ಅ.18ರಂದು ಕಲಾ ಮಹಾವಿದ್ಯಾಲಯದಲ್ಲಿ ಉದ್ಯೋಗ ಮೇಳ: ಅರುಣ ಕುಮಾರ

ಬಾಗಲಕೋಟ 17: ಸಮಥಂರ್ ಅಂಗವಿಕಲರ ಸಂಸ್ಥೆ ಹಾಗೂ ಬಸವೇಶ್ವರ ಕಲಾ ಮಹಾವಿದ್ಯಾಲಯ ಹಾಗೂ ಉದ್ಯೋಗ ವಿನಿಮಯ ಕಚೇರಿ ಸಹಯೋಗದಲ್ಲಿ ಅ.18ರಂದು  ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು ಉದ್ಯೋಗ ಆಕಾಂಕ್ಷಿಗಳು ಸದುಪಯೋಗ ಪಡೆದುಕೊಳ್ಳಬೇಕೆಂದು ಸಮರ್ಥನಂ ಸಂಸ್ಥೆಯ ಶಾಖಾ ಮುಖ್ಯಸ್ಥರಾದ ಅರುಣ ಕುಮಾರ ಎಮ್‌.ಜಿ ಹೇಳಿದರು. 

ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರತಿಭಾವಂತ ಅಂಗವಿಕಲರಿಗೆ ಮತ್ತು ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ಉದ್ಯೋಗ ಮೇಳವನ್ನು ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಹಳೆಯ ಕ್ಯಾಂಪಸ್ ನಲ್ಲಿ  ಹಮ್ಮಿಕೊಳ್ಳಲಾಗಿದೆ. ಮೇಳದಲ್ಲಿ 33  ಸಂಸ್ಥೆಗಳು ಭಾಗವಹಿಸಲಿದ್ದು 2480 ಹುದ್ದಗಳಿಗೆ ನೇಮಕಾತಿ ಸಂದರ್ಶನ ನಡೆಯಲಿದ್ದು ದಿವ್ಯಾಂಗಿಗಳು, ಅಂಗವಿಕಲರು ಮತ್ತು ಸಾಮಾನ್ಯ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು ಎಂದರು. 

ಈಗಾಗಲೇ 520 ಉದ್ಯೋಗ ಆಕಾಂಕ್ಷಿಗಳು ಆನಲೈನ್  ಮೂಲಕ ನೋಂದಣಿ ಮಾಡಿಕೊಂಡಿದ್ದು ಆಸಕ್ತರು ನೇರವಾಗಿ ಸಂದರ್ಶನಕ್ಕೆ ಹಾಜರಾಗಿ ಹೆಸರು ನೋಂದಾಯಿಸಬಹುದು. ದಿವ್ಯಾಂಗ ಮತ್ತು ಅಂಗವಿಕಲರಿಗೆ ಪ್ರತ್ಯೇಕ ಸಂದರ್ಶನ ವ್ಯವಸ್ಥೆಯನ್ನು ಮಾಡಲಾಗಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೋಮಾ ಮತ್ತು ಯಾವುದೇ ಪದವಿ ಪಡೆದ ಉದ್ಯೋಗ ಆಕಾಂಕ್ಷಿಗಳು ದಾಖಲಾತಿಗಳ ಸಮೇತ ಸಂದರ್ಶನಕ್ಕೆ ಹಾಜರಾಗಬಹುದು ಎಂದರು. 

ಸಮರ್ಥನಂ ಸಂಸ್ಥೆಯ ಬೆಳಗಾವಿ ವಿಭಾಗದಿಂದ ಕಳೆದ ಕೆಲವು ವರ್ಷಗಳಲ್ಲಿ 14 ಉದ್ಯೋಗ ಮೇಳಗಳನ್ನು ಹಮ್ಮಿಕೊಳ್ಳಲಾಗಿದ್ದು ಶೆ. 35ಅ ಪ್ರತಿಶತದಷ್ಟು ಆಕಾಂಕ್ಷಿಗಳಿಗೆ ಉದ್ಯೋಗ ಲಭ್ಯವಾಗಿದೆ. ಶೆ.10 ಪ್ರತಿಶತದಷ್ಟು ಜನರು ಉದ್ಯೋಗ ಮಾಡುತ್ತಿದ್ದಾರೆ. ಈ ಭಾರಿ ನಡೆಯುತ್ತಿರುವ ಮೇಳದಲ್ಲಿ ಸ್ಥಳಿಯ ಸಂಸ್ಥೆಯ ಜೊತೆಗೆ ರಾಜ್ಯದ ಪ್ರತಿಷ್ಠಿತ ಕಂಪನಿಗಳು ಪಾಲ್ಗೊಳ್ಳುತ್ತಿದ್ದು ಬಾಗಲಕೋಟೆ ಮತ್ತು ಸುತ್ತಲಿನ ಜಿಲ್ಲೆಯ ಯುವಕ ಯುವತಿಯರು ಸದುಪಯೋಗ ಪಡೆದುಕೊಳ್ಳಬೇಕು ಎಂದವರು ಹೇಳಿದರು. 

ಸುದ್ದಿಗೋಷ್ಠಿಯಲ್ಲಿ ಕಲಾ ಮಹಾವಿದ್ಯಾಲಯದ ಪ್ಲೇಸಮೆಂಟ್ ಸೆಲ್ ಅಧಿಕಾರಿ ಎಸ್‌.ವಿ ಕಟ್ಟಿ, ಐಕ್ಯೂಎಸಿ ಸಂಯೋಜಕ ಡಾ.ಎ.ಯು ರಾಠೋಡ, ಪಂಡಿತ. ಬಿ, ದೀಪಾ ಈಟಿ, ಪ್ರಾಧ್ಯಾಪಕರುಗಳಾದ ಐ.ಬಿ ಚಿಕ್ಕಮಠ, ಮಹಾಂತೇಶ ದೊಡವಾಡ ಉಪಸ್ಥಿತರಿದ್ದರು.