ಹಾವೇರಿ, ಏ. 6, ಕೃಷಿ ಸಚಿವ ಬಿ.ಸಿ.ಪಾಟೀಲ್ ಇಂದಿನಿಂದ ಏ. 11ರವರೆಗೆ ಲಾಕ್ಡೌನ್ ನಿಂದ ರೈತರ ಹಾಗೂ ಕೃಷಿ ಸ್ಥಿತಿಗತಿ ಅವಲೋಕನಕ್ಕೆ ಖುದ್ದು ಪರಿಶೀಲನೆಗೆ ಮುಂದಾಗಿದ್ದಾರೆ. ಇಂದು ಮೊದಲ ದಿನದ ಪ್ರವಾಸದಲ್ಲಿ ಧಾರವಾಡ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಮತಕ್ಷೇತ್ರ ಹಿರೇಕೆರೂರು ನಿವಾಸದಿಂದ ಶಿಗ್ಗಾಂ ಮಾರ್ಗವಾಗಿ ಇಂದು ಬೆಳಿಗ್ಗೆನೆ ಸಚಿವರು ಪ್ರವಾಸ ಕೈಗೊಂಡಿದ್ದು, ಮಾರ್ಗಮಧ್ಯೆ ಕಂಡುಬಂದ ಸಮಸ್ಯೆಗಳತ್ತವೂ ಸಚಿವರು ಗಮನ ಹರಿಸಿದರು. ಈ ವೇಳೆ ಕೆಲವೆಡೆ ಪೊಲೀಸರಿಂದ ಅನವಶ್ಯಕ ತೊಂದರೆ ಕಿರಿಕಿರಿಯುಂಟಾಗುತ್ತಿದೆ ಎಂಬುದನ್ನು ಪರಿಶೀಲಿಸಲು ಸಚಿವರು ಮುಂದಾದರು.ಹಾವೇರಿ ಜಿಲ್ಲೆಯ ಶಿಗ್ಗಾವ್ ತಾಲೂಕಿ ತಡಸ ಚೆಕ್ ಪೊಸ್ಟ್ ಬಳಿ ಪೊಲೀಸರು ಅನವಶ್ಯಕವಾಗಿ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದ್ದಾರೆ ಎಂಬ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಬಿ.ಸಿ.ಪಾಟೀಲ್ ಸ್ವತಃ ಚೆಕ್ ಪೊಸ್ಟ್ ಗೆ ಭೇಟಿ ನೀಡಿ, ಅನವಶ್ಯಕ ಯಾರಿಗೂ ಯಾವುದೇ ವಾಹನಕ್ಕೂ ತೊಂದರೆಯುಂಟು ಮಾಡಬೇಡಿ ಎಂದು ಪೊಲೀಸರಿಗೆ ಸೂಚಿಸಿದರು.