ರಕ್ತದಾನದಿಂದ ಸುಸ್ತಾಗುವುದಿಲ್ಲ ಮನುಷ್ಯ ಚೈತನ್ಯ ಪಡೆಯುತ್ತಾನೆ: ಡಾ.ಡಿ.ವಿ.ಪರಮಶಿವಮೂರ್ತಿ
ಹಂಪಿ 14: ಸ್ವಯಂಪ್ರೇರಿತ ರಕ್ತದಾನದಿಂದ ಮನುಷ್ಯ ಚೈತನ್ಯ ಪಡೆಯುತ್ತಾನೆ. ರಕ್ತದಾನ ಮಾಡಿ ಜೀವ ಉಳಿಸಿದೆನಲ್ಲ ಎಂಬ ಸಾರ್ಥಕತೆಯ ಭಾವನೆ ಬರುತ್ತದೆ. ರಕ್ತದಾನದಿಂದ ಆರೋಗ್ಯ ಕೆಡುತ್ತದೆ, ಸುಸ್ತಾಗುತ್ತದೆ ಎಂದು ಅನೇಕ ರೀತಿಯ ಮೌಢ್ಯಗಳು ಜನರಲ್ಲಿ ಬೇರೂರಿವೆ. ಹಾಗೆಲ್ಲ ಆಗುವುದಿಲ್ಲ. ರಕ್ತ ಪಡೆಯಲು ಆರೋಗ್ಯ ವಿಜ್ಞಾನದಲ್ಲಿ ಕೆಲವು ಮಾಪನಗಳಿವೆ ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಕಮಲಾಪುರ ಇವರು ಕನ್ನಡ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಆವರಣದಲ್ಲಿರುವ ವಿದ್ಯಾರಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 14-2-2025ರಂದು ಏರಿ್ಡಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡ ಆಸಕ್ತ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಕುಲಪತಿಯವರು ಅಧ್ಯಕ್ಷತೆವಹಿಸಿ ಮಾತನಾಡಿದರು.
ಕನ್ನಡ ವಿಶ್ವವಿದ್ಯಾಲಯದ ಸಿಬ್ಬಂದಿಗಳಾದ ಹರ್ಷವರ್ಧನ, ಮೇಘನ, ಮೌನ ಹಾಗೂ ಯೋಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಾದ ಶ್ರೀಧರ, ರಾಜಕುಮಾರ್, ಜಿ.ಬಸವರಾಜು, ಹಸ್ತಪ್ರತಿಶಾಸ್ತ್ರ ವಿಭಾಗದ ಪ್ರವೀಣ, ಕನ್ನಡ ಭಾಷಾಧ್ಯಯನ ವಿಭಾಗದ ಬಿ.ಬಸವರಾಜು ಸೇರಿದಂತೆ 25 ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಇವರಿಗೆಲ್ಲ ಡಾ.ಯಶಸ್ವಿನಿ ಪ್ರಮಾಣ ಪತ್ರ ವಿತರಿಸಿದರು.
ಮಾಹಿತಿ ಕೇಂದ್ರದ ಉಪನಿರ್ದೇಶಕರಾದ ಡಾ.ಡಿ.ಮೀನಾಕ್ಷಿ, ವಿದ್ಯಾರಣ್ಯ ಆಸ್ಪತ್ರೆಯ ವೈದ್ಯರಾದ ಡಾ.ರಾಜರಾಜೇಶ್ವರಿ, ಶುಶ್ರೂಷಕಿ ಸುನೀತಾಬಾಯಿ, ಕಮಲಾಪುರ ಸರ್ಕಾರಿ ಆಸ್ಪತ್ರೆಯ ವೈದ್ಯೆ ಡಾ.ಯಶಸ್ವಿನಿ, ಆರೋಗ್ಯ ನೀರೀಕ್ಷಣಾಧಿಕಾರಿ ಧರ್ಮಾಜಿ, ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿ ನಾಗವೇಣಿ ಜಿ, ಸಮುದಾಯ ಆರೋಗ್ಯ ಅಧಿಕಾರಿ ಮೋಹನ್ ಕುಮಾರ್, ಚಿರಂಜೀವಿ ಆಸ್ಪತ್ರೆ ಹೊಸಪೇಟೆಯ ಪ್ಯಾರಾ ಮೆಡಿಕಲ್ ಟೆಕ್ನಿಷಿಯನ್ ರೇಖ ಮತ್ತು ಚೈತ್ರ, ಚಿರಂಜೀವಿ ಬ್ಲಡ್ ಬ್ಯಾಂಕ್ ಕೇಂದ್ರದ ಸೂಪರ್ವೈಸರ್ ವಿನಾಯಕ ಜಿ. ಹಾಜರಿದ್ದರು.