ಮಾನಸಿಕ ಅಸ್ವಸ್ಥ ಮಹಿಳೆಯನ್ನು ಸಂರಕ್ಷಣೆ ಮಾಡಿ ಮಾನವೀಯತೆ ಮೆರೆದ ಹಿರೇಮನಿ ದಂಪತಿ

ಮಾನಸಿಕ ಅಸ್ವಸ್ಥ ಮಹಿಳೆಯನ್ನು ಸಂರಕ್ಷಣೆ ಮಾಡಿ ಮಾನವೀಯತೆ ಮೆರೆದ ಹಿರೇಮನಿ ದಂಪತಿ Hiremani couple shows humanity by protecting mentally ill woman

ಸಂಬರಗಿ 21:ಶೀಗುಣಸಿ ಗ್ರಾಮದ ಮಹಿಳೆ ಕೌಟುಂಬಿಕ ಕಲಹದಿಂದ ತನ್ನ ಗಂಡನೊಂದಿಗೆ ಮನಸ್ತಾಪ ಮಾಡಿಕೊಂಡ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಸಂರಕ್ಷಣೆ ಮಾಡಿ ಮಾಹಿತಿ ಸಂಗ್ರಹಿಸಿ ಪೊಲೀಸರ ಸಹಕಾರದೊಂದಿಗೆ ಅವರ ಕುಟುಂಬಕ್ಕೆ ಒಪ್ಪಿಸುವ ಮೂಲಕ ನಿಜಪ್ಪ ಹಿರೇಮನಿ ದಂಪತಿ ಮಾನವೀಯತೆ ಮೆರೆದಿದ್ದಾರೆ. ಅವರು ಗ್ರಾಮಕ್ಕೆ ಹೋಗಿ ಒಪ್ಪಿಸಿ ಬಂದಿದ್ದಾರೆ ಗ್ರಾಮಸ್ಥರು ಅಭಿನಂದಿಸಿದ್ದಾರೆ.    ಅಥಣಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಕೆಲವು ದಿನಗಳ ಹಿಂದೆಮಧ್ಯರಾತ್ರಿ ಈ ಒಂಟಿ ಮಹಿಳೆ ತಿರುಗಾಡುವುದನ್ನು ಕಂಡು ಸಾರ್ವಜನಿಕರು ಅನಾಥ ಮಕ್ಕಳ ಮತ್ತು ನಿರ್ಗತಿಕರ ಸಂರಕ್ಷಣಾ ಸಂಸ್ಥೆ ನಡೆಸುತ್ತಿರುವ ನಿಜಪ್ಪ ಹಿರೇಮನಿ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು. ಕೊನೆಗೂ ವರ್ಷಗಳಿಂದ ನಿರ್ಗತಿಕರ ಮತ್ತು ಅನಾಥ ಮಕ್ಕಳ ಸಂರಕ್ಷಣೆ ಮಾಡುತ್ತಿರುವ ಹಿರೇಮನಿ ದಂಪತಿಗಳು ಮೊದಲು ಪೊಲೀಸ್ ಠಾಣೆಗೆ ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಿ, ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಆ ಮಹಿಳೆಗೆ ತಮ್ಮ ಕೃಪಾ ಮತ್ತು ಆರೋಗ್ಯ ಸೇವಾ ಸಂಸ್ಥೆಯಲ್ಲಿ ಆಶ್ರಯ ನೀಡಿದ್ದಾರೆ. 

