ದೇವರಹಿಪ್ಪರಗಿ 03: ಆಧುನಿಕ ಶೈಲಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ,ಸಮುದಾಯ ಭವನಗಳಲ್ಲಿ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡು, ಅದರ ಸದ್ಬಳಕೆಗೆ ಮುಂದಾಗಬೇಕು ಎಂದು ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದ ಹತ್ತಿರ ಶನಿವಾರದಂದು ನಗರಾಭಿವೃದ್ಧಿ ಮತ್ತು ವಿವಿಧ ಇಲಾಖೆಗಳ ಸುಮಾರು 2ಕೋಟಿ ರೂ ವೆಚ್ಚದ ಡಾ.ಬಿ.ಆರ್. ಅಂಬೇಡ್ಕರ್ ಭವನ, 50 ಲಕ್ಷ ರೂ ವೆಚ್ಚದ ಸಿ.ಸಿ.ರಸ್ತೆ, 80 ಲಕ್ಷ ರೂ ವೆಚ್ಚದ ಪೊಲೀಸ್ ಠಾಣೆ ನೂತನ ಕಟ್ಟಡ, 1ಕೋಟಿ ರೂ ವೆಚ್ಚದ ಪ್ರವಾಸಿ ಮಂದಿರದ ಕಟ್ಟಡ ಹಾಗೂ ಸುಮಾರು 67.63 ಲಕ್ಷ ರೂ ವೆಚ್ಚದ ಜಿಡ್ಡಿ ಹಳ್ಳಕ್ಕೆ ಸೇತುವೆ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಮತಕ್ಷೇತ್ರದ ಹಾಗೂ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರದ ಮೇಲೆ ಒತ್ತಡ ಹಾಕಿ ಅನುದಾನ ತರಲಾಗಿದೆ ಎಲ್ಲರೂ ಸಹಕಾರದಿಂದ ಗುಣಮಟ್ಟದ ಕಾಮಗಾರಿ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಚುನಾವಣಾ ಪೂರ್ವದಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ವಿರೋಧ ಪಕ್ಷದ ಶಾಸಕನಾಗಿ ಹಂತಹಂತವಾಗಿ ಅನುದಾನವನ್ನು ತಂದು ಸಾರ್ವಜನಿಕರ, ಮುಖಂಡರ ಹಾಗೂ ಕಾರ್ಯಕರ್ತರ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನನ್ನದೇ ಆದ ಕನಸಿನ ಯೋಜನೆಗಳನ್ನು ಕಟ್ಟಿಕೊಂಡು ಶಾಸಕನಾಗಿದ್ದೇನೆ, ಪಟ್ಟಣದ ಅಭಿವೃದ್ಧಿಗೆ ಹೊಸ ಅಧ್ಯಾಯ ಪ್ರಾರಂಭವಾಗಿದೆ. ಸುಮಾರು 5 ಕೋಟಿಗೂ ಹೆಚ್ಚು ಅನುದಾನವನ್ನು ತಂದು ಭೂಮಿ ಪೂಜೆ ನೆರವೇರಿಸಲಾಗಿದೆ.
