ಹಾಸ್ಟೆಲ್ ಹೊರಗುತ್ತಿಗೆ ನೌಕರರ ಪ್ರತಿಭಟನೆಕಾಯಂಮಾತಿಗಾಗಿ ಶಾಸನ ರೂಪಿಸಲು ಆಗ್ರಹ
ಧಾರವಾಡ 20 : ಕನಿಷ್ಟ ವೇತನ ರೂ. 31 ಸಾವಿರ ನಿಗದಿಗಾಗಿ, ಇಲಾಖೆಯಿಂದ ನೇರ ವೇತನ ಪಾವತಿಗಾಗಿ, ಸಿಬ್ಬಂದಿಗಳ ಸಂಖ್ಯೆ ಕಡಿತ ಆದೇಶ ರದ್ದು ಮಾಡಲು, ಬೀದರ್ ಮಾದರಿ ಸಹಕಾರ ಸಂಘದ ಗುತ್ತಿಗೆ ಮಾದರಿ ಎಲ್ಲಾ ಜಿಲ್ಲೆಗಳಲ್ಲಿ ವಿಸ್ತರಿಸಲು, ವಾರದ ರಜೆ, ಬಾಕಿ ಸಂಬಳ ಪಾವತಿ, ಇಎಸ್ಐ, ಭವಿಷ್ಯನಿಧಿ ಕಡ್ಡಾಯ ಜಾರಿಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ (ರಿ). ಧಾರವಾಡ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಇಂದು ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ ವಿವಿಧ ಸರ್ಕಾರಿ ಹಾಸ್ಟೆಲ್ಗಳಲ್ಲಿ 5-10 ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಈ ನೌಕರರ ಜೀವನ ಅತಂತ್ರ ಸ್ಥಿತಿಯಲ್ಲಿದೆ. ಸರಕಾರದ ವಿವಿಧ ಇಲಾಖೆಗಳಲ್ಲಿ ಖಾಯಂ ಸ್ವರೂಪದ ಈ ಕೆಲಸಗಳಿಗೆ ಗುತ್ತಿಗೆ ಆಧಾರದಲ್ಲಿ ದುಡಿಸಿಕೊಳ್ಳುತ್ತಿರುವುದು ಕಾನೂನಿನ ಉಲ್ಲಂಘನೆಯಾಗಿದೆ. 5 ವರ್ಷಗಳಿಗಿಂತ ಹೆಚ್ಚು ಸೇವೆ ಸಲ್ಲಿಸಿದ ಕಾಯಂಮೇತರ ನೌಕರರನ್ನು ಕಾಯಂಗೊಳಿಸಲು ರಾಜ್ಯ ಸರಕಾರ ಶಾಸನವನ್ನು ರೂಪಿಸಬೇಕು ಎಂದು ಆಗ್ರಹಿಸಿದರು.ಸಿಐಟಿಯು ಜಿಲ್ಲಾಧ್ಯಕ್ಷ ಬಿ.ಐ.ಈಳಿಗೇರ, ಸಂಘದ ಜಿಲ್ಲಾಧ್ಯಕ್ಷ ಹನಮಂತ ಮ್ಯಾಗೇರಿ, ಮುಖಂಡರಾದ ಬಸವರಾಜ ಚವ್ಹಾಣ, ಅಶೋಕ ಹಾವೇರಿ, ರೂಪಾ ಗೊಂದಲೆ, ಬಸಮ್ಮ ಗಂಜಿಗಟ್ಟಿ ಮುಂತಾದವರು ಉಪಸ್ಥಿತರಿದ್ದರು.