಸಿದ್ದು ಮಾದರ, ಸಿಬ್ಬಂದಿಗಳು, ಸಾರ್ವಜನಿಕರು ಮತ್ತು ನರೇಗಾ ಕೂಲಿ ಕಾರ್ಮಿಕರು ಹಾಜರಿದ್ದರು.