ಕಳೆದ ತಿಂಗಳ ಸಿ.ಸಿ ರಸ್ತೆ ಸೇರಿದಂತೆ ಹಲವಾರು ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಬರುವಂತ ದಿನಗಳಲ್ಲಿ ಸುಮಾರು 8.5ಕೋಟಿ ರೂ ವೆಚ್ಚದ ಪ್ರಜಾಸೌಧ ನಿರ್ಮಾಣ ಮಾಡಿ ವಿವಿಧ ಕಚೇರಿಗಳನ್ನು ತರುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ನೂತನ ತಾಲೂಕಿನಲ್ಲಿ ಬಸ್ಸಿನ ವ್ಯವಸ್ಥೆ ಕಲ್ಪಿಸಲು ಪಟ್ಟಣದಲ್ಲಿ ಬಸ್ ಡಿಪೋ ನಿರ್ಮಾಣಕ್ಕೆ ಪ್ರಯತ್ನ ನಡೆದಿದೆ, ಮಣೂರ ಗ್ರಾಮದ ಹತ್ತಿರ ರಸ್ತೆಯ ಬ್ರಿಡ್ಜ್ ಹಾಳಾಗಿತ್ತು ಅದನ್ನು ಶೀಘ್ರದಲ್ಲಿ ದುರಸ್ತಿಗೋಳಿಸಲಾಗುವುದು, ಅಂಬೇಡ್ಕರ್ ಭವನ, ಬಾಬು ಜಗಜೀವನರಾಂ ಭವನ,ಸಿ.ಸಿ. ರಸ್ತೆ, ಡಾಂಬರ ರಸ್ತೆ, ಶಾಲೆ ಕಟ್ಟಡದ ದುರಸ್ತಿ, ಸಾರಿಗೆ ಸೇರಿದಂತೆ ಹಲವಾರು ಮೂಲಭೂತ ಕಾಮಗಾರಿಗಳನ್ನು ಕ್ಷೇತ್ರದ ಹಲವಾರು ಗ್ರಾಮಗಳಲ್ಲಿ ನಿರ್ಮಾಣ ಕಾರ್ಯ ಬರದಿಂದ ಸಾಗಿದೆ. ದೇವರ ಹಿಪ್ಪರಗಿ ಕ್ಷೇತ್ರದ ಜನರ ಆಶೀರ್ವಾದದಿಂದ ಶಾಸಕನಾಗಿದ್ದೇನೆ. ನಿಮ್ಮೆಲ್ಲರ ಸಹಕಾರದಿಂದ ಇಷ್ಟೆಲ್ಲ ಕೆಲಸ ಮಾಡಲು ಆಶೀರ್ವದಿಸಿದ್ದೀರಿ. ಸುಮಾರು ದಶಕಗಳ ಕಾಲ ಮತಕ್ಷೇತ್ರ ಸುತ್ತಿದ್ದೇನೆ, ಪ್ರತಿ ಗ್ರಾಮದ ಸಮಸ್ಯೆಗಳನ್ನು ಅರಿತಿದ್ದೇನೆ,ಕ್ಷೇತ್ರದ ಪ್ರತಿ ಗ್ರಾಮದಲ್ಲೂ ನನ್ನ ಕನಸಿನ ಯೋಜನೆಗಳನ್ನು ಕಾರ್ಯಗತಗೊಳಿಸುವ ಮೂಲಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹೊಸ ಅಧ್ಯಾಯ ಪ್ರಾರಂಭವಾಗಿದೆ ಎಂದು ಹೇಳಿದರು.ಪಟ್ಟಣದಲ್ಲಿ ಆಧುನಿಕ ಶೈಲಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡುವ ಮೂಲಕ ಸಮುದಾಯ ಅದರ ಸದ್ಬಳಕೆಗೆ ಮುಂದಾಗಬೇಕು ಎಂದರು.
