ಆಶ್ರಯ ಯೋಜನೆ ಅಡಿ ದುರುಪಯೋಗ

ಆಶ್ರಯ ಯೋಜನೆ ಅಡಿ ದುರುಪಯೋಗ Abuse under Ashraya Scheme

ನಿವೇಶನ ಮಾರಾಟ ಮಾಡಿ ಅಕ್ರಮ: ಲೋಕಾಯುಕ್ತರಿಗೆ ದೂರು ಸಲ್ಲಿಸಿದ ದಾಂಡೇಲಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗಗ್ಗರಿ 

ಕಾರವಾರ 09: ಆಶ್ರಯ ಯೋಜನೆ ಅಡಿ ಅಧಿಕಾರ ದುರುಪಯೋಗ ಮಾಡಿಕೊಂಡು, ಬೆಲೆಬಾಳುವ ನಿವೇಶನಗಳನ್ನು ಮಾರಾಟ ಮಾಡಿ ಅಕ್ರಮ  ಎಸಗಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಲೋಕಾಯುಕ್ತರಿಗೆ ದಾಂಡೇಲಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ  ಶಿವಾನಂದ ಗಗ್ಗರಿ ಅಫಿಡೆವಿಟ್ ಸಹಿತ ದೂರು ಸಲ್ಲಿಸಿದ್ದಾರೆ. 

ದಾಂಡೇಲಿ ನಗರಸಭೆಯಿಂದ ಆಶ್ರಯ ಯೋಜನೆಯಡಿ ನಿವೇಶನ ಪಡೆದ  ವೆಂಕಟೇಶ ಸುಬ್ಬಯ್ಯ ಹಾಗೂ ಅವರಿಂದ ಸೈಟನ್ನು  ಕ್ರಯಕ್ಕೆ ಪಡೆದಿರುವ ಜಲಜಾಕ್ಷಿ ಬೊಮ್ಮಯ್ಯ ನಾಯಕ ಅವರಿಂದ ನಗರಸಭೆಗೆ ಸೇರಿದ  ನಿವೇಶನವನ್ನು ಹಿಂಪಡೆದು ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಹಾಗೂ  ಕಾನೂನು ಕ್ರಮ ಜರುಗಿಸ ಬೇಕೆಂದು  ದಾಂಡೇಲಿ  ನಗರ ಯೋಜನಾ ಪ್ರಾಧಿಕಾರದ ಮಾಜಿ  ಅಧ್ಯಕ್ಷ ಶಿವಾನಂದ ಗಗ್ಗರಿ ಲೋಕಾಯುಕ್ತಕ್ಕೆ ಅಧಿಕೃತ ದೂರು ದಾಖಲಿಸಿದ್ದಾರೆ.  

