ಬನಶಂಕರಿದೇವಿ ಜಯಂತಿ: ತೊಟ್ಟಿಲು ಕಾರ್ಯಕ್ರಮ
ಮಹಾಲಿಂಗಪುರ 26: ಅಂತರಂಗದಲ್ಲಿ ದೇವ, ದೇವತೆಗಳ ಕುರಿತು ಭಕ್ತಿಭಾವ ಮೂಡಿದಲ್ಲಿ ನಮ್ಮಲ್ಲಿಯ ದುರ್ಗುಣಗಳು ಅಳಿಯುತ್ತವೆ ಎಂದು ಸ್ಥಳೀಯ ಸಿದ್ಧಾರೂಢ ಮಠದ ಸಹಜಾನಂದ ಶ್ರೀಗಳು ಹೇಳಿದರು.
ನಗರದ ಬನಶಂಕರಿ ದೇವಸ್ಥಾನದಲ್ಲಿ ದೇವಿಯ ಜಯಂತೋತ್ಸವ ಅಂಗವಾಗಿ ನಡೆದ ತೊಟ್ಟಿಲು ಕಾರ್ಯಕ್ರಮದಲ್ಲಿ ಭಕ್ತರಿಗೆ ಆಶಿರ್ವಚನ ನೀಡಿ ಮಾತನಾಡಿದ ಅವರು, ಆದಿ, ಅನಾದಿ ಕಾಲದಿಂದಲೂ ಅವ್ಯಕ್ತ ಶಕ್ತಿ ಜಗತ್ತಿನ ಆಗು ಹೋಗುಗಳನ್ನು ನಿಯಂತ್ರಿಸುತ್ತಿದೆ. ಅದುವೆ ದೇವಿ, ದೇವ ಶಕ್ತಿಯಾಗಿದೆ ಎಂದರು.
ರನ್ನ ಬೆಳಗಳಿಯ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ಪಟ್ಟಣದಲ್ಲಿ ಅಧ್ಯಾತ್ಮ ಜೀವಿಗಳು ಸಾಕಷ್ಟಿರುವುದರಿಂದ, ಪಟ್ಟಣ ಆಧ್ಯಾತ್ಮಿಕತೆಗೆ ಹೆಸರು ಮಾಡಿದೆ.ಇಂದಿನ ಪೀಳಿಗೆ ಹುಟ್ಟು ಹಬ್ಬದ ಹೆಸರಿನಲ್ಲಿ ಧಾರ್ಮಿಕತೆ ಮರೆತು, ಪಾಶ್ಚಾತ್ಯ ಸಂಸ್ಕೃತಿಯತ್ತ ವಾಲುತ್ತಿದೆ. ಇವರಿಗೆ ಪ್ರಜ್ಞಾವಂತರು ದೇಶಿ ಸಂಸ್ಕೃತಿ ಕುರಿತು ಅರಿವು ಮೂಡಿಸಬೇಕು.ಇಲ್ಲವಾದಲ್ಲಿ ಮುಂದಿನ ಪೀಳಿಗೆಗೆ ದೇಶಿ ಸಂಸ್ಕಾರ ಮರಿಚಿಕೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಅಮಲಝೆರಿಯ ಜ್ಞಾನಮಯಾನಂದ ಮಹಾಸ್ವಾಮಿಜಿ ಮಾತನಾಡಿ,ಈ ಬನಶಂಕರಿ ದೇವಸ್ಥಾನದ ಅಂದಿನ ಮತ್ತು ಇಂದಿನ ಹಿರಿಯರು ಮಹಾಲಿಂಗಪುರವನ್ನು ಭಕ್ತಿಯ ಪುರವನ್ನಾಗಿಸಿ, ಅಧ್ಯಾತ್ಮದ ಸಾರವನ್ನು ಜಗತ್ತಿಗೆ ಉಣ ಬಡಿಸುವ ಕೆಲಸ ಮಾಡಿದ್ದಾರೆ. ಈ ಇಂತಹ ಕಾರ್ಯಕ್ರಮಗಳಿಂದಲೆ ಕೊಪ್ಪಳದ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಕೂಡ ಅಧ್ಯಾತ್ಮವನ್ನು ಮೆಚ್ಚಿಕೊಂಡಿದ್ದಾರೆ ಎಂದರು.
ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ, ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಉಪಾಧ್ಯಕ್ಷೆ ಶೀಲಾ ಭಾವಿಕಟ್ಟಿ, ಪಿಕೆಪಿಎಸ್ ಅಧ್ಯಕ್ಷರ ಬಸನಗೌಡ ಪಾಟೀಲ, ಮುಖಂಡರಾದ ಮಲ್ಲಪ ಭಾವಿಕಟ್ಟಿ,ಲಕ್ಕಪ್ಪ ಚಮಕೇರಿ, ಪರ್ಪ ಬೆಳಗಲಿ, ಜಿ ಎಸ್ ಗೊಂಬಿ, ಗುರುಪಾದ ಅಂಬಿ,ಡಾ ಬಿ ಡಿ ಸೊರಗಾಂವಿ, ಚಂದ್ರು ಕಾಗಿ, ಸಿದ್ದಗಿರೆಪ್ಪ ಕಾಗಿ, ಶ್ರೀಶೈಲಪ್ಪ ಬಾಡನ್ನವರ, ಎಸ್ ಐ ನುಚ್ಚಿ, ಶಿವಲಿಂಗ ಟಿರ್ಕಿ, ಈಶ್ವರ ಚಮಕೇರಿ,ಬಿ ಜಿ ಹೊಸೂರ, ಸತೀಶ ಸೊರಗಾಂವಿ, ಮಂಜುನಾಥ ಭಾವಿಕಟ್ಟಿ, ಪುರಸಭೆ ಸದಸ್ಯರಾದ ರವಿ ಜವಳಗಿ, ರಾಜು ಚಮಕೇರಿ ಸೇರಿದಂತೆ ಅನೇಕ ಊರಿನ ಹಿರಿಯರು ಮಹಿಳೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.