ಶಿಸ್ತು, ಸನ್ನಡತೆ ವಿದ್ಯಾರ್ಥಿಗಳ ನಿಜವಾದ ಸ್ವತ್ತು : ಸಿದ್ದೇಶ್ವರಾನಂದ ಸ್ವಾಮೀಜಿ

ಶಿಸ್ತು, ಸನ್ನಡತೆ ವಿದ್ಯಾರ್ಥಿಗಳ ನಿಜವಾದ ಸ್ವತ್ತು : ಸಿದ್ದೇಶ್ವರಾನಂದ ಸ್ವಾಮೀಜಿ Discipline, preparedness is the real asset of students : Siddeshwarananda Swamiji

ಮಹಾಲಿಂಗಪುರ 03: ಜ್ಞಾನಕ್ಕಿಂತ ಶಿಸ್ತು ಸನ್ನಡತೆಯೇ ವಿದ್ಯಾರ್ಥಿಗಳ ನಿಜವಾದ ಸ್ವತ್ತು ಎಂದು ಬೀದರದ ಚಟ್ನಳ್ಳಿ ಅಲ್ಲಮಪ್ರಭುದೇವರ ಸಿದ್ದೇಶ್ವರಾನಂದ ಸ್ವಾಮೀಜಿ ಹೇಳಿದರು. 

ಸ್ಥಳೀಯ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪಪೂ ಕಾಲೇಜು ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ನೈತಿಕ ಮೌಲ್ಯಗಳ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. 

ವಿದ್ಯಾರ್ಥಿಗಳು ವಿಧೇಯತೆ, ತನ್ಮಯತೆ, ಏಕಾಗ್ರತೆಯಿಂದ ಜ್ಞಾನ ಗಳಿಸಿ ಸಮಾಜದ ಋಣ ತೀರಿಸುವ ಮಹತ್ಕಾರ್ಯದಿಂದ ದೇಶದ ಆಸ್ತಿಯಾಗಬೇಕು. ಕಳಬೇಡ, ಕೊಲಬೇಡ.. ಎಂದು ಬಸವಣ್ಣನವರು ಹೇಳಿದ ಸಪ್ತ ಸೂತ್ರಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಆದರ್ಶವಂತರಾಗಬೇಕು ಎಂದರು. 

ಮಧ್ಯದಲ್ಲಿ ನಡೆದ ಸಂವಾದದಲ್ಲಿ ಪೂಜ್ಯಶ್ರೀಗಳು ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ ಹತ್ತಾರು ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಉಚಿತವಾಗಿ ನೀಡಿದರು. ತಾವು ಕೂಡ ಹುಬ್ಬಳ್ಳಿಯ ಕೆಎಲ್‌ಇ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದು ಅಕ್ಷರ ಋಣ ತೀರಿಸಲು ಪ್ರತಿ ಕಾಲೇಜಿಗೆ ತೆರಳಿ ವಿದ್ಯಾರ್ಥಿಗಳಿಗೆ ಉಚಿತ ನೈತಿಕ ಮೌಲ್ಯಗಳ ಬೋಧನೆ ಮಾಡುತ್ತಿರುವುದಾಗಿ ಹೇಳಿದರು. 

ಅನುಭಾವದಿಂದ 20 ಪುಸ್ತಕ ಬರೆದಿರುವ ಪೂಜ್ಯರು ಹತ್ತಾರು ಪುಸ್ತಕಗಳನ್ನು ಕಾಲೇಜಿನ ಗ್ರಂಥಾಲಯಲಯಕ್ಕೆ ನೀಡಿದರು. ನಂತರ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಪೂಜ್ಯರಿಗೆ ಗೌರವ ಕಾಣಿಕೆ ನೀಡಿ ಸನ್ಮಾನಿಸಿದರು. ಪ್ರಾಚಾರ್ಯ ಎಲ್‌.ಬಿ.ತುಪ್ಪದ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲ ಬಿ.ಎನ್‌.ಅರಕೇರಿ, ಉಪನ್ಯಾಸಕ ಬಿ.ಬಿ.ಯಲ್ಲಟ್ಟಿ, ಎಸ್‌.ವಿ.ಸಿದ್ನಾಳ, ಎಸ್‌.ಎಚ್‌.ಮೆಳವಂಕಿ, ಬಿ.ಎಂ.ಸಿದ್ನಾಳ, ಆರ್‌.ಎಸ್‌.ಕಲ್ಲೋಳಿ, ಮಹಾಲಿಂಗ ಉಪ್ಪಾರ ಹಾಗೂ ವಿದ್ಯಾರ್ಥಿಗಳು ಇದ್ದರು.