ಕಡ್ಡಾಯವಾಗಿ ನೀರಿನ ಮೂಲಗಳ ಸುರಕ್ಷತೆ ಖಚಿತ ಪಡಿಸಿಕೊಳ್ಳಿ: ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್

ಕಡ್ಡಾಯವಾಗಿ ನೀರಿನ ಮೂಲಗಳ ಸುರಕ್ಷತೆ ಖಚಿತ ಪಡಿಸಿಕೊಳ್ಳಿ: ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್ It is imperative to ensure the safety of water sources: ZP CEO Muhammad Harris Sumair

ಬಳ್ಳಾರಿ  19: ಮಾನ್ಸೂನ್ ಮಳೆ ಆರಂಭವಾದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಮೂಲಗಳು ಕಲುಷಿತಗೊಳ್ಳುವ ಸಾಧ್ಯತೆಗಳು ಇರುವುದರಿಂದ ಎಲ್ಲ ಗ್ರಾಮಗಳಲ್ಲಿಯ ಕುಡಿಯುವ ನೀರಿನ ಮೂಲಗಳಾದ ಕೆರೆ, ಬಾವಿ, ಕೊಳವೆಬಾವಿ ಮುಂತಾದವುಗಳ ಸುರಕ್ಷತೆಯ ಕುರಿತು ಸಂಬಂಧಿಸಿದ ಅಧಿಕಾರಿಗಳು ಖಚಿತ ಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರೀಸ್ ಸುಮೈರ್ ಅವರು ತಿಳಿಸಿದರು. 

ಗುರುವಾರದಂದು, ಕುಡಿಯುವ ನೀರು ಸರಬುರಾಜು, ಶುದ್ಧೀಕರಣ, ತಾಂತ್ರಿಕ ಬೆಂಬಲ ನೀಡುವುದರ ಕುರಿತು ಸಂಬಂಧಿಸಿದ ಕಾರ್ಯನಿರ್ವಾಹಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಕೈಗೊಂಡು ಅವರು ಮಾತನಾಡಿದರು. 

ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸಂಭಾವ್ಯ ವಾಂತಿ-ಭೇದಿ ಪ್ರಕರಣಗಳು ಸಂಭವಿಸದಂತೆ ಕೆರೆ, ಕೈ-ಪಂಪು, ಕೊಳವೆ ಬಾವಿಗಳ ಸುತ್ತಮುತ್ತ ಸ್ವಚ್ಛತೆ, ನೀರಿನ ಮೂಲಗಳ ಹತ್ತಿರವಿರುವ ಮುಖ್ಯ ವಾಲ್‌ಗಳು (ರೈಸಿಂಗ್ ವಾಲ್) ಮತ್ತು ಸರಬರಾಜು ಪೈಪ್‌ಲೈನ್ ಸೋರಿಕೆ ಪತ್ತೆಹಚ್ಚುವಿಕೆ ಹಾಗೂ ದುರಸ್ಥಿ, ಓವರ್‌ಹೆಡ್ ಟ್ಯಾಂಕ್ ಒಳಗಡೆ ಮತ್ತು ಹೊರಗಡೆ ಸುತ್ತಮುತ್ತ ಸ್ವಚ್ಛಗೊಳಿಸುವುದು. ಶುದ್ಧ ನೀರಿನ ಘಟಕ ನಿರ್ವಹಣೆ, ತೆರೆದ ಬಾವಿಗಳ ನಿರ್ವಹಣೆ, ಎಲ್ಲಾ ನೀರಿನ ಮೂಲಗಳನ್ನು ಸ್ವಚ್ಛಗೊಳಿಸಿ ಶೇ.33 ಕ್ಲೋರಿನ್ ಅಂಶವಿರುವ ಗುಣಮಟ್ಟದ ಬ್ಲೀಚಿಂಗ್ ಪೌಡರ್‌ನಿಂದ ಕ್ಲೋರಿನೇಷನ್ ಮಾಡಿಸಿ ಜೈವಿಕ ಪರೀಕ್ಷೆಗೆ ಒಳಪಡಿಸಿದ ನಂತರ ಕುಡಿಯಲು ಯೋಗ್ಯವೆಂದು ವರದಿ ಬಂದ ನಂತರವೇ ಸಾರ್ವಜನಿಕರಿಗೆ ಅನಾನೂಕಲತೆಯಾಗದ ಸಮಯದಲ್ಲಿ ವಿದ್ಯುತ್ ಸರಬರಾಜು ಇರುವ ಕುರಿತು ಖಾತ್ರಿಪಡಿಸಿಕೊಂಡು ನೀರು ಸರಬರಾಜು ಮಾಡಲು ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.  

ಶಾಲಾ ಆವರಣದಲ್ಲಿಯ ನೀರಿನ ಸಂಗ್ರಹಕಗಳ ನೀರನ್ನು ಪರೀಕ್ಷೆಗೆ ಒಳಪಡಿಸಿ ಅಶುದ್ದವೆಂದು ಕಂಡು ಬಂದಲ್ಲಿ ತಕ್ಷಣವೇ ನಿಯಮಾನುಸಾರ ಕ್ಲೋರಿನೇಷನ್ ಕೈಗೊಳ್ಳಬೇಕು ಎಂದರು. 

ಈ ಸಂಧರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ ಬಾಬು, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ., ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಹಾಗೂ ಪ್ರಭಾರಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಆರ್‌.ಅಬ್ದುಲ್ಲಾ ಸೇರಿದಂತೆ ಗ್ರಾಮೀಣ ನೀರು ಸರಬರಾಜು ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಸ್ಥಳೀಯ ಸಂಸ್ಥೆಗಳ ಅಧಿಕಾರಿ, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಸೇರಿದಂತೆ ಇತರರು ಭಾಗವಹಿಸಿದ್ದರು.