ಅಂಗಾಂಗ ವೈಫಲ್ಯದಿಂದ ಭೂತ ರಾಮನಹಟ್ಟಿ ಮೃಗಾಲಯದ ಶೌರ್ಯ ಸಾವು
ಬೆಳಗಾವಿ 25: ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದ ಹುಲಿ "ಶೌರ್ಯ’ ರವಿವಾರ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಭೂತ ರಾಮನಹಟ್ಟಿಯಲ್ಲಿರುವ ಕಿರುಮೃಗಾಲಯದಲ್ಲಿದ್ದ 13 ವರ್ಷದ ಈ ಶೌರ್ಯ ಎಂಬ ಗಂಡು ಹುಲಿ ಸಾವು ಕಂಡಿದೆ. ಅಪರೂಪದ ರೋಗದಿಂದ ಬಳಲುತ್ತಿದ್ದ ಈ ಹುಲಿ ಕಳೆದ 21 ದಿನಗಳಿಂದ ತಜ್ಞ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಾರಿಯಾ ಕ್ರಿಷ್ಟು ರಾಜಾ ತಿಳಿಸಿದ್ದಾರೆ.
ಕಳೆದ ವರ್ಷವೂ ಇಂತಹ ಆರೋಗ್ಯ ಸಮಸ್ಯೆಯಿಂದ ಈ ಹುಲಿ ಬಳಲುತ್ತಿತ್ತು. ಆಗ ಚಿಕಿತ್ಸೆ ನೀಡಿದಾಗ ಗುಣಮುಖವಾಗಿತ್ತು. ಆದರೆ ಈ ವರ್ಷ ಮತ್ತೆ ಕಾಯಿಲೆ ಕಾಣಿಸಿಕೊಂಡಿದೆ. 2021ರಲ್ಲಿ ಬನ್ನೇರುಘಟ್ಟ ಮೃಗಾಲಯದಿಂದ ಬೆಳಗಾವಿ ಕಿರು ಮೃಗಾಲಯಕ್ಕೆ ಈ ಹುಲಿಯನ್ನು ತರಲಾಗಿತ್ತು. ಮೂರು ವರ್ಷಗಳಿಂದ ಪ್ರವಾಸಿಗರು ಈ ಹುಲಿಯ ಚಲನ ವಲನಗಳನ್ನು ಕಂಡು ಸಂತಸ ಪಡುತ್ತಿದ್ದರು. ಆದರೆ, ಅದು ಇನ್ನು ನೆನಪು ಮಾತ್ರ.
ಮೃತ ಹುಲಿಯ ಮರಣೋತ್ತರ ಪರೀಕ್ಷೆ ನಂತರ ಕೇಂದ್ರ ಸರಕಾರದ ನಿಯಮದಂತೆ ಮೃಗಾಲಯದ ಆವರಣದಲ್ಲೇ ಅಂತ್ಯಕ್ರಿಯೆ ಮಾಡಲಾಗಿದೆ. ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಮಾರಿಯಾ ಕ್ರಿಷ್ಟು ರಾಜಾ, ಅರಣ್ಯ ಸಂರಕ್ಷಣಾಧಿಕಾರಿ ನಾಗರಾಜ ಬಾಳೆಹೊಸೂರು, ವಲಯ ಅರಣ್ಯ ಅಧಿಕಾರಿ ಪವನ್ ಕರನಿಂಗ, ಮೃಗಾಲಯದ ವೈದ್ಯ ಡಾ. ನಾಗೇಶ ಹುಯಿಲಗೋಳ, ಪಶು ವೈದ್ಯಕೀಯ ಇಲಾಖೆ ವೈದ್ಯ ಡಾ. ಪ್ರಶಾಂತ ಕಾಂಬಳೆ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.