ಕುಡಿಯುವ ನೀರಿನ ಯೋಜನೆ ವಿಫಲದ ಬಗ್ಗೆ ಮಾತಾಡಿದ ಜಿಲ್ಲಾಧ್ಯಕ್ಷ ನಿಂಗಪ್ಪ ಬಾಳಿಕಾಯಿ

ಕುಡಿಯುವ ನೀರಿನ ಯೋಜನೆ ವಿಫಲದ ಬಗ್ಗೆ ಮಾತಾಡಿದ ಜಿಲ್ಲಾಧ್ಯಕ್ಷ ನಿಂಗಪ್ಪ ಬಾಳಿಕಾಯಿ District President Ningappa Balikai spoke about the failure of the drinking water project

ಮಹಾಲಿಂಗಪುರ 11: ಪುರಸಭೆ ವತಿಯಿಂದ ಪಟ್ಟಣದಲ್ಲಿ  ಕಳೆದ ಸುಮಾರು 6 ವರ್ಷಗಳಿಂದ ನಡೆಯುತ್ತಿರುವ 24/7 ಕುಡಿಯುವ ನೀರಿನ ಯೋಜನೆ ಸಂಪೂರ್ಣ ವಿಫಲವಾಗಿದ್ದು ಅದಕ್ಕೆ ಕಾರಣ ಮತ್ತು ವ್ಯಯಿಸಿದ ಹಣ ಎಷ್ಟು ಎಂಬುದನ್ನು ಪುರಸಭೆ ಮುಖ್ಯಾಧಿಕಾರಿಗಳು ತಿಳಿಸಲಿ ಎಂದು ಜೆಡಿಎಸ್ ಪಕ್ಷದ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ನಿಂಗಪ್ಪ ಬಾಳಿಕಾಯಿ ಹೇಳಿದರು. 

ಸೊಮವಾರ ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಯೋಜನೆ ಕಾಮಗಾರಿಯಲ್ಲಿ ಪೈಪಲೈನ ಅಳವಡಿಸಲು ಸಮತಟ್ಟಾದ ರಸ್ತೆಗಳನ್ನು ಅಗೆದು ಅವುಗಳನ್ನು ಮರಳಿ ಸಮ ಮಾಡದೇ ಹಾಗೆಯೇ ಬಿಡಲಾಗಿದೆ.ಹಲವೆಡೆ ಫ್ಲೇವರ್ ಬ್ಲಾಕ್‌ಗಳನ್ನು ತೆಗೆದು ಅಡ್ಡಾದಿಡ್ಡಿಯಾಗಿ ಹಾಗೇ ಬಿಡಲಾಗಿದ್ದು ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ,ದ್ವಿಚಕ್ರವಾಹನ ಸವಾರರಿಗೆ ತೊಂದರೆಯಾಗುತ್ತಿದೆ.ನೆಲವನ್ನು ಅಗೆದು ಹಾಗೇ ಬಿಡಲಾಗಿದ್ದು ಮರಳಿ ಅದನ್ನು ಯಾರು ರಿಪೇರಿ ಮಾಡುತ್ತಾರೆ ಎಂದು ಪ್ರಶ್ನಿಸಿದ ಅವರು ಜಿಲ್ಲಾಧಿಕಾರಿಗಳು ಈ ಕಡೆ ಗಮನ ಹರಿಸಲಿ ಎಂದರು. 

ಬಸ್‌ನಿಲ್ದಾಣದ ಹತ್ತಿರ ಇರುವ ಖಾಲಿ ಜಾಗವನ್ನು ಸರ್ಕಾರದ ವಿವಿಧ ಕಚೇರಿಗಳನ್ನು ಕಟ್ಟಲು ಮೀಸಲಾಗಿಡಲಾಗಿತ್ತು. ಆದರೆ ಈಗ ಅದು ಬಯಲು ಶೌಚಾಲಯವಾಗಿದ್ದು ಅ ಜಾಗೆಯಲ್ಲಿ ಅವೈಜ್ಞಾನಿಕವಾಗಿ ಶೌಚಾಲಯ ನಿರ್ಮಿಸಲಾಗಿದೆ.ಇದರಿಂದ ಅಮೂಲ್ಯವಾದ ಜಾಗವನ್ನು ಅಂದಗೆಡಿಸಲಾಗಿದೆ. 

ಪಟ್ಟಣದ ಚನ್ನಮ್ಮ ವೃತ್ತದಿಂದ  ಮಹಾದ್ವಾರದವರೆಗೂ ನಿರ್ಮಿಸಲಾಗುತ್ತಿರುವ ದ್ವಿಪಥ ರಸ್ತೆಯ ಎರಡೂ ಬದಿ ರಸ್ತೆಯನ್ನು ಅತಿಕ್ರಮಣ ಮಾಡಲಾಗಿದ್ದು ಅತಿಕ್ರಮಣ ಜಾಗೆಯನ್ನು ಹಾಗೇ ಬಿಟ್ಟು ರಸ್ತೆಯ ಅಗಲ ಕಡಿಮೆ ಮಾಡಲಾಗುತ್ತಿದೆ.ರಬಕವಿ-ಜಾಂಬೋಟ ರಾಜ್ಯ ಹೆದ್ದಾರಿ ನಿಯಮಾವಳಿ ಪ್ರಕಾರ  ರಸ್ತೆಯ ಅಗಲೀಕರಣ ಆಗಬೇಕು ಮತ್ತು ರಸ್ತೆಯ ಅತಿಕ್ರಮಣ ತೆರವುಗೊಳಿಸಬೇಕು.ಇಲ್ಲದಿದರೆ ನಾವು ಉಗ್ರ ಹೋರಾಟ ಮಾಡಲಾಗುವದು ಎಂದು ಅವರು ಎಚ್ಚರಿಸಿದರು. 

ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಸುರೇಶ ಮಡಿವಾಳರ,ಮುಖಂಡರಾದ ಮಹಾದೇವ ಕೋಳಿಗುಡ್ಡ,ರಘು ಅಂಬಿ,ವಿರೇಶ ನ್ಯಾಮಗೌಡ,ಮಹಾಲಿಂಗ ಕಲ್ಯಾಣಿ,ಸಿದ್ದಪ್ಪ ಅಂಬಿ,ಜಗದೀಶ ಬಡಿಗೇರ ಇದ್ದರು.