ಭಾರತದ ಡೇಟಾವು ಭಾರತೀಯ ಡೇಟಾ ಕೇಂದ್ರಗಳಲ್ಲಿಯೇ ಇರಬೇಕು: ಆಕಾಶ್ ಅಂಬಾನಿ

ನವದೆಹಲಿ, 15: ಭಾರತದ ಡೇಟಾವನ್ನು ಭಾರತೀಯ ಡೇಟಾ ಕೇಂದ್ರಗಳಲ್ಲಿಯೇ ಇರಿಸಬೇಕು ಎಂದು ರಿಲಯನ್ಸ್‌ ಜಿಯೋದ ಅಧ್ಯಕ್ಷರಾದ ಆಕಾಶ್ ಅಂಬಾನಿ ಅವರು ಪ್ರತಿಪಾದನೆ ಮಾಡಿದ್ದಾರೆ.  

ದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್‌- 2024ರಲ್ಲಿ ಭಾಗವಹಿಸಿದ್ದ ಅವರು ಈ ಅಭಿಪ್ರಾಯ ಪಟ್ಟರು. ಭಾರತದಲ್ಲಿ ಡೇಟಾ ಉತ್ಪಾದನೆ ಪ್ರಮಾಣ ಹಾಗೂ ವೇಗ ಎರಡೂ ತೀವ್ರವಾಗಿ ಹೆಚ್ಚಾಗಿದೆ. ಇನ್ನು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ ನೊಂದಿಗೆ (ಕೃತಕ ಬುದ್ಧಿಮತ್ತೆ) ಇದು ಇನ್ನಷ್ಟು ವೇಗವನ್ನು ಪಡೆದುಕೊಳ್ಳುತ್ತದೆ. ಈ ಕಾರಣದಿಂದ ದೇಶದಲ್ಲಿಯೇ ಎಐ ಹಾಗೂ ಮಶೀನ್ ಲರ್ನಿಂಗ್ ಡೇಟಾ ಸೆಂಟರ್ ಗಳನ್ನು ಸ್ಥಾಪಿಸುವ ಅಗತ್ಯವಿದೆ. ಇದಕ್ಕಾಗಿ ಭಾರತೀಯ ಕಂಪನಿಗಳಿಗೆ ಸರ್ಕಾರದಿಂದ ಪ್ರೋತ್ಸಾಹ ಸಿಗಬೇಕು. ದತ್ತಾಂಶ ಕೇಂದ್ರ ನೀತಿ- 2020ರ ಕರಡನ್ನು ಶೀಘ್ರದಲ್ಲಿಯೇ ನವೀಕರಿಸಬೇಕು ಎಂದು ಅವರು ಸರ್ಕಾರನ್ನು ಮನವಿ ಮಾಡಿದರು.    ಆಕಾಶ್ ಅಂಬಾನಿ ಅವರು ಮಾತು ಮುಂದುವರಿಸಿ, “ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸಲು ಕೃತಕ ಬುದ್ಧಿಮತ್ತೆ (ಂಋ) ಅತ್ಯಂತ ಮುಖ್ಯವಾಗಿದೆ. ಮತ್ತು ಕೃತಕ ಬುದ್ಧಿಮತ್ತೆಯ ಪ್ರಯೋಜನಗಳನ್ನು ಪ್ರತಿ ಭಾರತೀಯರಿಗೂ ತಲುಪಿಸಲು ಜಿಯೋ ಪ್ರಯತ್ನಗಳನ್ನು ಆರಂಭಿಸಿದೆ. ನಾವು ಮೊಬೈಲ್ ಬ್ರಾಡ್‌ಬ್ಯಾಂಡ್‌ನೊಂದಿಗೆ ಮಾಡಿದಂತೆಯೇ ಕೈಗೆಟುಕುವ ಬೆಲೆಯಲ್ಲಿ ಶಕ್ತಿಯುತವಾದ ಎಐ ಮಾದರಿಗಳು ಮತ್ತು ಸೇವೆಗಳನ್ನು ತಲುಪಿಸಲು ಬದ್ಧರಾಗಿದ್ದೇವೆ. ಇದಕ್ಕಾಗಿ, ನಾವು ರಾಷ್ಟ್ರೀಯ ಎಐ ಮೂಲಸೌಕರ್ಯದ ಆಧಾರ ಸಿದ್ಧಪಡಿಸುತ್ತಿದ್ದೇವೆ ಎಂದು ಹೇಳಿದರು.   ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವವನ್ನು ಶ್ಲಾಘಿಸಿದ ಆಕಾಶ್ ಅಂಬಾನಿ, “ಇಂದು ಭಾರತೀಯ ಮೊಬೈಲ್ ಕಂಪನಿಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ಸ್ಟಾರ್ಟ-ಅಪ್ ಪರಿಸರ ವ್ಯವಸ್ಥೆಯಿಂದಾಗಿ ಭಾರತವು ಅಭಿವೃದ್ಧಿ ಹೊಂದಿದ ದೇಶಗಳು ಸೇರಿದಂತೆ ಜಗತ್ತಿಗೆ ಎಐ ಸಲ್ಯೂಷನ್ ಗಳನ್ನು ಒದಗಿಸಬಹುದು. ಸರ್ಕಾರವು ಉದ್ಯಮ ಮತ್ತು ನಾವೀನ್ಯತೆಗೆ ಹೆಚ್ಚು ಪ್ರೋತ್ಸಾಹ- ಉತ್ತೇಜನ ನೀಡುವುದರಿಂದ ಭಾರತದಲ್ಲಿ ಅತಿದೊಡ್ಡ ಡಿಜಿಟಲ್ ಕ್ರಾಂತಿ ಸಂಭವಿಸಿದೆ. ನವ ಭಾರತದಲ್ಲಿ ಈಗ ವ್ಯಾಪಾರ ಸಂಪೂರ್ಣ ಬದಲಾಗಿದೆ. 145 ಕೋಟಿ ಭಾರತೀಯರ ಅಗತ್ಯಗಳು ಮತ್ತು ನೀರೀಕ್ಷೆಗಳನ್ನು ಪೂರೈಸಲು ಸರ್ಕಾರ ಮತ್ತು ಉದ್ಯಮವು ಉತ್ತಮ ಬಾಂಧವ್ಯದಲ್ಲಿ ಕೆಲಸ ಮಾಡುತ್ತಿವೆ ಎಂದು ಅವರು ಹೇಳಿದರು.    

ಭಾರತವು ಮೊಬೈಲ್ ಆವಿಷ್ಕಾರದಲ್ಲಿ ಮುಂಚೂಣಿಯಲ್ಲಿರುತ್ತದೆ. ಆದರೆ ನಾವು ಸಂಪರ್ಕಿತ (ಕನೆಕ್ಟೆಡ್), ಬುದ್ಧಿವಂತ (ಇಂಟೆಲಿಜೆಂಟ್) ಭವಿಷ್ಯಕ್ಕಾಗಿ ಎಐ ಶಕ್ತಿಯನ್ನು ಬಳಸಿಕೊಳ್ಳುತ್ತೇವೆ. ಕಂಪ್ಯೂಟರ್ ಮತ್ತು ಇಂಟರ್‌ನೆಟ್ ಅಳವಡಿಕೆ ಸಮಯದಲ್ಲಿ ಆದಂತೆಯೇ ಇದರಿಂದಲೂ ಉದ್ಯೋಗವೂ ಹೆಚ್ಚಾಗುತ್ತವೆ ಎಂದು ಅವರು ಅಭಿಪ್ರಾಯ ಪಟ್ಟರು.