ಅವರು ಗುರುವಾರ   ಕಾರವಾರದ ಲೋಕಾಯುಕ್ತ ಎಸ್‌.ಪಿ ಅವರ ಸಮ್ಮುಖದಲ್ಲಿ ಪ್ರತಿಜ್ಞಾಪತ್ರ ಸಲ್ಲಿಸಿ ಫಾರ್ಮ ನಂ.1  ಸಿ ರೂಲ್ 4(1) ಪ್ರಕಾರ ಪ್ರಕರಣ ದಾಖಲಿಸಿದ್ದು, ಲೋಕಾಯುಕ್ತ ಕಚೇರಿ ದೂರು ದಾಖಲಾಗಿರುವುದನ್ನು ಖಚಿತಪಡಿಸಿದೆ.   ದಾಂಡೇಲಿ ನಗರಸಭೆಯ ಬೆಲೆ ಬಾಳುವ ವಾಣಿಜ್ಯ ನಿವೇಶನವನ್ನು ,ಆಶ್ರಯ ಯೋಜನೆಯಲ್ಲಿ ಕಾನೂನು ಬಾಹೀರವಾಗಿ  ಮೊದಲುವೆಂಕಟೇಶ ಸುಬ್ಬಯ್ಯ ಅವರ ಹೆಸರಿಗೆ  ನೊಂದಣಿ ಮಾಡಲಾಗಿದೆ . ನಂತರ  ನಾಲ್ಕೂ ದಿನಗಳ ಅಂತರದಲ್ಲಿ ಅವರು  ಮಾರಾಟ ಮಾಡಿದ್ದಾರೆ. ಈ ಕುರಿತಂತೆ ಹಳಿಯಾಳ  ಸಬ್ ರಜಿಸ್ಟ್ರಾರ್ ಕಚೇರಿಯ  ನೊಂದಣಿ ದಾಖಲೆಗಳನ್ನು ದೂರು ಅರ್ಜಿಯ ಜೊತೆಗೆ ಲಗತ್ತಿಸಿದ್ದಾರೆ. ಈ ಕುರಿತಂತೆ ದಾಂಡೇಲಿ ನಗರಸಭೆಯ ಪೌರಾಯುಕ್ತರು, ಹಳಿಯಾಳದ ಉಪನೊಂದಣಾಧಿಕಾರಿ, ನಗರಸಭೆಯ ಎಸ್‌.ಡಿ.ಎ ಗಳಾದ ಹನುಮಂತ ಉಪ್ಪಾರ, ಬಿ.ಎಫ್‌.ಗವಸ್, ವೆಂಕಟೇಶ್ ಸುಬ್ಬಯ್ಯ, ಜಲಜಾಕ್ಷಿ ಬೊಮ್ಮಯ್ಯ ನಾಯಕ, ಅವರ ಪತಿ ಬೊಮ್ಮಯ್ಯ ನಾರಾಯಣ ನಾಯಕ(ವಾಸರೆ) ಇವರುಗಳನ್ನು ಆಪಾದನೆಗಳ ಸಮರ್ಥನೆಯಲ್ಲಿ ಫರಾ​‍್ಯದಿಯು ತನಿಖೆಗೆ ಒಳಪಡಿಸಬೆಕೆಂದು ದೂರಿನಲ್ಲಿ ಕೇಳಿಕೊಳ್ಳಲಾಗಿದೆ.  

