ಇಂದು ಥಿಯೇಟರ್‌ನಲ್ಲಿ ಆ್ಯಕ್ಷನ್, ಥ್ರಿಲ್ಲರ್ 'ಶಿಖಂಡಿ'

ಇಂದು ಥಿಯೇಟರ್‌ನಲ್ಲಿ ಆ್ಯಕ್ಷನ್, ಥ್ರಿಲ್ಲರ್ 'ಶಿಖಂಡಿ' Action thriller 'Shikhandi' in theaters today

ಮಹಾಭಾರತದಲ್ಲಿ ಬರುವ ಶಿಖಂಡಿ ಪಾತ್ರದ ಪ್ರೇರಣೆಯಿಂದ ಸಿದ್ದವಾಗಿರುವ 'ಶಿಖಂಡಿ' ಸಿನಿಮಾ ಇಂದು (ಮೇ 15) ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಈಗಾಗಲೇ ಹಾಡು, ಟ್ರೇಲರ್‌ನಿಂದ ಕುತೂಹಲ ಮೂಡಿಸಿರುವ ಶಿಖಂಡಿ ಚಿತ್ರದ ಸೆಲೆಬ್ರಿಟಿ ಶೋ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದ್ದು, ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾ ನೋಡಿದ ಹಲವಾರು ಸೆಲೆಬ್ರಿಟಿಗಳು ಚಿತ್ರದ ಕಥೆ, ಮೇಕಿಂಗ್ ಹಾಗೂ ಹಿನ್ನಲೆ ಸಂಗೀತದ ಬಗ್ಗೆ ಮಾತನಾಡುತ್ತಿದ್ದಾರೆ. ಅದರಲ್ಲೂ ಚಿತ್ರದಲ್ಲಿ ಬರುವ ಮಂಗಳಮುಖಿಯರ ಪಾತ್ರಗಳು ಜನರಿಗೆ ತುಂಬಾ ಇಷ್ಟ ಆಗುತ್ತದೆ ಎಂದು ಹೇಳುತ್ತಿದ್ದಾರೆ. ಜೊತೆಗೆ ಕಥೆಯಲ್ಲಿ ಸಮಾಜದಲ್ಲಿ ನಡೆಯುತ್ತಿರುವ ಮೋಸ, ವಂಚನೆ, ಮಾನವಿಯತೆ ಬಗ್ಗೆ ಹೇಳಲಾಗಿದೆ. ಈ ಚಿತ್ರವನ್ನು ಮೊದಲಬಾರಿ ಪೋಲಾ ಮೂವೀಸ್ ಬ್ಯಾನರ್‌ನಲ್ಲಿ ಪೋಲಾ ಪ್ರವೀಣ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ಮೂಲತಃ ಹೊಟೇಲ್ ಉದ್ಯಮಿ ಆಗಿರುವ ಪ್ರೆವೀಣ್ ಕುಮಾರ್ ಚಿತ್ರದಲ್ಲಿ ನಾಯಕಿಯ ತಂದೆ ಪಾತ್ರಕ್ಕೆ ಬಣ್ಣ ಕೂಡ ಹಚ್ಚಿದ್ದಾರೆ.  

ಬಳ್ಳಾರಿ ಪ್ರತಿಭೆ ವಿ. ಗುರುಮೂರ್ತಿ ಈ ಚಿತ್ರಕ್ಕೆ ಕಥೆ ಬರೆದು, ನಿರ್ದೇಶನ ಮಾಡಿದ್ದಾರೆ. ಇವರು ಈ ಮೊದಲು ಮಾರಕಾಸ್ತ್ರ ಎಂಬ ಚಿತ್ರ ನಿರ್ದೇಶಿಸಿದ್ದರು. ಶಿಖಂಡಿ ಅವರ ಎರಡನೇ ಪ್ರಯತ್ನ. ಚಿತ್ರದ ಬಗ್ಗೆ ಮಾತನಾಡುವ ಗುರುಮೂರ್ತಿ, 'ಟ್ರೇಲರ್, ಹಾಡುಗಳು ಚಿತ್ರದ ಶಾಂಪಲ್ ಅಷ್ಟೇ. ಸಿನಿಮಾದಲ್ಲಿ ತುಂಬಾ ವಿಷಯವಿದೆ. ನಾವು ಕಷ್ಟಬಿದ್ದು ಶ್ರಮದಿಂದ ಚಿತ್ರ ಮಾಡಿದ್ದೇವೆ. ಮೊದಲು ಕನ್ನಡ ನಂತರ ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ಸಿನಿಮಾ ರೀಲೀಸ್ ಮಾಡುವ ಪ್ಲ್ಯಾನ್ ಇದೆ' ಎಂದು ಹೇಳಿದ್ದಾರೆ. ಈ ಚಿತ್ರದ ನಾಯಕನಾಗಿ ಯುವರಾಜ್, ನಾಯಕಿಯಾಗಿ ಖ್ಯಾತಿ ಬಣ್ಣ ಹಚ್ಚಿದ್ದಾರೆ. ಉಳಿದ ತಾರಾಗಣದಲ್ಲಿ ದೀಪಕ್ ಶೆಟ್ಟಿ, ನಿಕಿತಾ ಸ್ವಾಮಿ, ನೀತು ವನಜಾಕ್ಷಿ, ರಾಘವೇಂದ್ರ, ನಯನಾ, ವಿಜಯ್ ಚೆಂಡೂರ್, ಬಾಲರಾಜವಾಡಿ ಮುಂತಾದವರು ಇದ್ದಾರೆ. ಚಿತ್ರಕ್ಕೆ ಮಂಜುಕವಿ ಸಂಗೀತ, ಪ್ರದ್ಯೋತ್ತನ್ ಹಿನ್ನೆಲೆ ಸಂಗೀತ, ಸ್ವಾಮಿ ಮೈಸೂರು ಛಾಯಾಗ್ರಹಣ, ಚಕ್ರಮ್ ಸಾಯಿ ಸಂಕಲನವಿದೆ.