ಸ.ಹಿ.ಪ್ರಾ ಶಾಲೆಯ ಕೊಠಡಿ ಕಾಮಗಾರಿಗೆ ಶಾಸಕ ಬಿ.ಎಂ.ನಾಗರಾಜ ಶಂಕುಸ್ಥಾಪನೆ
ಕಂಪ್ಲಿ 08: ಈಗಾಗಲೇ ತುಂಗಭದ್ರಾ ಜಲಾಶಯದ ಕ್ರಸ್ ಗೇಟ್ 19ರ ದುರಸ್ಥಿಗಾಗಿ ಟೆಂಡರ್ ಬಿಡ್ ಆಗಿದ್ದು, ನಂತರ ತೆಗೆದುಕೊಂಡ ಗುತ್ತಿಗೆದಾರರು 2026ರ ಫೆಬ್ರವರಿ ತಿಂಗಳೊಳಗಾಗಿ ಕಾಮಗಾರಿ ಮುಗಿಸಿಕೊಡುವ ಸಾಧ್ಯತೆ ಇದೆ ಎಂದು ಸಿರುಗುಪ್ಪ ಶಾಸಕ ಬಿ.ಎಂ.ನಾಗರಾಜ ಹೇಳಿದರು.
ತಾಲೂಕು ಸಮೀಪದ ಎಂ.ಸೂಗೂರು ಗ್ರಾಮದ ಸ.ಹಿ.ಪ್ರಾ ಶಾಲೆಯ ಶಾಲಾ ಕೊಠಡಿ 26ಲಕ್ಷ ರೂಪಾಯಿ ಮತ್ತು ಮಣ್ಣೂರು ಗ್ರಾಮದಲ್ಲಿ ಪಂಚಾಯತ್ ರಾಜ್ ಅನುದಾನದಡಿಯಲ್ಲಿ ಸುಮಾರು 1 ಕೋಟಿ ವೆಚ್ಚದಲ್ಲಿ ಮಣ್ಣೂರು ಗ್ರಾಮದ ಎಸ್.ಟಿ.ಕಾಲೋನಿಯಲ್ಲಿ ಸಿಸಿ ರಸ್ತೆ, ಚರಂಡಿ(ಇಂಟರ್ ಲಾಕ್) ಕಾಮಗಾರಿಗೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಕಳೆದ ವರ್ಷ ಜಲಾಶಯದ 19ನೇ ಕ್ರಸ್ ಗೇಟ್ ಕಟ್ ಆಗಿ, ಅಪಾರ ಪ್ರಮಾಣದ ನೀರು ಪೋಲಾದರೂ, ಮಳೆರಾಯನ ಕೃಪೆಯಿಂದ ಮತ್ತೇ ತುಂಗಭದ್ರೆ ಒಡಲು ತುಂಬಿದ ಹಿನ್ಮಲೆ ರೈತರಿಗೆ ನೀರಿನ ತೊಂದರೆಯಾಗಿಲ್ಲ.
ಪ್ರಸಕ್ತ ವರ್ಷದಲ್ಲಿ 25 ಟಿಎಂಸಿ ನೀರು ಇರುವುದರಿಂದ ಈಗ ಕುಡಿಯಲಿಕ್ಕೆ ನೀರಿನ ಸಮಸ್ಯೆ ಇಲ್ಲ. ಆದರೆ, ಮುಂಗಾರು ಮಳೆಗಳು ಸಮೃದ್ಧಿಯಾಗಿ ಬೀಳುವ ವಿಶ್ವಾಸವಿದೆ. ಆದ್ದರಿಂದ ಈ ಬಾರಿ ರೈತರಿಗೆ ನೀರಿನ ಸಮಸ್ಯೆ ತಲೆ ದೋರುವ ಲಕ್ಷಣ ಇಲ್ಲ. ಈಗಾಗಲೇ ಹೊಸ ಗೇಟ್ ಅಳವಡಿಕೆಗೆ ಟೆಂಡರ್ ಬಿಡ್ ಆಗಿದ್ದಿ, ಕೆಲ ದಿನದಲ್ಲಿ ಬಿಡ್ ತೆರೆಯಲಿದ್ದಾರೆ. ನಂತರ ಕಾಮಗಾರಿ ಕೈಗೊಳ್ಳುವ ನಿರ್ಧಾರ ಸ್ಪಷ್ಟವಾಗಿ ನಿರ್ಧಾರವಾಗಲಿದೆ. ಅನುದಾನ ತಂದು, ರಸ್ತೆಗಳನ್ನು ಅಭಿವೃದ್ಧಿ ಪಡಿಸುತ್ತೇವೆ. ಆದರೆ, ಟ್ರಾಕ್ಟರ್ ವೀಲ್ ಹಾಕುವುದರಿಂದ ರಸ್ತೆಗಳು ಹಾಳಾಗುತ್ತಿದ್ದು, ವೀಲ್ ಹಾಕುವುದನ್ನು ಬಿಡುವ ಮೂಲಕ ನಿಮ್ಮ ರಸ್ತೆಗಳನ್ನು ಉಳಿಸಿಕೊಳ್ಳಬೇಕು ಎಂದರು.
ಇಲ್ಲಿನ ಎಂ.ಸೂಗೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಕೆಆರ್ ಡಿಬಿಯ ಯೋಜನೆಯಡಿ ಸುಮಾರು 26 ಲಕ್ಷ ವೆಚ್ಚದ 2 ಹೆಚ್ಚುವರಿ ಶಾಲಾ ಕೊಠಡಿ ಕಾಮಗಾರಿಗೆ ಅಡಿಗಲ್ಲು ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಬಸವರಾಜ, ಸದಸ್ಯರಾದ ಈರಣ್ಣ, ಗಂಗಣ್ಣ, ಹುಲುಗಪ್ಪ, ಸೋಮಪ್ಪ, ಮುಖಂಡರಾದ ಜೆ.ಮಂಜುನಾಥ, ನಾಗರಾಜ, ಗಣೇಶ, ಕರಿಬಸಪ್ಪ, ಕಾಂತರಾಜ್, ಜಿ.ಹನುಮಂತಪ್ಪ, ಕರಿಯಪ್ಪ, ಕೆ.ಅಂಜಿನಪ್ಪ, ಜಿ.ದೊಡ್ಡಬಸಪ್ಪ, ಎಂ.ವಿರೇಶ ಸೇರಿದಂತೆ ಸ್ಥಳೀಯ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.