ಪ.ಪಂ ಉಪಾಧ್ಯಕ್ಷರಾದ ರಮೇಶ ಮಸಿಬಿನಾಳ ಅವರು ಮಾತನಾಡಿ, ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಅಧ್ಯಕ್ಷರು ಸೇರಿದಂತೆ ಸರ್ವ ಸದಸ್ಯರು ಶಾಸಕರಿಗೆ ಸಹಕರಿಸುತ್ತೇವೆ. ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಬೇಡ ಪಟ್ಟಣದ ಅಭಿವೃದ್ಧಿಗೆ ಪಕ್ಷಾತೀತವಾಗಿ ಎಲ್ಲರೂ ಕೈಜೋಡಿಸೋಣ. ರಾಜ್ಯ ಸರ್ಕಾರ ಅಭಿವೃದ್ಧಿ ವಿಷಯದಲ್ಲಿ ಮಲತಾಯಿ ಧೋರಣೆ ಮಾಡದೆ ನೂತನ ತಾಲೂಕುಗಳ ಅಭಿವೃದ್ಧಿಗೆ ಅನುದಾನ ನೀಡಬೇಕು ಎಂದು ಹೇಳಿದರು.ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷರಾದ ರೀಯಾಜ ಯಲಿಗಾರ ಹಾಗೂ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷರಾದ ಸಾಯಿಬಣ್ಣ ಬಾಗೇವಾಡಿ ಅವರು ಮಾತನಾಡಿ, ಪಟ್ಟಣದಲ್ಲಿ ಪ್ರಜಾಸೌಧ ನಿರ್ಮಾಣ ಮಾಡಿ ತಾಲೂಕು ಕಚೇರಿಗಳನ್ನು ಆರಂಭಿಸುವ ಮೂಲಕ ನೂತನ ತಾಲೂಕಿನ ಅಭಿವೃದ್ಧಿಗೆ ಶಾಸಕರು ಪ್ರಯತ್ನಿಸುತ್ತಿದ್ದಾರೆ ನಾವೆಲ್ಲರೂ ಸಹಕರಿಸೋಣ. ವಿರೋಧ ಪಕ್ಷದ ಶಾಸಕರಿದ್ದರು ಕ್ಷೇತ್ರದ ಪ್ರತಿ ಗ್ರಾಮಗಳ ಸಮಸ್ಯೆಗಳನ್ನು ಶಾಸಕರು ಅರಿತಿದ್ದಾರೆ. ಬರುವಂತ ದಿನಗಳಲ್ಲಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಶ್ರೀ ಸಿದ್ದೇಶ್ವರ ಶಾಲೆಯ ವಿದ್ಯಾರ್ಥಿನಿ ನಂದಿತಾ ಸಿಂದಗಿ (615/625) ಅವರಿಗೆ ಸನ್ಮಾನಿಸಿದ್ದು ವಿಶೇಷವಾಗಿತ್ತು.
ಇದೇ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷರಾದ ಜಯಶ್ರೀ ಬಸವರಾಜ ದೇವಣಗಾಂವ, ಪ.ಪಂ ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟ, ತಾ.ಪಂ ಇಒ ಭಾರತಿ ಚೆಲುವಯ್ಯ, ಲ್ಯಾಂಡ್ ಆರ್ಮಿ ಎಇಇ ರಾಜಶೇಖರ, ಯೋಜನಾ ನಿರ್ದೇಶಕರು ಇಇ ವಿದ್ಯಾಧರ ನ್ಯಾಮಗೊಂಡ, ಪಿಡಬ್ಲ್ಯೂಡಿ ಅಧಿಕಾರಿ ಅರವಿಂದ್ ಬಿರಾದಾರ, ಮುಖಂಡರುಗಳಾದ ಶೇಖರಗೌಡ ಪಾಟೀಲ, ಸಂಗನಗೌಡ ಪಾಟೀಲ, ಜಬ್ಬಾರ ಮೋಮಿನ್, ಭಾಸ್ಕರ್ ಗುಡಿಮನಿ, ಮುನ್ನಾ ಮಳಖೇಡ, ಗುರುರಾಜ ಆಕಳವಾಡಿ, ಚನ್ನವೀರ್ಪ ಕುದರಿ, ಎ.ಡಿ.ಮುಲ್ಲಾ, ಕಾಸು ವಡ್ಡೋಡಗಿ, ವೀರೇಶ್ ಕುದುರಿ, ಸುನಿಲ್ ಮಾಗಿ, ಮಡುಸೌಕಾರ ಬಿರಾದಾರ, ಶರಣು ಧರಿ, ಕಾಸು ಗೌಡ ಬಿರಾದಾರ ಜಲಕತ್ತಿ, ಪ್ರಕಾಶ ಮಲ್ಹಾರಿ, ಗುತ್ತಿಗೆದಾರರಾದ ವ್ಹಿ.ಎಸ್.ನಾಡಗೌಡ, ರಮೇಶ ಬಿರಗೊಂಡ ಸೇರಿದಂತೆ ಪ.ಪಂ ಸದಸ್ಯರು, ಪಟ್ಟಣದ ಪ್ರಮುಖರು, ಗಣ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.