ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವೆ : ಸಚಿವ ತಿಮ್ಮಾಪುರ

ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವೆ : ಸಚಿವ ತಿಮ್ಮಾಪುರ Education will be given top priority: Minister Thimmapura

ಲೋಕದರ್ಶನ ವರದಿ 

ಮಹಾಲಿಂಗಪುರ 16 : ಇಂದಿನ ಮಕ್ಕಳು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಎಲ್ಲ ರೀತಿಯ ಸೌಲಭ್ಯ ಹಾಗೂ ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ ಹೇಳಿದರು. 

ಸಮೀಪದ ಅಕ್ಕಿಮರಡಿ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್ ಬಾಗಲಕೋಟೆ, ಶಾಲಾ ಶಿಕ್ಷಣ ಇಲಾಖೆ ಹಾಗೂ ಪಂಚಾಯತ ರಾಜ್ಯ ಇಂಜಿನಿಯರಿಂಗ್ ಇಲಾಖೆ 2022-23 ನೇ ಸಾಲಿನ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯ ಆರ್ ಐ ಡಿ ಎಪ್ 28 ಅನುದಾನದಡಿ ಸರ್ಕಾರಿ ಪ್ರೌಢಶಾಲೆಯ(ಆರ್ ಎಂ ಎಸ್ ಎ) ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಸರ್ಕಾರ ಶಿಕ್ಷಣಕ್ಕೆ ಅಷ್ಟೇ ಅಲ್ಲದೆ ಬಡ ಹಾಗೂ ದೀನದಲಿತರಿಗೆ ಸಹಕಾರಿಯಾಗುವ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇದರಿಂದಾಗಿ ಹೆಚ್ಚಿನ ಸಂಖ್ಯೆಯ ಬಡವರಿಗೆ ಸಹಾಯವಾಗಿದೆ. ಜೊತೆಗೆ ರೈತರ ಮತ್ತು ಮಹಿಳೆಯರ ಅಭಿವೃದ್ಧಿಗೆ ಹೆಚ್ಚಿನ  ಹೆಚ್ಚಿನ ಆದ್ಯತೆ ನಮ್ಮ ಸರ್ಕಾರ ನೀಡಿದೆ. ಬಡವರಿಗೆ ಶಕ್ತಿ ಕೊಡುವ ಮತ್ತು ಅಭಿವೃದ್ಧಿ ಕಾರ್ಯ ಮಾಡುವಲ್ಲಿ ಯಶಸ್ವಿಯಾಗಿದೆ ಎಂದರು. 

ಜೊತೆಗೆ ಅಕ್ಕಿಮರಡಿ ರಸ್ತೆಯಿಂದ ಬೆಳಗಲಿ ರಸ್ತೆ, ಅಕ್ಕಿಮರಡಿಯಿಂದ ಮಹಾಲಿಂಗಪುರ ರಸ್ತೆಯಲ್ಲಿರುವ ಒತ್ತನೆವ್ವ ದೇವಸ್ಥಾನದವರೆಗೆ ರಸ್ತೆ ಸುಧಾರಣೆ, ಕನಕದಾಸ ಸಮುದಾಯ ಭವನ ನಿರ್ಮಾಣಕ್ಕೆ ಸಚಿವ ಆರ್ ಬಿ ತಿಮ್ಮಾಪುರ ಭೂಮಿ ಪೂಜೆ ಸಲ್ಲಿಸಿದರು. 

ದಿವ್ಯ ಸಾನಿಧ್ಯ ವಹಿಸಿದ್ದ ಶಿರೂರದ ಪ.ಪೂ ಶ್ರೀ ಚಿನ್ಮಯಾನಂದ ಮಹಾಸ್ವಾಮಿಜಿ ಮತ್ತು ಮೆಟಗುಡ್ಡದ ಪರಮಪೂಜ್ಯ ಜ್ಯೋತಿಲಕ್ಕಪ್ಪ ಮಹಾರಾಜರು ಆಶೀರ್ವಚನ ನೀಡಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕ ಸುತಾರ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಈ ಸಂದರ್ಭದಲ್ಲಿ ಬಾಗಲಕೋಟೆ ಡಿವೈಪಿಸಿ ಪಿಎಸ್ ಬಳೋಲಮಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಎಂ ಮುಲ್ಲಾ, ನಾಗರಾಳ ಗ್ರಾಪಂ ಪಿಡಿಓ ರಂಜಿತಾ ಹಟ್ಟಿ, ಅಕ್ಕಿಮರಡಿ ಪ್ರೌಢ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಶಿವಯ್ಯ ಲಗಳಿ, ಯಶವಂತ ಚೌವ್ಹಾಣ, ಮಲ್ಲಪ್ಪ ಅಣ್ಣೋಜಿ, ಮಡಿವಾಳಯ್ಯ ಕಂಬಿ, ಮಲ್ಲಪ್ಪ ಮಳಲಿ, ರಾಮಪ್ಪ ಕೊಣ್ಣೂರ, ಶಿವಾನಂದ ಮಠದ, ಭೀಮಪ್ಪ ಚಿಕ್ಕೂರ, ಕಾಡಪ್ಪ ಕೊಣ್ಣೂರ, ರಾಮಪ್ಪ ಚೌವ್ಹಾಣ, ಶಿವಾಜಿ ಚೌವ್ಹಾಣ, ಗೋಪಾಲ್ ಇಂಚಲ, ತಮ್ಮಣ್ಣ ಡಂಗಿ, ಆನಂದ ಹಟ್ಟಿ , ಸದುಗೌಡ ಪಾಟೀಲ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಗೋಪಾಲ ಇರಗರ,ಶಿಕ್ಷಕ ಆನಂದ ರಾಠೋಡ ಸೇರಿದಂತೆ ಇತರರಿದ್ದರು. ಶಿಕ್ಷಕ ವಿಕ್ರಮ ಬಸನಗೌಡರ ನಿರೂಪಿಸಿ, ಶಿಕ್ಷಕರಾದ ಅರ್ಜುನ ಚವ್ಹಾಣ, ಮಂಜು ಮೊಕಾಶಿ ಸ್ವಾಗತಿಸಿ, ವಂದಿಸಿದರು.