ಬಳ್ಳಾರಿ 13: ರೈತರು ಮಣ್ಣಿನ ಫಲವತ್ತತೆ ಆಧರಿಸಿ ವೈಜ್ಞಾನಿಕ ಬೆಳೆ ಪದ್ಧತಿ ಅನುಸರಿಸಿ ಹೆಚ್ಚಿನ ಇಳುವರಿ ಪಡೆಯಲು ಆಧುನಿಕ ಕೃಷಿ ನಡೆಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಮತ್ತು ತೋಟಗಾರಿಕೆ ಇಲಾಖೆ, ಜಿಲ್ಲಾ ಕಾಟನ್ ಅಸೋಸಿಯೇಷನ್, ಕರ್ನಾಟಕ ರಾಜ್ಯ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಜಿಲ್ಲಾ ಘಟಕ, ಎಪಿಎಂಸಿ ವರ್ತಕರ ಸಂಘ ಮತ್ತು ಹತ್ತಿ ಬೆಳೆಯುವ ರೈತರ ಸಮೂಹ ಇವರ ಸಂಯುಕ್ತಾಶ್ರಯದಲ್ಲಿ ಬಳ್ಳಾರಿ ಚೇಂಬರ್ ಆಫ್ ಕಾಮರ್ಸ್ ಉಚಿತ ಆಸ್ಪತ್ರೆಯ ಮುಂಭಾಗದಲ್ಲಿ ಶುಕ್ರವಾರ ಏರಿ್ಡಸಿದ್ದ ‘ರೈತರ ಮೇಳ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೂರದೃಷ್ಟಿಯ ರೈತರ ಮೇಳ ಹಮ್ಮಿಕೊಂಡಿರುವುದು ಶ್ಲಾಘನೀಯ. ರೈತರು ಇಂತಹ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ರೈತರಿಲ್ಲದೇ ಹಿ ಕೃಷಿ ಇಲ್ಲದೇ ಕೈಗಾರಿಕೆಗಳು ಮತ್ತು ಉದ್ಯಮಗಳಿಲ್ಲ. ಹಾಗಾಗಿ ದೇಶದ ಬೆನ್ನೆಲುಬಾಗಿರುವ ರೈತರನ್ನು ಮತ್ತು ಕೃಷಿಯನ್ನು ನಮ್ಮ ಸಂಸ್ಥೆಯು ಪ್ರೋತ್ಸಾಹಿಸುತ್ತಿದೆ. ಇದರ ಭಾಗವಾಗಿ ರೈತಣ್ಣ ಊಟ, ರೈತಣ್ಣ ಕ್ಲಿನಿಕ್, ರೈತಣ್ಣ ಹಾಸಿಗೆ ಹಾಗೂ ರೈತರ ಹಿ ಕೃಷಿಕರ ಪರವಾದ ಅನೇಕ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿದೆ ಎಂದು ಹೇಳಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಂ.ಸೋಮಸುಂದರ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಸಂತೋಷ್ ಸಪ್ಪಂಡಿ ಅವರು ರೈತರು ವೈಜ್ಞಾನಿಕವಾಗಿ ಪ್ರಮಾಣೀಕೃತ ಬೀಜಗಳನ್ನು ಆಯ್ಕೆ ಮಾಡಿಕೊಂಡು, ವೈಜ್ಞಾನಿಕ ಪದ್ಧತಿಯಲ್ಲಿ ಬೆಳೆಗಳನ್ನು ಬೆಳೆಯುವ ಮೂಲಕ ಹೆಚ್ಚಿನ ಇಳುವರಿಯನ್ನು ಪಡೆಯಬೇಕು ಎಂದು ವಿವರಿಸಿ, ಸರ್ಕಾರದ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿದ್ದ ರಾಯಚೂರು ಕೆವಿಕೆಯ ಡಾ.ಭೀಮಣ್ಣ ಮತ್ತು ಹೈದರಾಬಾದ್ನ ಡಾ. ವೆಂಕಟೇಶ್ ಕುಲಕರ್ಣಿ ಅವರು, ಮಣ್ಣಿನ ಫಲವತ್ತತೆ, ಬೀಜಗಳ ಆಯ್ಕೆ, ವೈಜ್ಞಾನಿಕವಾಗಿ ಬೀಜ ಬಿತ್ತನೆ, ನೀರುಣಿಸುವಿಕೆ, ಆಧುನಿಕ ತಂತ್ರಜ್ಞಾನಗಳ ಬಳಕೆ, ಯಂತ್ರಗಳ ಬಳಕೆ, ಸಂಪ್ರದಾಯಿಕ ಪದ್ಧತಿಯ ಕೃಷಿ ಇನ್ನಿತರೆಗಳ ಕುರಿತು ಸಮಗ್ರವಾಗಿ ಉಪನ್ಯಾಸ ನೀಡಿ, ರೈತರಿಂದ ಅಪಾರ ಮೆಚ್ಚುಗೆ ಪಡೆದರು.
ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಸಿ.ಶ್ರೀನಿವಾಸರಾವ್, ಬಳ್ಳಾರಿ ಎಪಿಎಂಸಿ ಅಧ್ಯಕ್ಷ ಕಟ್ಟೇಮನಿ ನಾಗೇಂದ್ರ, ಕಾರ್ಯದರ್ಶಿ ಶ್ರೀಹರಿ, ಬಳ್ಳಾರಿ ಜಿಲ್ಲಾ ಕಾಟನ್ ಅಸೋಸಿಯೇಷನ್ ಅಧ್ಯಕ್ಷ ದಂಡಿನ ತಿಪ್ಪೇಸ್ವಾಮಿ, ಬಿಡಿಸಿಸಿಐನ ಹಿರಿಯ ಉಪಾಧ್ಯಕ್ಷ ಅವ್ವಾರು ಮಂಜುನಾಥ್, ಕರ್ನಾಟಕ ರಾಜ್ಯ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ತಿಮ್ಮನಗೌಡ, ಬಿಡಿಸಿಸಿಐನ ನಿಕಟಪೂರ್ವ ಅಧ್ಯಕ್ಷ ಬಿ. ಮಹಾರುದ್ರಗೌಡ, ಹಗರಿ ಕೃಷಿ ವಿಶ್ವವಿದ್ಯಾಲಯದ ನಿರ್ದೇಶಕ ಡಾ.ರವಿಶಂಕರ್, ಕೃಷಿ ಮಾರಾಟಗಾರರ ನೌಕರರ ಸಂಘದ ಅಧ್ಯಕ್ಷರ ಚೌವ್ಹಾಣ್, ಎಪಿಎಂಸಿ ದಲ್ಲಾಳಿ ವರ್ತಕರ ಸಂಘದ ಅಧ್ಯಕ್ಷ ಅಂದ್ರಾಳ್ ಚಿದಾನಂದಪ್ಪ, ಡಾ.ಶ್ರೀನಿವಾಸರೆಡ್ಡಿ, ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಸಿ.ಸುರೇಶಬಾಬು ಸೇರಿದಂತೆ ಬಳ್ಳಾರಿ, ಚಿತ್ರದುರ್ಗ, ವಿಜಯನಗರ ಮತ್ತು ಆಂಧ್ರ್ರದೇಶದ ಸಾವಿರಾರು ರೈತರು ಭಾಗವಹಿಸಿದ್ದರು.
ರೈತರಿಗೆ ಕೃಷಿ ಮತ್ತು ಕೃಷಿಗೆ ಪೂರಕವಾದ ವಿವಿಧ ಯೋಜನೆಗಳ ಮತ್ತು ಉತ್ಪನ್ನಗಳ ಕುರಿತು ಮಾಹಿತಿ ನೀಡಲು 40 ಕ್ಕೂ ಹೆಚ್ಚಿನ ಮಳಿಗೆಗಳನ್ನು ಅಳವಡಿಸಿ, ಮಾಹಿತಿ ನೀಡಲಾಯಿತು.