ಮುಡಾ ಕಾರ್ಮೋಡ ಮುಖ್ಯಮಂತ್ರಿ ಕುರ್ಚಿ ಆವರಿಸಿಕೊಂಡಿದೆ: ಬಿ.ವೈ.ವಿಜಯೇಂದ್ರ

ಬೆಳಗಾವಿ 10: ಮುಡಾ ಕಾರ್ಮೋಡ ಮುಖ್ಯಮಂತ್ರಿ ಕುರ್ಚಿ ಆವರಿಸಿಕೊಂಡಿದೆ. ಒಬ್ಬರಾದ ಮೇಲೆ ಒಬ್ಬ ಸಚಿವರು ಸಿದ್ದರಾಮಯ್ಯ ಐದು ವರ್ಷ ಪೂರೈಸುತ್ತಾರೆ ಎನ್ನುತ್ತಿದ್ದಾರೆ. ಅದು ಸಾಧ್ಯವಿಲ್ಲ ಅಂತಾ ಅವರಿಗೂ ಗೊತ್ತಿದೆ. ಆದರೆ, ಸಿಎಂ ಮನಸ್ಸು ಗೆಲ್ಲಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಲೇವಡಿ ಮಾಡಿದರು. 

ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಕೋಮಾದಲ್ಲಿದೆ ಎಂದು ಜನ ಮಾತನಾಡುತ್ತಿದ್ದಾರೆ. ಅಭಿವೃದ್ಧಿ ಶುರು ಆಗಿಲ್ಲ. ಹೊಸ ಕೆಲಸ ಘೋಷಣೆ ಮಾಡಿಲ್ಲ. ಸಿಎಂ ಮತ್ತು ಸಚಿವರಿಗೆ ಬೆಂಗಳೂರೇ ಕರ್ನಾಟಕ ಎಂಬ ಭಾವನೆ ಬಂದಿದೆ. ಯಾರೂ ಜಿಲ್ಲಾ ಪ್ರವಾಸ ಕೈಗೊಂಡಿಲ್ಲ. ಪ್ರಗತಿ ಪರೀಶೀಲನೆ ಮಾಡಿಲ್ಲ. ಹೊಸ ಗುದ್ದಲಿ ಪೂಜೆ ಮಾಡಿಲ್ಲ, ಗುದ್ದಲಿಯೂ ಕಾಣಿಸುತ್ತಿಲ್ಲ ಎಂದು ಕಿಡಿಕಾರಿದರು.ಕಳೆದ ಮೂರನಾಲ್ಕು ತಿಂಗಳಿನಿಂದ ಜನರ ಪರವಾಗಿ ಸರ್ಕಾರ ಇಲ್ಲದ ವಾತಾವರಣ ನಿರ್ಮಾಣವಾಗಿದೆ. ಗ್ಯಾರಂಟಿಗಳ ಬಗ್ಗೆ ಉದ್ದುದ್ದ ಭಾಷಣ ಮಾಡಿ, ಲೋಕಸಭೆ ಚುನಾವಣೆ ವೇಳೆ ಮೂರು ಕಂತಿನ ಹಣ ಬಿಡುಗಡೆ ಮಾಡಿದರು. ಲೋಕಸಭೆ ಚುನಾವಣೆ ಬಳಿಕ ಗೃಹಲಕ್ಷ್ಮೀ ಸೇರಿ ಎಲ್ಲವನ್ನೂ ಮರೆತಿದ್ದಾರೆ ಎಂದು ವಾಗ್ದಾಳಿ ಮಾಡಿದರು.  

ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನಕ್ಕೆ ಹೊಸ ಸಿಎಂ ಇರುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಇನ್ನು ದುರಂತ ಎಂದರೆ ಈ ಸರ್ಕಾರ ಬಂದ ಮೇಲೆ ಉತ್ತರ ಕರ್ನಾಟಕ ಬಗ್ಗೆ ಯಾವುದೇ ಚರ್ಚೆ ಇಲ್ಲ. ಉ.ಕ. ವನ್ನು ಹಗುರವಾಗಿ ತೆಗೆದುಕೊಂಡಿದ್ದಾರೆ.  ಅಭಿವೃದ್ಧಿ ಹೀನ, ಜನ ವಿರೋಧಿ ಸರ್ಕಾರ. ಇದು ಎಷ್ಟು ಬೇಗ ತೊಲಗುತ್ತದೆಯೋ ಅಷ್ಟು ಒಳ್ಳೆಯದು ಎಂದು ಕಿಡಿಕಾರಿದರು.ಕಿತ್ತೂರು ರಾಣಿ ಚನ್ನಮ್ಮ ವಿಜಯೋತ್ಸವ ಕೇಂದ್ರದಲ್ಲಿ ಆಚರಿಸುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರಮುಖ ಮುಖಂಡರ ಜೊತೆಗೆ ಚರ್ಚಿಸಿ, ಕೇಂದ್ರದ ಗಮನ ಸೆಳೆಯುತ್ತೇವೆ ಎಂದು ಹೇಳಿದರು. ಹರಿಯಾಣ, ಜಮ್ಮು ಕಾಶ್ಮೀರದ ಫಲಿತಾಂಶವನ್ನು ನಾವು ನೋಡಿದ್ದೇವೆ. ಹರಿಯಾಣದ ಪ್ರಜ್ಞಾವಂತ ಮತದಾರರು ಮೂರನೇ ಬಾರಿ ಗೆಲ್ಲಿಸಿದ್ದಾರೆ. ಕಾಂಗ್ರೆಸ್ ಬೋಗಸ್ ಗ್ಯಾರಂಟಿಗಿಂತ ಮೋದಿ ಗ್ಯಾರಂಟಿ ಲೇಸು ಎಂದು ಮತ ಹಾಕಿದ್ದಾರೆ. ಸಾಕಷ್ಟು ಅಪಪ್ರಚಾರದ ನಡುವೆಯೂ ಐತಿಹಾಸಿಕ ಗೆಲುವಾಗಿದೆ. ಜಮ್ಮು-ಕಾಶ್ಮೀರದಲ್ಲಿ ಅಧಿಕಾರಕ್ಕೆ ಬಂದಿಲ್ಲ ಆದರೆ, 29 ಸ್ಥಾನ ಗೆದ್ದು ಬಲಿಷ್ಠ ವಿರೋಧ ಪಕ್ಷವಾಗಿ ಹೊರ ಹೊಮ್ಮಿದೆ. ಅಲ್ಪಸಂಖ್ಯಾತರ ತುಷ್ಠೀಕರಣ ಮಾಡುವ ಕಾಂಗ್ರೆಸ್ ಕೇವಲ 6 ಸ್ಥಾನ ಗೆದ್ದು ಧೂಳಿಪಟವಾಗಿದೆ. ಇದು ಮಹಾರಾಷ್ಟ್ರದ ಚುನಾವಣೆ ಮೇಲೂ ಪರಿಣಾಮ ಬೀರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.87 ಕೋಟಿ ಹಗರಣ ಆಗಿದೆ ಎಂದು ಸಿಎಂ ಸದನದಲ್ಲಿ ಒಪ್ಪಿಕೊಂಡಿದ್ದಾರೆ. ಮುಡಾ ಹಗರಣದ ಬಗ್ಗೆ ಮಾತಾಡಲೇ ಇಲ್ಲ ಎಲ್ಲಿ ಚರ್ಚಿಸಿದರೆ ಮುಜುಗರ ಆಗುತ್ತದೆ ಎಂದು ಪಲಾಯನವಾದ ಮಾಡಿದರು. ತಪ್ಪು ಒಪ್ಪಿಕೊಂಡು 14 ಸೈಟ್‌ಗಳನ್ನು ವಾಪಸ್ಸು ನೀಡಿದ್ದಾರೆ. ಸಿದ್ದರಾಮಯ್ಯ ಎಲ್ಲೊ ಒಂದು ಕಡೆ ಅಸಹಾಯಕತೆ, ನೋವಿನಲ್ಲಿದ್ದಾರೆ. ವಿಶ್ವಾಸ ಕಳೆದುಕೊಂಡಿದ್ದಾರೆ. ಹಾಗಾಗಿ, ಯಾವುದೇ ಕ್ಷಣದಲ್ಲಿ ಸಿಎಂ ರಾಜೀನಾಮೆ ನೀಡಬಹುದು. ಇನ್ನು ಐದು ವರ್ಷ ಅವರೇ ಸಿಎಂ ಎನ್ನುತ್ತಾ ಅವರದೇ ಸಚಿವರು ಗುಪ್ತ ಸಭೆ ಮಾಡುತ್ತಿದ್ದಾರೆ ಎಂದು ವಿಜಯೇಂದ್ರ ಕುಟುಕಿದರು.

ದೇಶದಲ್ಲಿ ಕರ್ನಾಟಕ ಅಭಿವೃದ್ಧಿಯಲ್ಲಿ ಈ ಸರ್ಕಾರ ನಂ.1 ಅಲ್ಲ. ಸಿದ್ದರಾಮಯ್ಯ ಆರೋಪಿ ನಂ.1. ಅಪರಾಧಿ ಸ್ಥಾನದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಭಂಡತನ ಬಿಟ್ಟು ಎಷ್ಟು ಬೇಗ ರಾಜೀನಾಮೆ ಕೊಡುತ್ತಾರೆ ಅಷ್ಟು ಒಳ್ಳೆಯದು ಎಂದು ವಿಜಯೇಂದ್ರ ವಾಗ್ದಾಳಿ ಮಾಡಿದರು. ರಮೇಶ ಜಾರಕಿಹೊಳಿ ಅವರನ್ನು ಹುಡುಕುತ್ತಿದ್ದೇನೆ ಅವರು ಸಿಗುತ್ತಿಲ್ಲ. ಹಾಗಾಗಿ, ಸತೀಶ ಜಾರಕಿಹೊಳಿ ಸಿಕ್ಕರು. ನನ್ನ ಕ್ಷೇತ್ರದ ಅಭಿವೃದ್ಧಿ ವಿಚಾರ ಭೇಟಿಯಾಗಿದ್ದೆ. ಇದರಲ್ಲಿ ರಾಜಕಾರಣ ಹುಡುಕುವ ಅವಶ್ಯಕತೆ ಇಲ್ಲ. ನಮ್ಮ ಪಕ್ಷದ ಜೊತೆಗೆ ಎಲ್ಲ ಪಕ್ಷಗಳ ನಾಯಕರ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದು ಒಳ್ಳೆಯದು ಎಂದು ವಿಜಯೇಂದ್ರ ಅಭಿಪ್ರಾಯ ಪಟ್ಟರು.ಸುದ್ದಿಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ವಿಠಲ ಹಲಗೇಕರ್, ದುರ್ಯೋಧನ ಐಹೊಳೆ, ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ್ಡ, ಸಂಜಯ ಪಾಟೀಲ, ಅನಿಲ ಬೆನಕೆ, ಅರವಿಂದ ಪಾಟೀಲ ಸೇರಿ ಮತ್ತಿತರರು ಇದ್ದರು.