ಬೆಳಗಾವಿ 29: ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಯಲ್ಲಿ ವಿಶಿಷ್ಟ ಸಾಧನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹುರುಪು ತುಂಬುವುದರ ಜೊತೆಗೆ ಮುಂದಿನ ಭವಿಷ್ಯಕ್ಕೆ ಸಾಧನೆ ಮೈಲುಗಲ್ಲಾಗುವ ದೃಷ್ಟಿಯಲ್ಲಿ ಜ್ಞಾನದೀಪ ಸಂಸ್ಥೆಯ ವತಿಯಿಂದ ಎಸ್ಎಸ್ಎಲ್ಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸುತ್ತಿರುವುದು ನಿಜಕ್ಕೂ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಭವಿಷ್ಯಕ್ಕೆ ಉತ್ತೇಜನ ನೀಡುತ್ತದೆ ಎಂದು ಶ್ರೀಕಾಂತ ಶಾನವಾಡ ಹೇಳಿದರು.
ಅವರು ಬುಧವಾರ ದಿ. 28ರಂದು ಬೆಳಗಾವಿ ನಗರದ ಗೋಗಟೆ ರಂಗಮಂದಿರದಲ್ಲಿ ಜ್ಞಾನದೀಪ ಶಿಕ್ಷಣ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ರಾಜ್ಯಕ್ಕೆ ಎರಡನೇ ಕ್ರಮಾಂಕ ಗಳಿಸಿದ ಸಾವಿತ್ರಿ ರೋನಿ ಇವಳಿಗೆ ಜ್ಞಾನದೀಪ ರತ್ನಶ್ರೀ ಮತ್ತು ರಾಜ್ಯಕ್ಕೆ ಮೂರನೇ ಕ್ರಮಾಂಕ ಸ್ನೇಹಾ ಪೂಜೇರಿ ಮತ್ತು ಬೆಳಗಾವಿ ಗ್ರಾಮೀಣ ವಲಯಕ್ಕೆ ಮೂರನೇ ಕ್ರಮಾಂಕ ಗಳಿಸಿದ ಸ್ನೇಹಾ ದೇಸಾಯಿ, ಸಹನಾ ಮುರಗೋಡ ಸೇರಿದಂತೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ. 85ಕ್ಕೂ ಹೆಚ್ಚು ಅಂಕ ಗಳಿಸಿದ ಸಂಸ್ಥೆಯ ಎಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಜ್ಞಾನದೀಪ ರತ್ನ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಅಧ್ಯಕ್ಷ ರಮೇಶ ಬಾಗೇವಾಡಿ ಮತ್ತು ಸಂಚಾಲಕ ಮಂಡಳಿ ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಲಕ್ಷ್ಮಣ ರೋಣಿ ವಹಿಸಿದ್ದರು. ಅತಿಥಿಗಳಾಗಿ ಸಂಸ್ಥೆಯ ಹಳೆಯ ವಿದ್ಯಾರ್ಥಿ ಯುವ ಉದಯೋನ್ಮುಖ ಕವಿ ನದೀಮ ಸನದಿ ವೈದ್ಯರಾದ ಡಾ.ಸುನಿಲ ಗೋಮಾಡಿ ಮತ್ತು ಪ್ರವೀಣ ಮಠಪತಿ ಆಗಮಿಸಿದ್ದರು. ಯುವ ಕವಿ ನದೀಂ ಸನದಿ ಮಾತನಾಡಿ ನಾವು ಹಿಡಿದ ಕೆಲಸದಲ್ಲಿ ನೂರರಷ್ಟು ಪ್ರಯತ್ನ ಹಾಕಿದರೆ ನಿಶ್ಚಿತವಾಗಿ ಯಶಸ್ಸು ಸಿಗುತ್ತದೆ. ಅದಕ್ಕೆ ಪ್ರಾಮಾಣಿಕ ಪ್ರಯತ್ನ ಬಹಳ ಮುಖ್ಯ ಎಂದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಮಾತು ಹೇಳಿದರು.
ವಿವಿಧ ವಿಷಯಗಳಲ್ಲಿ ನೂರು ಅಂಕಗಳ ಸಾಧನೆ ಮಾಡಿದ 12ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸಹ ಪರಿಪೂರ್ಣ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಸ್ಥೆಯ ಉಪಾಧ್ಯಕ್ಷ ಬಾಬುರಾವ ತಲ್ಲೂರ, ಕಾರ್ಯದರ್ಶಿ ಲೋಕೇಶ ತಲ್ಲೂರ, ನಗರ ವಲಯದ ಬಿ ಆರ್ ಪಿ ರಿಜವಾನ್ ನಾವಗೇಕರ, ಖಲಿಲ್ ಮುಲ್ಲಾ, ವಿಶ್ವನಾಥ ಬೀಳಗಿ, ಜಬ್ಬಾರ್ ಸನದಿ, ಪ್ರಕಾಶ ಬಾಗೇವಾಡಿ, ಆರ್ ಜಿ ಮುಧೋಳ, ಸಿದ್ದಪ್ಪ ಪೂಜೇರಿ, ವಿಜಯಲಕ್ಷ್ಮಿ ಬಾಗೇವಾಡಿ, ಸಂತಾನ ಎಂ,ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು, ಪಾಲಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಲ್ಲಿಕಾರ್ಜುನ ಕುಂಬಾರ ಸ್ವಾಗತಿಸಿದರು, ಶಿವಾನಂದ ತಲ್ಲೂರ ನಿರೂಪಿಸಿದರು. ವಾಣಿ ಹಾದಿಮನಿ ವಂದಿಸಿದರು.