ಭಾರೀ ಮಳೆ: ಜಲಾವೃತವಾದ ಅಂಡರ್ಪಾಸ್ನಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು
![Heavy rains: Two boys drown in waterlogged underpass ಭಾರೀ ಮಳೆ: ಜಲಾವೃತವಾದ ಅಂಡರ್ಪಾಸ್ನಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು](https://www.lokadarshan.news/uploads/1719697980drowning-istock-1013980-1627499178.jpg?tp=4394)
ನವದೆಹಲಿ 29: ಶುಕ್ರವಾರ ಸುರಿದ ಭಾರೀ ಮಳೆಯಿಂದಾಗಿ ಉತ್ತರ ದೆಹಲಿಯ ಸಮಯಪುರ ಬದ್ಲಿ ಪ್ರದೇಶದಲ್ಲಿ ಶನಿವಾರದಂದು ಜಲಾವೃತವಾದ ಅಂಡರ್ಪಾಸ್ನಲ್ಲಿ ಮುಳುಗಿ ಇಬ್ಬರು ಬಾಲಕರು ಸಾವನ್ನಪ್ಪಿದ್ದು ಇದರೊಂದಿಗೆ ಸಾವಿನ ಸಂಖ್ಯೆ 11ಕ್ಕೆ ಏರಿದೆ.
ಇಂದು ಮಧ್ಯಾಹ್ನ 2.25ರ ಸುಮಾರಿಗೆ ಸಿರಸ್ಪುರ ಅಂಡರ್ಪಾಸ್ ಬಳಿ 12 ವರ್ಷದ ಬಾಲಕ ನೀರಿನಲ್ಲಿ ಮುಳುಗಿದ ಬಗ್ಗೆ ತಮಗೆ ಕರೆ ಬಂದಿತ್ತು. ಕೂಡಲೇ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದರು. ಅಗ್ನಿಶಾಮಕ ದಳವು ತನ್ನ ರಕ್ಷಣಾ ವಾಹನಗಳನ್ನು ರವಾನಿಸಿತು ಎಂದು ಉಪ ಪೊಲೀಸ್ ಆಯುಕ್ತ ಆರ್ಕೆ ಸಿಂಗ್ ತಿಳಿಸಿದ್ದಾರೆ.
ಮೆಟ್ರೋ ಬಳಿಯ ಅಂಡರ್ಪಾಸ್ ನಲ್ಲಿ ಸುಮಾರು 3 ಅಡಿಗಿಂತಲೂ ಹೆಚ್ಚು ನೀರಿನಿಂದ ತುಂಬಿರುವುದು ಕಂಡುಬಂದಿತ್ತು. ಅಗ್ನಿಶಾಮಕ ದಳವು ಶೋಧ ಕಾರ್ಯಾಚರಣೆಯನ್ನು ನಡೆಸಿ ಇಬ್ಬರು ಬಾಲಕರ ಶವವನ್ನು ಹೊರತೆಗೆದಿದ್ದಾರೆ ಎಂದು ಡಿಸಿಪಿ ತಿಳಿಸಿದ್ದಾರೆ.
ಇಬ್ಬರೂ ಬಾಲಕರನ್ನು ತಕ್ಷಣವೇ ಬಾಬು ಜಗಜೀವನ್ ರಾಮ್ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ವೈದ್ಯರು ಅವರನ್ನು ಮೃತಪಟ್ಟಿರುವುದಾಗಿ ಘೋಷಿಸಿದರು ಎಂದು ಡಿಎಫ್ಎಸ್ ನಿರ್ದೇಶಕ ಅತುಲ್ ಗಾರ್ಗ್ ಹೇಳಿದರು.
ಪ್ರಾಥಮಿಕ ವಿಚಾರಣೆಯ ಪ್ರಕಾರ, ಬಾಲಕರು ಈಜಾಡುವ ಸಲುವಾಗಿ ನೀರಿಗೆ ಇಳಿದಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 174ರ ಅಡಿಯಲ್ಲಿ ಪೊಲೀಸರು ವಿಚಾರಣೆಯನ್ನು ಆರಂಭಿಸಿದ್ದಾರೆ. ಈ ಇಬ್ಬರು ಮಕ್ಕಳನ್ನು ಹೊರತುಪಡಿಸಿ, ಆಗ್ನೇಯ ದೆಹಲಿಯ ಓಖ್ಲಾ ಪ್ರದೇಶದಲ್ಲಿ ಶುಕ್ರವಾರ ಸ್ಕೂಟರ್ನಲ್ಲಿ ಹೋಗುತ್ತಿದ್ದ 60 ವರ್ಷದ ವ್ಯಕ್ತಿಯೊಬ್ಬರು ನೀರಿನಿಂದ ತುಂಬಿರುವ ಅಂಡರ್ಪಾಸ್ನಲ್ಲಿ ಬಿದ್ದು ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ.