ಸಂಸ್ಕೃತಿ ಕುಂಭ-ಮಲೆನಾಡು ಉತ್ಸವ; ಪಂಪ್ ಸ್ಟೋರೇಜ್ ವಿರುದ್ಧ ಹೋರಾಟ: ಚನ್ನಬಸವ ಸ್ವಾಮೀಜಿ

Culture Kumbh-Malenadu Festival; Fight against pump storage: Channabasava Swamiji

ಸಂಸ್ಕೃತಿ ಕುಂಭ-ಮಲೆನಾಡು ಉತ್ಸವ; ಪಂಪ್ ಸ್ಟೋರೇಜ್ ವಿರುದ್ಧ ಹೋರಾಟ: ಚನ್ನಬಸವ ಸ್ವಾಮೀಜಿ  

ಹೊನ್ನಾವರ 10: ಗೇರುಸೊಪ್ಪ ಬಳಿ ನಿರ್ಮಿಸಲು ಉದ್ದೇಶಿಸಲಾಗಿರುವ ಪಂಪ್ ಸ್ಟೋರೇಜ್ ಘಟಕ ನಿರ್ಮಾಣಕ್ಕೆ ನಮ್ಮ ವಿರೋಧವಿದೆ. ಹೀಗಾಗಿ ಈ ಭಾಗದ ಜನರು ಹೋರಾಟಕ್ಕೆ ಮುಂದಾಗಬೇಕು ಎಂದು ಹೊಸನಗರ ಮೂಲೆಗದ್ದೆ ಮಠದ ಶ್ರೀ ಚನ್ನಬಸವ ಸ್ವಾಮೀಜಿ ಹೇಳಿದರು.  ಅವರು ತಾಲೂಕಿನ ಶ್ರೀ ವಿಶ್ವವೀರಾಂಜನೇಯ ಮಹಾಸಂಸ್ಥಾನಮ್ ಹೇಮಪುರ ಮಹಾಪೀಠ, ಶ್ರೀ ವೀರಾಂಜನೇಯ ಧಾರ್ಮಿಕ ಹಾಗೂ ದತ್ತಿ ಸಂಸ್ಥೆ ಹಾಗೂ ಸಿಲೆಕ್ಟ್‌ ಫೌಂಡೇಶನ್ ಗೇರಸೊಪ್ಪದ, ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿ ಸಂಸ್ಕೃತಿ ಕುಂಭ-ಮಲೆನಾಡು ಉತ್ಸವ ಕಾರ್ಯಕ್ರಮದ ಧರ್ಮಸಭೆಯಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.  ಮಲೆನಾಡು ಎಲ್ಲ ಬಗೆಯಲ್ಲೂ ಶ್ರೀಂಮತಿಕೆಯನ್ನು ಹೊಂದಿದೆ. ಸಂಸ್ಕೃತಿ, ಸಂಪ್ರದಾಯಕ್ಕೆ ಮಲೆನಾಡು ಪ್ರಸಿದ್ಧಿಯಾಗಿದೆ. ಆದರೆ ಈ ಭಾಗದ ಅಭಿವೃದ್ಧಿ ವಿಚಾರದ ಪ್ರಶ್ನೆ ಬಂದಾಗ ಅಭಿವೃದ್ಧಿಗೆ ಹಿನ್ನಡೆಯಾಗುವ ವಿಚಾರಕ್ಕೆ ಪ್ರತಿಯೊಬ್ಬರು ಧ್ವನಿ ಎತ್ತಬೇಕು. ಶ್ರೀಮಂತರಿಂದ ಭಾರತಕ್ಕೆ ಬೆಲೆ ಬಂದಿಲ್ಲ. ಈ ನೆಲದಲ್ಲಿ ಆಗಿ ಹೋದ ಮಹಾನ್ ದಾರ್ಶನಿಕರು, ಸಂತರಿಂದ ಭಾರತ ವಿಶ್ವಗುರುವಾಗಿದೆ ಎಂದರು.  ಪ್ತಸ್ತುತ ದಿನಮಾನದಲ್ಲಿ ನಿಷ್ಕಲ್ಮಶವಾಗಿರುವ ಭಕ್ತ ಸಿಗುವುದು ಬಹಳ ಕಷ್ಟ. ನಮ್ಮ ಮಕ್ಕಳಿಗೆ ಸಂಸ್ಕಾರದ ಕೊರತೆ ಇದೆ. ಇಂದು ಮಕ್ಕಳಿಗೆ ಸಂಸ್ಕಾರ ಕೊಡದಂತ ಶಿಕ್ಷಣ ನೀಡಲಾಗುತ್ತಿದೆ. ತಂದೆ-ತಾಯಿಯ ಬಗ್ಗೆ ಗೌರವ ಭಾವನೆ ಇಲ್ಲದಂತಾಗಿದ್ದಾರೆ. ಏನೆಲ್ಲ ಕೊಟ್ಟ ತಾಯಿಗೆ ನಾವು ನೋಡುತ್ತಿಲ್ಲ. ಈ ನಿಟ್ಟಿನಲ್ಲಿ ಮಕ್ಕಳಿಗೆ ಸಂಸ್ಕಾರ ಸಿಗಬೇಕಾದರೆ ಗುರುಪರಂಪರೆಯನ್ನು ಘಟ್ಟಿಗೊಳಿಸಬೇಕು. ಸಮಾಜದ ವ್ಯವಸ್ಥೆ ಘಟ್ಟಿಯಾಗಲು ಆತ್ಮನೆ ನೀವಾಗಬೇಕು ಎಂದರು.  