*ಘಟನೆಯ ಹಿನ್ನಲೆ:* ದಾಂಡೇಲಿಯ ಟೌನ್‌ಶಿಪ್ ಬಳಿ ಡಾ.ಜಿ.ವಿ.ಭಟ್ ಆಸ್ಪತ್ರೆಯ ಹತ್ತಿರ ಸಿಟಿ ಸರ್ವೆ ನಂ 3122 ನ್ನು (ಕಮರ್ಷಿಯಲ್ ಸೈಟ್) ವೆಂಕಟೇಶ ಸುಬ್ಬಯ್ಯ ಹೆಸರಿಗೆ ಆಶ್ರಯ ಯೋಜನೆಯಡಿ ಅಂದಿನ ಪೌರಾಯುಕ್ತರು ದಿನಾಂಕ 3-1-2019 ಕ್ಕೆ ಕ್ರಯ ಪತ್ರ ಮಾಡಿ ಉಪನೊಂದಣಾಧಿಕಾರಿ ಕಛೇರಿಯಲ್ಲಿ ನೊಂದಣಿ ಮಾಡಿದ್ದಾರೆ. ಈ ನೊಂದಣಿ ಮಾಡಿದ ನಾಲ್ಕು ದಿನದಲ್ಲಿ ದಿನಾಂಕ 7-1-2019 ಕ್ಕೆ 1ಲಕ್ಷ 95  ಸಾವಿರ ರೂಪಾಯಿಗೆ ವೆಂಕಟೇಶ ಸುಬ್ಬಯ್ಯ ಅವರು  ಪತ್ರಕರ್ತ ಬಿ.ಎನ್‌.ವಾಸರೆ ಅವರ ಪತ್ನಿ ಜಲಜಾಕ್ಷಿ ಬೊಮ್ಮಯ್ಯ ನಾಯಕ ಅವರ ಹೆಸರಿಗೆ ಹಳಿಯಾಳ ಸಬ್ ರಜಿಸ್ಟ್ರಾರ್ ಕಛೇರಿಯಲ್ಲಿ ಕ್ರಯ ಪತ್ರ ನೊಂದಣಿಯಾಗಿದೆ. ಈ ಕ್ರಯ ಪತ್ರದ ಆಧಾರದ ಮೇಲೆ ನಿವೇಶನದ ಭದ್ರತೆಯ ಮೇರೆಗೆ 15ಲಕ್ಷ 99,600 ರೂಪಾಯಿ ಸಾಲವನ್ನು ಯು.ಕೆ.ಸೌಹಾರ್ದ ಕ್ರೇಡಿಟ್ ಕೋ-ಆಪರೇಟಿವ್ ಲಿಮಿಟೆಡ್ ಯಲ್ಲಾಪುರ ದಾಂಡೇಲಿ ಶಾಖೆಯಿಂದ ಜಲಜಾಕ್ಷಿ ಬೊಮ್ಮಯ್ಯ ನಾಯಕ ಪಡೆದಿದ್ದಾರೆ. ಆಶ್ರಯ ಯೋಜನೆಯಡಿಯಲ್ಲಿ ಸರಕಾರಿ ಆದೇಶದ ಉಲ್ಲಂಘನೆಯಾಗಿದೆ. ವೆಂಕಟೇಶ ಸುಬ್ಬಯ್ಯ ಇವರಿಗೆ ಸ್ವಂತ ಮನೆ, ಹೊಲ ಎಲ್ಲವೂ ಇದ್ದು ಆತ ಸರ್ಕಾರಕ್ಕೆ ಮೋಸ ಮಾಡಿದ್ದು ಸುಳ್ಳು ಮಾಹಿತಿ ನೀಡಿ ವಾಣಿಜ್ಯ ನಿವೇಶನ 50 ಲಕ್ಷ ರೂಪಾಯಿಗೂ ಹೆಚ್ಚು ಬೆಲೆ ಬಾಳುವ ಸೈಟು 10 ಸಾವಿರ ರೂಪಾಯಿಗೆ ಆಶ್ರಯ ಯೋಜನೆಯಡಿ ಪಡೆದು, ಅದು ಸ್ವಯಾರ್ಜಿತ ಆಸ್ತಿಯೆಂದು ಕ್ರಯ ಪತ್ರದಲ್ಲಿ ತೋರಿಸಿ 1ಲಕ್ಷ 95 ಸಾವಿರ ರೂಪಾಯಿಗೆ ಜಲಜಾಕ್ಷಿ ಬೊಮ್ಮಯ್ಯ ನಾಯಕ ಅವರಿಗೆ ನಾಲ್ಕೇ ದಿನದಲ್ಲಿ ಕ್ರಯ ಪತ್ರ ಮಾಡಿರುವುದು ಕ್ರಿಮಿನಲ್ ಅಪರಾಧವಾಗಿದೆ.  

ನಗರಸಭೆಯ ಬೆಲೆ ಬಾಳುವ ಸೈಟನ್ನು ಕಬಳಿಸಲು ಇಲ್ಲಿ ಮೋಸದ ವ್ಯವಹಾರ ನಡೆದಿದ್ದು ಈ ನಿವೇಶನವನ್ನು ನಗರಸಭೆಗೆ ಹಿಂಪಡೆದು ಇದಕ್ಕೆ ಕಾರಣಿಭೂತರಾಗಿರುವ ಎಲ್ಲರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ಜರುಗಿಸಬೇಕು ಎಂದು ಶಿವಾನಂದ ಗಗ್ಗರಿ ಅಫಿಡವೀಟ್ ನೊಂದಿಗೆ ದೂರು ಸಲ್ಲಿಸಿದ್ದಾರೆ. ಲೋಕಾಯುಕ್ತರು ದೂರನ್ನು ಸ್ವೀಕರಿಸಿದ್ದು, ದೂರು ಪರೀಶೀಲಿಸುವುದಾಗಿ ತಿಳಿಸಿದ್ದಾರೆ.