ಮಾನಸಿಕವಾಗಿ ಅಸ್ವಸ್ಥ ಗೊಂಡ ಮಹಿಳೆಯನ್ನು ಅಥಣಿ ತಾಲೂಕಿನ ಶೇಗುಣಸಿ ಗ್ರಾಮದ ಚಂದ್ರವ ಭೀಮಣ್ಣ ಮುಧೋಳ(35 ) ಎನ್ನಲಾಗಿದೆ. ಮಹಿಳೆಯರಿಗೆ ಇಬ್ಬರು ಚಿಕ್ಕ ಮಕ್ಕಳಿದ್ದು, ಅವರು ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದಾರೆ ಎನ್ನಲಾಗಿದೆ.ಬೀದಿ ಕಾಮಣ್ಣರ ಹಾವಳಿ, ಕಳ್ಳರ ಪ್ರಕರಣ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಯಾವುದೋ ಕುಟುಂಬದ ಮಹಿಳೆಯ ಸಮಸ್ಯೆಯನ್ನು, ತಮ್ಮ ಮನೆಯ ಸಮಸ್ಯೆ ಎಂದು ಭಾವಿಸಿ ಆ ಮಹಿಳೆಯನ್ನು ತಮ್ಮ ಸಂಸ್ಥೆಗೆ ಕರೆದುಕೊಂಡು ಬಂದು ಸ್ನಾನ ಮಾಡಿಸಿ, ಬಟ್ಟೆ ನೀಡಿ, ಊಟ ಉಪಚಾರ ಮಾಡಿದ್ದಲ್ಲದೆ, ವೈದ್ಯಕೀಯ ಸೌಲಭ್ಯ ನೀಡಿ 10 ದಿನಗಳ ಕಾಲ ತಮ್ಮ ಸಂಸ್ಥೆಯಲ್ಲಿ ಆಶ್ರಯ ನೀಡಿದ್ದಾರೆ.  

ಈ ಮಹಿಳೆ ಶೇಗುಣಸಿ ಗ್ರಾಮದವಳು ಎಂಬುದು ತಿಳಿದ ನಂತರ ಅಲ್ಲಿನ ಪಿಡಿಓ ಸಚೀನ ಪಾಟೀಲ ಅವರಿಗೆ ಕರೆ ಮಾಡಿ ಕುಟುಂಬಸ್ಥರನ್ನು ಪತ್ತೆಹಚ್ಚಲಾಯಿತು. ಶುಕ್ರವಾರ ಮಹಿಳೆಯ ಸಹೋದರ ಹನುಮಂತ ಹಾಗೂ ಗಂಡನ ಮನೆಯ ಸಂಬಂಧಿಕರನ್ನು ಕರೆಯಿಸಿ ಅಥಣಿ ಪೊಲೀಸ್ ಠಾಣೆಯ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಕುಟುಂಬಸ್ಥರಿಗೆ ಒಪ್ಪಿಸಲಾಯಿತು. ಹಿರೇಮನಿ ದಂಪತಿಗಳು ಮಾಡಿದ ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ನಿಜಪ್ಪ ಹಿರೇಮನಿ, ಅಧ್ಯಕ್ಷರು,ಕೃಪಾ ಆರೋಗ್ಯ ಮತ್ತು ಸಮಾಜ ಸೇವಾ ಸಂಸ್ಥೆ, ಅಥಣಿ.ಅಥಣಿ ಪಟ್ಟಣದಲ್ಲಿ ಮಧ್ಯರಾತ್ರಿ ಒಂಟಿ ಮಹಿಳೆ ಮಾನಸಿಕ ಅಸ್ವಸ್ಥೆಯಾಗಿ ತಿರುಗಾಡುತ್ತಿರುವ ಮಾಹಿತಿಯನ್ನು ಸಾರ್ವಜನಿಕರು ಕರೆ ಮಾಡಿ ತಿಳಿಸಿದಾಗ ನಾವು ಹೋಗಿ ಕರೆದುಕೊಂಡು ಬಂದು ನಮ್ಮ ಸಂಸ್ಥೆಯಲ್ಲಿ ಆಶ್ರಯ ನೀಡಿದ್ದೇವೆ. ಆ ಮಹಿಳೆ ಸುರಕ್ಷಿತವಾಗಿ ಇಂದು ಮತ್ತೆ ಕುಟುಂಬದವರೊಂದಿಗೆ ಸೇರಿಕೊಂಡಿರುವುದು ನಮಗೆ ಸಂತಸ ತಂದಿದೆ.