ವಿಜಯಪುರ 15: ರೈತರ ಬಾಳನ್ನು ಹಸನಾಗಿಸಲು ರೂಪಿಸಿರುವ ನೀರಾವರಿ ಯೋಜನೆಗಳಿಂದಾಗಿ ಅನ್ನದಾತರ ಬಂಜರು ಜಮೀನು ಬಂಗಾರದ ಭೂಮಿಯಾಗಿ ಪರಿವರ್ತನೆಯಾಗಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ರವಿವಾರ ತಿಕೋಟಾ ತಾಲೂಕಿನ ಮಲಕನದೇವರಹಟ್ಟಿಯ ಸಾಳುಂಕೆ ವಸ್ತಿಯ ಬಳಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ ರೂ. 250 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಜಿನುಗು ಕೆರೆ ನಿರ್ಮಾಣ(ಸೈಟ್- 2)ಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತಮಾಡಿದರು.
ಈ ಜಿನುಗು ಕೆರೆ 4.73 ಚ. ಕಿ. ಮೀ. ವ್ಯಾಪ್ತಿಯನ್ನು ಒಳಗೊಂಡಿದ್ದು, 9 ಎಕರೆ ಪ್ರದೇಶದಲ್ಲಿ 240 ಮೀಟರ್ ಅಂದರೆ 787 ಅಡಿ ಬಂಡ್ ಹೊಂದಿದೆ. 29 ಅಡಿ ಆಳದವರೆಗೆ ಒಟ್ಟು 2.33 ಎಂ.ಸಿ.ಎಫ್.ಟಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಇದರಿಂದ 136 ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ದೊರೆಯಲಿದ್ದು, ತೆರೆದ ಭಾವಿ ಮತ್ತು ಬೋರವೆಲ್ ಗಳಲ್ಲಿ ಅಂತರ್ಜಲ ಕೂಡ ವೃದ್ಧಿಯಾಗಲಿದೆ. ಈ ಜಿನುಗು ಕೆರೆಗೆ ವರ್ಷದಲ್ಲಿ ಎರಡು ಬಾರಿ ನೀರು ಹರಿಸಲಾಗುವುದು ಎಂದು ಸಚಿವರು ತಿಳಿಸಿದರು.
ನೀರಾವರಿಯಿಂದಾಗಿ ರೈತರ ಭೂಮಿಗೆ ಭಾರಿ ಬೆಲೆ ಬಂದಿದ್ದು, ಯಾರೂ ಭೂಮಿ ಮಾರಿಕೊಳ್ಳಬೇಡಿ. ಎಲ್ಲರು ಕಾಮಗಾರಿಗೆ ಸಹಕರಿಸಿಬೇಕು. ಮೂರು ತಿಂಗಳಲ್ಲಿ ಈ ಕಾಮಗಾರಿ ಪೂರ್ಣವಾಗಲಿದ್ದು, ಈ ಕೆರೆ ಮತ್ತು ಈ ಮುಂಚೆ ನಿರ್ಮಿಸಲಾಗಿರುವ ಕೆರೆ ಎರಡನ್ನು ಒಟ್ಟಿಗೆ ಉದ್ಘಾಟನೆ ಮಾಡಲಾಗುವುದು ಎಂದು ತಿಳಿಸಿದ ಅವರು, ಗುಣಮಟ್ಡದ ಕಾಮಗಾರಿ ಮಾಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ತಬಚಿ- ಬಬಲೇಶ್ವರ ಏತನೀರಾವರಿ ಯೋಜನೆಯಡಿ ನಮಗೆ ಹಂಚಿಕೆಯಾಗಿರುವ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಎರಡು ಕಡೆ ಸರಕಾರಿ ಜಮೀನಿನಲ್ಲಿ ಹೊಂಡಗಳನ್ನು ನಿರ್ಮಿಸಿ ಅಲ್ಲಿ ಒಂದು ಟಿಎಂಸಿ ನೀರು ಸಂಗ್ರಹಿಸಲು ಯೋಜನೆ ರೂಪಿಸಲಾಗುತ್ತಿದೆ. ಇದಕ್ಕೆ ಎಷ್ಟೇ ಹಣ ಖರ್ಚಾದರೂ ಅದನ್ನು ಜಾರಿ ಮಾಡಲಾಗುವುದು ಎಂದು ಅವರು ತಿಳಿಸಿದರು.
ಸಣ್ಣ ನೀರಾವರಿ ಇಲಾಖೆ ಸೆಕ್ಷನ್ ಆಪೀಸರ್ ವಿಶ್ವನಾಥ ಪೀರಶೆಟ್ಟಿ ಮಾತನಾಡಿ, ಕೆರೆ ನಿರ್ಮಾಣದ ಮಾಹಿತಿ ನೀಡಿದರು.
ಜಿ. ಪಂ. ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ ಮಾತನಾಡಿ, ಈ ಯೋಜನೆಯಿಂದ ಸುತ್ತಮುತ್ತಲಿನ ಪ್ರದೇಶಕ್ಕೆ ಅನುಕೂಲವಾಗಲಿದೆ. ಮಳೆಗಾಲದಲ್ಲಿ ಮಾತ್ರವಲ್ಲ ಬೇಸಿಗೆಯಲ್ಲೂ ನೀರು ಪೂರೈಸಲು ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಮುಖಂಡರಾದ ದಯಾನಂದ ಮಠಪತಿ, ಜಲಸಂಪನ್ಮೂಲ ಇಲಾಖೆ ಎಇಇ ಅಂಬಣ್ಣ ಹರಳಯ್ಯ, ತಹಸೀಲ್ದಾರ ಸುರೇಶ ಚವಲರ, ತಾ. ಪಂ. ಇಓ ಬಸವಂತರಾಯ, ಬಿರಾದಾರ, ಬಿಇಓ ಪ್ರಮೋದಿನಿ ಬಳೂಲಮಟ್ಟಿ, ಸಣ್ಣ ನೀರಾವರಿ ಇಲಾಖೆ ಎಇಇ ವಿನೋದ ವಸ್ತ್ರದ, ಹೆಸ್ಕಾಂ ಎಇಇ ಗೋವಿಂದ ಎಸ್. ದೇಶಮುಖ ಮುಂತಾದವರು ಉಪಸ್ಥಿತರಿದ್ದರು.