ಹಿಮಾಚಲ ಪ್ರದೇಶದಲ್ಲಿ ಕಟ್ಟಡ ಕುಸಿತ: 11 ಸೈನಿಕರು ಸೇರಿ 12 ಮಂದಿ ಸಾವು

ಹಿಮಾಚಲ ಪ್ರದೇಶದಲ್ಲಿ ಕಟ್ಟಡ ಕುಸಿತ: 11 ಸೈನಿಕರು ಸೇರಿ 12 ಮಂದಿ ಸಾವು

 ಸೊಲನ್,  ಜು 15 (ಯುಎನ್ಐ) ಭಾರೀ ಮಳೆಯಿಂದಾಗಿ ಹಿಮಾಚಲ ಪ್ರದೇಶದ ಸೋಲನ್ ಎಂಬಲ್ಲಿ ನಿನ್ನೆ ಸಂಜೆ  ಬಹುಮಹಡಿ ಕಟ್ಟಡ ಕುಸಿದ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 12ಕ್ಕೇರಿದೆ. ಮೃತರಲ್ಲಿ 11 ಮಂದಿ ಸೈನಿಕರು ಸೇರಿದ್ದಾರೆ ಎಂದು ಅಧಿಕಾರಿಗಳು ಸೋಮವಾರ  ತಿಳಿಸಿದ್ದಾರೆ. ಅವಶೇಷಗಳಡಿಯಿಂದ ಇನ್ನೂ ನಾಲ್ವರು ಸೈನಿಕರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು,  ಸಾವಿನ ಸಂಖ್ಯೆ 12ಕ್ಕೇರಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾನುವಾರದ ಬಹುಮಹಡಿ ಉಪಾಹಾರ ಗೃಹ ಕುಸಿತ ಬಳಿಕ ಪರಿಹಾರ ಕಾರ್ಯಾಚರಣೆಯ ನಂತರ ರಾಜ್ಯ ಸರ್ಕಾರ ಸಾವಿನ ಸಂಖ್ಯೆಯನ್ನು ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರ ಪತ್ರಿಕಾ ಕಾರ್ಯದರ್ಶಿ  ರಾಜೀವ್ ಠಾಕೂರ್ ಅವರು 12 ಮಂದಿ ಸಾವನ್ನಪ್ಪಿರುವುದನ್ನು ದೃಢಪಡಿಸಿದ್ದಾರೆ. 30 ರಕ್ಷಣಾ ಸಿಬ್ಬಂದಿ ಕಾಣೆಯಾಗಿದ್ದು, ಅವರಲ್ಲಿ 29 ಮಂದಿಯನ್ನು ಹೊರತೆಗೆಯಲಾಗಿದೆ. ಅವರಲ್ಲಿ 11 ಜನ ಮೃತಪಟ್ಟಿದ್ದು, 8 ಮಂದಿ ಗಾಯಗೊಂಡಿದ್ದಾರೆ. ಓರ್ವ ಯೋಧ ಇನ್ನೂ ಸಿಕ್ಕಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ. 12 ಮಂದಿ ನಾಗರಿಕರನ್ನು ರಕ್ಷಿಸಲಾಗಿದ್ದು, ಅವರಲ್ಲಿ 11 ಮಂದಿ ಗಾಯಗೊಂಡಿದ್ದು,  ಓರ್ವ ಮೃತಪಟ್ಟಿದ್ದಾರೆ. ಭಾನುವಾರ ಸುಮಾರು ಸಂಜೆ 4 ಗಂಟೆ ಸುಮಾರಿಗೆ ನಹಾನ್-ಕುಮಾರ್  ಹಟ್ಟಿ ರಸ್ತೆಯಲ್ಲಿ ಈ ದುರಂತ ಸಂಭವಿಸಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ  ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ  ದಾಖಲಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ. ಮುಖ್ಯಮಂತ್ರಿ ಜೈರಾಮ್ ಠಾಕೂರ್, ವಿಧಾನಸಭಾ ಸ್ಪೀಕರ್ ಡಾ.ರಾಜೀವ್ ಬಿಂದಲಾ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ಡಾ.ರಾಜೀವ್ ಶೆಹ್ಜಾಲ್ ಆಸ್ಪತ್ರೆ ಮತ್ತು ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗಾಯಗೊಂಡಿರುವ ಸೈನಿಕರು ಮತ್ತು ನಾಗರಿಕರನ್ನು ಭೇಟಿಯಾಗಿದ್ದಾರೆ. ಘಟನೆಯ ಬಗ್ಗೆ ತನಿಖೆಗೆ ಮುಖ್ಯಮಂತ್ರಿ ಆದೇಶಿಸಿದ್ದಾರೆ. ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಅವರು ನಿರ್ದೆಶನ್  ನೀಡಿದ್ದಾರೆ.