ಸಾನಿಧ್ಯ ವಹಿಸಿದ್ದ ಮೈಸೂರಿನ ಅವಧೂತರಾದ ಅರ್ಜುನ್ ಮಹಾರಾಜರು ಮಾತನಾಡಿ, ಭಗವಂತನನ್ನು ನಿಮ್ಮಲ್ಲೆ ಕಾಣಬೇಕು. ಒಳ್ಳೆ ಕೆಲಸ ಮಾಡುವವನೆ ನಿಜವಾದ ಧರ್ಮವಂತ. ಒಳ್ಳೆ ಕೆಲಸ ಬಿಟ್ಟು ಬೇರೆನಾದರೂ ಮಾಡಿದರು ಸದಾ ಸುದ್ದಿಯಲ್ಲಿರುತ್ತಾರೆ. ಸಮಾಜದಲ್ಲಿ ಒಳ್ಳೆ ಕೆಲಸಕ್ಕೆ ಬೆಲೆ ಇಲ್ಲ. ಒಳ್ಳೆ ಕೆಲಸ ಮಾಡುವುದು ನಮ್ಮ ಕೆಲಸ, ತೀರ್ಮಾನ ಭಗವಂತನದ್ದು ಎಂದರು.  ಸಾನಿಧ್ಯ ವಹಿಸಿದ್ದ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ಮಾರುತಿ ಗುರೂಜಿ ಮಾತನಾಡಿ, ಧರ್ಮವನ್ನು ಜಾತಿ ಎಂದು ಬಿಂಬಿಸಲಾಗುತ್ತಿದೆ. ಆದರೆ ಧರ್ಮ ಜಾತಿ ಅಲ್ಲ. ಪ್ರತಿಯೊಬ್ಬರಿಗೂ ಒಂದೊಂದು ಧರ್ಮ ಪಾಲನೆ ಇರುತ್ತದೆ. ಸನ್ನಡತೆಯಲ್ಲಿ ಮಾಡುವ ಕಾರ್ಯವೇ ಧರ್ಮ. ಸಾಮಾಜಿಕ ವ್ಯವಸ್ಥೆಯಲ್ಲಿ ಜ್ಞಾನದ ಕೊರತೆ ಇದೆ. ಶಿಕ್ಷಣದಲ್ಲಿ ನಾವು ಪ್ರಗತಿ ಸಾಧಿಸಿದ್ದೇವೆ ಎಂದು ಹೇಳುತ್ತೇವೆ ಆದರೆ ನಮ್ಮಲ್ಲಿ ನೈತಿಕ ಶಿಕ್ಷಣದ ಕೊರತೆ ಇದೆ ಎಂದು ಕಳಕಳಿ ವ್ಯಕ್ತಪಡಿಸಿದರು. ಶಿವನಾಗ ಅವಧೂತ ಪಾರ್ಥ ಗುರೂಜಿ ಸಾನಿಧ್ಯ ವಹಿಸಿ ಮಾತನಾಡಿದರು.  ಕಾರ್ಯಕ್ರಮದಲ್ಲಿ ಧಾರವಾಡ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ್, ಸಮನ್ವಯ ಟ್ರಸ್ಟ್‌ ಸಂಸ್ಥಾಪಕ ಸಮನ್ವಯ ಕಾಶಿ, ನಾಮದಾರಿ ಹಿತರಕ್ಷಣ ವೇದಿಕೆ ಅಧ್ಯಕ್ಷ ವಿಕ್ರಮ್ ನಾಯ್ಕ್‌, ಖರ್ವಾ ಗ್ರಾಪಂ ಅಧ್ಯಕ್ಷ ಶ್ರೀಧರ ನಾರಾಯಣ ನಾಯ್ಕ್‌, ಸೀಮಾ ಮುಖ್ಯಬಪ್ರಾಣ ದೇವಸ್ಥಾನದ ಪ್ರಧಾನ ಅರ್ಚಕ ಸೂರಾಲು ಚಂದ್ರಶೇಖರ ಭಟ್ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಭಕ್ತರು ಇದ್ದರು.