ಬೌದ್ಧಿಕ ಸ್ವತ್ತನ್ನು ರಕ್ಷಿಸಿಕೊಳ್ಳುವುದು ಪತ್ರಿಯೊಬ್ಬರ ಕರ್ತವ್ಯ: ಲಿಕಿತಾ ಮಹ್ಡಿಕರ್
![Duty of a journalist to protect intellectual property: Likita Mahdikar ಬೌದ್ಧಿಕ ಸ್ವತ್ತನ್ನು ರಕ್ಷಿಸಿಕೊಳ್ಳುವುದು ಪತ್ರಿಯೊಬ್ಬರ ಕರ್ತವ್ಯ: ಲಿಕಿತಾ ಮಹ್ಡಿಕರ್](https://www.lokadarshan.news/uploads/171961976571879.jpg?tp=4420)
ವಿಜಯಪುರ 29: ಮನುಷ್ಯನ ಬೌದ್ಧಿಕ ಸಾಮರ್ಥ್ಯದಿಂದ ತಯಾರಾದ ಬೌದ್ಧಿಕ ಸ್ವತ್ತನ್ನು ರಕ್ಷಿಸಿಕೊಳ್ಳುವುದು ಪತ್ರಿಯೊಬ್ಬರ ಕರ್ತವ್ಯವಾಗಿದೆ. ಅವುಗಳ ರಕ್ಷಣೆಗೆ ಇರುವ ಕಾನೂನುಗಳ ಅರಿವು ಎಲ್ಲರಿಗೂ ಇರಬೇಕು ಎಂದು ಬೆಂಗಳೂರಿನ ಅಲ್ಟಾಸಿಟ್ ಗ್ಲೋಬಲ್ ಐಪಿಆರ್ ಅಟಾರ್ನಿ, ಸಹವರ್ತಿ ವಕೀಲೆ ಲಿಕಿತಾ ಪಿ.ಮಹ್ಡಿಕರ್ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಬೌದ್ಧಿಕ ಆಸ್ತಿ ಹಕ್ಕುಗಳ ಕೋಶ ಹಾಗೂ ವಿಶ್ವೇಶ್ವರಯ್ಯ ಟ್ರೇಡ್ ಪ್ರಮೋಷನ್ ಸೆಂಟರ್ ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ “ಬೌದ್ಧಿಕ ಆಸ್ತಿ ಹಕ್ಕುಗಳ ಜಾಗೃತಿ” ವಿಷಯದ ಕುರಿತು ಒಂದು ದಿನದ ಓರಿಯಂಟೇಶನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೌದ್ಧಿಕ ಆಸ್ತಿ ಹಕ್ಕುಗಳ ಪರಿಕಲ್ಪನೆ, ಟ್ರೇಡ್ಮಾರ್ಕ್ ಸಲ್ಲಿಸುವ ಕಾರ್ಯವಿಧಾನಗಳು, ಪೇಟೆಂಟ್, ಹಕ್ಕುಸ್ವಾಮ್ಯ, ಭೌಗೋಳಿಕ ಸೂಚನೆ, ವಿನ್ಯಾಸ, ಸಸ್ಯ ಪ್ರಭೇದಗಳು ಮತ್ತು ರೈತರ ಹಕ್ಕುಗಳು ಮತ್ತು ವ್ಯಾಪಾರ ರಹಸ್ಯಗಳಂತಹ ಎಲ್ಲಾ ಅಂಶಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಟ್ಟರು.
ಇದೇ ಸಂದರ್ಭದಲ್ಲಿ ವಿಟಿಪಿಸಿ ಕರ್ನಾಟಕ ಸರ್ಕಾರ ರು್ತ ಉತ್ತೇಜನ ಕೇಂದ್ರದ ಐಪಿ ಇನಿಶಿಯೇಟಿವ್ಸ್ ಮತ್ತು ಜಿಐ ಕೋಶದ ಫೆಸಿಲಿಟೇಟರ್ ಪ್ರಭಾವತಿ ರಾವ್ ಮಾತನಾಡಿ, ಕರ್ನಾಟಕ ರಫ್ತುಗಳ ಕೊಡುಗೆ ಮತ್ತು ಐಪಿ ಪರಿಕರಗಳ ಫೈಲಿಂಗ್, ವಾಣಿಜ್ಯೀಕರಣ ಇದರ ಅರಿವು ಮತ್ತು ಬೌದ್ಧಿಕ ಹಕ್ಕುಗಳ ರಕ್ಷಣೆ ಹಾಗೂ ಇದರ ಕೊಡುಗೆಯನ್ನು ವಿವರಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ವಿವಿಧ ಬೌದ್ಧಿಕ ಆಸ್ತಿ ಹಕ್ಕುಗಳು ಅದರದೇ ಆದ ಮಹತ್ವವನ್ನು ಪಡೆದುಕೊಂಡಿದ್ದು ಎಲ್ಲರಿಗೂ ಇದರ ಅವಶ್ಯಕತೆ ಇದೆ ಎಂದರು. ವಿವಿಯ ಮೌಲ್ಯಮಾಪನ ಕುಲಸಚಿವ ಎಚ್.ಎಂ.ಚಂದ್ರಶೇಖರ ಭಾಗವಹಿಸಿ ಮಾತನಾಡಿದರು.
ಐಪಿಆರ್ ಕೋಶದ ಸಂಯೋಜಕ ಡಾ.ಎಸ್.ಆರ್ ಗಣೇಶ, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಐಕ್ಯೂಎಸಿ ಕೋಶದ ನಿರ್ದೇಶಕ ಪ್ರೊ.ಪಿ.ಜಿ ತಡಸದ ಪ್ರಾಸ್ತಾವಿಕ ನುಡಿಗಳನ್ನಾಡಿ ಅತಿಥಿಗಳನ್ನು ಪರಿಚಯಿಸಿದರು. ಗ್ರಂಥಾಲಯ ವಿಜ್ಞಾನ ವಿಭಾಗದ ಸಂಶೋಧನಾ ವಿಧ್ಯಾರ್ಥಿನಿ ಶಿವಗಂಗಾ ನಿರೂಪಿಸಿದರು.