ಯರಗಟ್ಟಿ 12: ರೈತರ ಮೊದಲ ಹಬ್ಬ ಕಾರಹುಣ್ಣಿಮೆ ನಿಮಿತ್ಯ ಬುಧವಾರ ರೈತರು ತಮ್ಮ ಎತ್ತುಗಳಿಗೆ ಅಲಂಕಾರಿಕ ವಸ್ತುಗಳನ್ನು ಖರೀದಿಸಿ ಅಲಂಕರಿಸಿದರು.
ಎತ್ತುಗಳಿಗೆ ಅಲಂಕರಿಸುವ ಮಗಡ, ಮುಗಧಾರ, ಕೊರಳಲ್ಲಿ ಕಟ್ಟುವ ಲಡ್ಡು, ಕೋಡಿಗೆ ಅಲಂಕರಿಸುವ ಗೊಂಡೆ, ಗಾಡಿಗೆ ಅಲಂಕರಿಸುವ ವಿವಿಧ ಶೃಂಗಾರ ಸಾಮಾನುಗಳ ಖರೀದಿ ಜೋರಾಗಿ ನಡೆಯಿತು.ಕರಿಹರಿಯುವ ವಿಶೇಷ ಹಬ್ಬ: ಕಾರ ಹುಣ್ಣಿಮೆ ದಿನ ಅಲಂಕಾರಗೊಳಿಸಿದ ಜೋಡೆತ್ತುಗಳನ್ನು ಸಮೀಪದ ಮುಗಳಿಹಾಳ ಗ್ರಾಮದಲ್ಲಿ ತಂದು ಅಗಸಿಗೆ ಕಟ್ಟಿರುವ ಬೇವಿನ ತಪ್ಪಲಿನ ತೋರಣ ಹರಿದುಕೊಂಡು ಮುನ್ನುಗ್ಗುವ ಆಟ ಇದಾಗಿದ್ದು, ಯಾವ ಎತ್ತು ಮೊದಲು ಮುಂದು ಬರುತ್ತದೆ. ಆ ಎತ್ತಿಗೆ ರೈತರು ಹಿಂಗಾರು ಮತ್ತು ಮುಂಗಾರು ಎಂದು ಪರಿಗಣಿಸುತ್ತಾರೆ. ಈ ಆಟಕ್ಕೆ ರೈತರು ತಮ್ಮ ಎತ್ತುಗಳೊಂದಿಗೆ ಅಗಸಿಗೆ ಬಂದು ಅವುಗಳಿಗೆ ಹುರಿದುಂಬಿಸಿ ಓಡಿಸುತ್ತಾರೆ. ರೈತರ ಹಬ್ಬವಾದ ಕಾರಹುಣ್ಣಿಮೆಆಚರಿಸಲಾಗುತ್ತಿದೆ. ಗಾಡಿ ( ಎತ್ತಿನಬಂಡಿ) ಅಲಂಕರಿಸಿದ್ದಾರೆ.
ಕೃಷಿ ಕೆಲಸಕ್ಕೆ ಬಳಸುವ ವಸ್ತುಗಳ ಪೂಜೆ: ಉಳುಮೆಗೆ ಬಳಸುವ ನೇಗಿಲು, ಕುಂಟೆ, ಗಾಡಿ, ಬಾರಕೋಲು ಮತ್ತು ಇನ್ನಿತರ ಸಾಮಾನುಗಳಿಗೆ ಹುರಮಂಜು ಇಲ್ಲವೆ ಗುಲಾಲು ಹಚ್ಚಿ ಸಿಂಗರಿಸಿ ಪೂಜೆ ಮಾಡಲಾಗುತ್ತದೆ.
ಪ್ರಸಕ್ತ ವರ್ಷ ಬಿತ್ತನೆಗೆ ಅಗತ್ಯವಿದ್ದಷ್ಟು ತೇವಾಂಶವಾಗಿದ್ದು, ಹೆಚ್ಚಿನ ರೈತರು ಹಬ್ಬದ ದಿನದಂದೇ ಮುಂಗಾರು ಬಿತ್ತನೆಗೆ ಚಾಲನೆ ನೀಡಿದರು. ಊರಿನ ಹಿರಿಯರು, ಯುವಕರು ಮತ್ತಿತರರು ಇದ್ದರು.