ಆರೋಗ್ಯವೇ ಬದುಕಿಗೆ ಭಾಗ್ಯ : ಡಾ.ವಿನೋದ ಮೇತ್ರಿ

ಆರೋಗ್ಯವೇ ಬದುಕಿಗೆ ಭಾಗ್ಯ : ಡಾ.ವಿನೋದ ಮೇತ್ರಿ Health is the key to life: Dr. Vinoda Metri

ಮಹಾಲಿಂಗಪುರ 01: ಇಂದಿನ ದಿನಮಾನದಲ್ಲಿ ಆರೋಗ್ಯವೇ ಭಾಗ್ಯ ಎನ್ನುವುದು ಸರ್ವಕಾಲಿಕ ಸತ್ಯ. ರೋಗಗಳು ಮನುಷ್ಯ ಮತ್ತು ಪ್ರಾಣಿಗಳನ್ನು ಬಾಧಿಸುತ್ತಿವೆ. ಅದರಲ್ಲಿ ಸಿಲುಕಿ ಬದಕು ನರಳುತ್ತಿದೆ. ರೋಗಗಳು ನಿರಂತವಾಗಿ ಹೊಸ ಹೊಸ ರೂಪದಲ್ಲಿ ಹುಟ್ಟಿಕೊಂಡು ಹರಡುತ್ತಿವೆ ಅವುಗಳಿಗೆ ಓಷಧ ಕಂಡು ಹಿಡಿಯುವುದು ಅಷ್ಟು ಸುಲಭವಾಗಿಲ್ಲ. ಅದು ಸಮಯ ತೆಗೆದುಕೊಳ್ಳುತ್ತದೆ. ಇವೆಲ್ಲವುಗಳಿಂದ ನಮಗೆ ರಕ್ಷಣೆ ಕೊಡುವ ಆಧುನಿಕ ಜಗತ್ತಿನ ದೇವರಾಗಿ ವೈದ್ಯರು ಕಾಣುತ್ತಿದ್ದಾರೆ ಎಂದು ವೈದ್ಯ ಡಾ.ವಿನೋದ ಮೇತ್ರಿ ಹೇಳಿದರು. 

ಸ್ಥಳೀಯ ಬುದ್ನಿ ಪಿ.ಡಿಯಲ್ಲಿರುವ ಅಕ್ಷರ ವಿದ್ಯಾವಿಹಾರ ಶಾಲೆಯಲ್ಲಿ ನಡೆದ ವೈದ್ಯ ಹಾಗೂ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿ ಮಾತನಾಡಿ ಭಾರತದ ಪೌರಾಣಿಕ ವೈದ್ಯ ಮತ್ತು ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿ ಭಾರತ ರತ್ನ ಡಾ.ಬಿಧನ ಚಂದ್ರ ರಾಯ್ ಅವರ ಜನ್ಮ ದಿನದ ಸವಿ ನೆನಪಿಗಾಗಿ ವೈದ್ಯರ ದಿನ ಆಚರಿಸಿ ಇಡೀ ದೇಶ ಈ ಮೂಲಕ ಅವರನ್ನು ಗೌರವಿಸುತ್ತದೆ ಎಂದರು. 

ಪತ್ರಕರ್ತ ಮಹೇಶ ಮನ್ನಯ್ಯನವರಮಠ ಮಾತನಾಡಿ, ಪತ್ರಕರ್ತರು ಮತ್ತು ವೈದ್ಯರು ಸಮಾಜದ ಎರಡು ಕಣ್ಣುಗಳಿದ್ದಂತೆ. ಪತ್ರಕರ್ತರು ಸಮಾಜದಲ್ಲಿನ ಕುಂದು-ಕೊರತೆಯನ್ನು ಜೊತೆಗೆ ಸಮಾಜದ ಏಳಿಗೆಗೆ ಪ್ರಮುಖ ಪಾತ್ರವಹಿಸಿದರೆ, ವೈದ್ಯರು ಸಮಾಜದ ಸ್ವಸ್ಥ ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ ಎಂದರು. 

ಪತ್ರಕರ್ತ ಶಿವಲಿಂಗ ಸಿದ್ನಾಳ ಮಾತನಾಡಿ, ವ್ಯಕ್ತಿ ಸ್ವಸ್ಥವಾಗಿರಲು ವೈದ್ಯ, ಸಮಾಜ ಸ್ವಸ್ಥವಾಗಿರಲು ಪತ್ರಕರ್ತರಿರಬೇಕು.ಶಿಕ್ಷಣ ಹೆಣ್ಣು,ಗಂಡಿಗೆ ಸೀಮಿತವಲ್ಲ. ಯಾರು ಬೇಕಾದರೂ ಸಾಧನೆ ಮಾಡಬಹುದು. ವಿದ್ಯಾರ್ಥಿಗಳ ವೇಷಭೂಷಣ, ಕೌಶಲ್ಯತೆ, ಶಿಕ್ಷಣದ ಪ್ರಜ್ಞೆ ಇವು ಜಾಣತನವನ್ನು ತೋರುತ್ತವೆ. ವೈದ್ಯರು ಜನ ಸೇವೆಯೇ ಜನಾರ್ಧನ ಸೇವೆ ಎಂದು ತಿಳಿದು ಕಾರ್ಯನಿರ್ವಹಿಸಬೇಕು. ಪತ್ರಕರ್ತರು ಸೃಷ್ಟಿಕರ್ತರಲ್ಲ, ಆದರೆ ಒಳ್ಳೆಯ ದೃಷ್ಟಿಕರ್ತರಾಗಬೇಕು ಎಂದರು. 

ಶಾಲಾ ಮುಖ್ಯೋಪಾಧ್ಯಾಯ ಶರಣಪ್ಪ ಅಂಗಡಿ ಮಾತನಾಡಿ, ಶಾಸಕಾಂಗ, ಕಾಯಾಂರ್ಗ, ನ್ಯಾಯಾಂಗ, ಕೊನೆಯ ಅಂಗವಾದ ಪತ್ರಿಕಾರಂಗ ಇದು ಮೇಲಿನ ಮೂರು ಅಂಗಗಳು ಮಾಡುವು ತಪ್ಪುಗಳನ್ನು ಸ್ಪಷ್ಟವಾಗಿ ಬರೆದು ಜನರಿಗೆ ತೋರಿಸುವುದೇ ಪತ್ರಿಕೆ ಮುಖ್ಯ ಉದ್ದೇಶವಾಗಿದೆ. ನಾಲ್ಕನೇಯ ಅಂಗ ದೇಶವನ್ನು ಸಮರ್ಥವಾಗಿ ಮುನ್ನಡೆಸಲು ಅತೀ ಮುಖ್ಯ ಅಂಗವಾಗಿ ಕೆಲಸ ಮಾಡುತ್ತದೆ ಎಂದರು. 

ಸನ್ಮಾನ: ಸುವರ್ಣ ಸಾಧಕಿ ಡಾ.ಉಷಾ ಬೆಳಗಲಿಯವರನ್ನು ಸನ್ಮಾನಿಸಲಾಯಿತು. ಜೊತೆಗೆ ಪತ್ರಕರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಕ್ಕಳು ಆರೋಗ್ಯ ಕುರಿತು ವಿಶೇಷ ವಿಟ್ಯಾಮಿನ್ ರೂಪಕ ಆರೋಗ್ಯದ ಮಹತ್ವ ಸಾರಿದರು. ಮಕ್ಕಳು ಹಾಕಿದ ವೈದ್ಯರ ವೇಷ ಭೂಷಣ ನೋಡುಗರ ಗಮನ ಸೆಳೆಯಿತು. ವೈದ್ಯರ ದಿನದ ಗೌರವಾರ್ಥವಾಗಿ ಸಂಸ್ಥೆಯ ಅಧ್ಯಕ್ಷ ಡಾ.ವಿನೋದ ಮೇತ್ರಿ ಕೇಕ್ ಕಟ್ ಮಾಡಿ ಸಿಹಿ ಹಂಚಿ ಸಂಭ್ರಮಿಸಿದರು. 

ಕಾನಿಪ ಸಂಘದ ಕಾರ್ಯದರ್ಶಿ ಹಣಮಂತ ನಾವಿ, ಪತ್ರಕರ್ತರಾದ ಜಯರಾಮ ಶೆಟ್ಟಿ, ಮಹೇಶ ಆರಿ, ಮೀರಾ ತಟಗಾರ, ಚಂದ್ರಶೇಖರ ಮೊರೆ, ಲಕ್ಷಣ ಕಿಶೋರ, ಡಾ. ತೇಜಿಸ್ವಿತಾ ಮೇತ್ರಿ, ಡಾ.ಅಶ್ವಿನಿ ಬಡಿಗೇರ, ಸುನೀತಾ ಹಾವನಳ್ಳಿ, ಕೋಕಿಲಾ ಹಳ್ಳಿ, ಸೇರಿದಂತೆ ಶಾಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿನಿ ಶ್ರೇಯಾ ಓಲೇಕರ ಸ್ವಾಗತಿಸಿದರು, ಸೌಜನ್ಯ ಪಾಟೀಲ, ಸ್ನೇಹಾ ರಾಠೋಡ ನಿರೂಪಿಸಿ, ವಂದಿಸಿದರು.