ಪ್ರತಿಯೊಬ್ಬರೂ ತುರ್ತು ಆರೋಗ್ಯ ಸಮಸ್ಯೆಗಳ ಮುಂಜಾಗ್ರತಾ ಕ್ರಮ ಬಗ್ಗೆ ಮಾಹಿತಿ ಹೊಂದಬೇಕು: ಸುಭಾಷ್ ಶಿಂಧೆ

 ಪ್ರತಿಯೊಬ್ಬರೂ ತುರ್ತು ಆರೋಗ್ಯ ಸಮಸ್ಯೆಗಳ ಮುಂಜಾಗ್ರತಾ ಕ್ರಮ ಬಗ್ಗೆ ಮಾಹಿತಿ ಹೊಂದಬೇಕು: ಸುಭಾಷ್ ಶಿಂಧೆ Everyone should be informed about preventive measures for emergency health issues: Subhash Shinde

ಲೋಕದರ್ಶನ ವರದಿ

ಪ್ರತಿಯೊಬ್ಬರೂ ತುರ್ತು ಆರೋಗ್ಯ ಸಮಸ್ಯೆಗಳ ಮುಂಜಾಗ್ರತಾ ಕ್ರಮ ಬಗ್ಗೆ ಮಾಹಿತಿ ಹೊಂದಬೇಕು: ಸುಭಾಷ್ ಶಿಂಧೆ 

ಬಳ್ಳಾರಿ 15: ದಿನನಿತ್ಯ ಜೀವನದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿದ್ದು, ತುರ್ತು ಚಿಕಿತ್ಸೆ ನೀಡಲು ಮುಂಜಾಗ್ರತಾ ಕ್ರಮಗಳ ಬಗ್ಗೆ ಪ್ರತಿಯೊಬ್ಬರೂ ಮಾಹಿತಿ ಹೊಂದಬೇಕು ಎಂದು ಕೇಂದ್ರ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿ ಸುಭಾಷ್ ಶಿಂಧೆ ಅವರು ಹೇಳಿದರು. 

ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ ವತಿಯಿಂದ ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ತತ್‌ಕ್ಷಣದ ಹೃದಯಾಘಾತ ಹಾಗೂ ಇತರೆ ಆರೋಗ್ಯ ಸಮಸ್ಯೆ ಕುರಿತಂತೆ ವಿದ್ಯಾರ್ಥಿಗಳಿಗೆ  ಪ್ರಾತ್ಯಕ್ಷಿಕೆ ನೀಡುವ ಮೂಲಕ ಅವರು ಮಾತನಾಡಿದರು. 

ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಮಿತಿಗಳಿಲ್ಲದೇ ಹೃದಯಾಘಾತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಹೃದಯ ಶ್ವಾಸಕೋಶ ಪುನರುಜ್ಜೀವನ (ಸಿಆರ್‌ಪಿ) ಕುರಿತು ಮಾಹಿತಿ ಹೊಂದಿ ಹೃದಯಾಘಾತ ಒಳಗಾದ ವ್ಯಕ್ತಿಗೆ ತರ್ತು ಪರಿಸ್ಥಿತಿಯಲ್ಲಿ ಸಹಾಯ ಮಾಡಬೇಕು ಎಂದರು. 

ಅಪಘಾತ ಮತ್ತು ಇನ್ನಿತರೆ ಕಾರಣಗಳಿಂದ ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ರಕ್ತಸ್ರಾವವಾದಾಗ ಯಾವ ರೀತಿ ತಡೆಗಟ್ಟುವ ಕ್ರಮ ಸೇರಿದಂತೆ ಪ್ರಥಮ ಚಿಕಿತ್ಸೆಯ ಬಗ್ಗೆ ಹಾಗೂ ತುರ್ತು ಆರೋಗ್ಯ ಸಮಸ್ಯೆ ಇತರೆ ದುರಂತಗಳಲ್ಲಿ ಇತರರ ಜೀವ ಕಾಪಾಡುವಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ಪ್ರಥಮ ಚಿಕಿತ್ಸೆ ನೀಡಲು ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಬಗ್ಗೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ಪ್ರದರ್ಶಿಸಲಾಯಿತು. 

ಈ ಸಂದರ್ಭದಲ್ಲಿ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬಿ.ಸುಲೇಖಾ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪರಿಣಿತ ಪರಮೇಶ್ವರ, ಹಿರಿಯ ಉಪನ್ಯಾಸಕರಾದ ಕೆ.ಪಿ ಮಂಜುನಾಥ ರೆಡ್ಡಿ, ಶ್ರೀನಿವಾಸ ಮೂರ್ತಿ, ಶಾಂತಮೂರ್ತಿ, ಶಾಮಣ್ಣ, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಯ ಸಿಬ್ಬಂದಿಗಳು ಸೇರಿದಂತೆ ಕಾಲೇಜಿನ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.