ಸಿದಗೌಡ ಪಾಟೀಲರ 83ನೇ ವರ್ಧಂತಿ ಉತ್ಸವ

ಸಿದಗೌಡ ಪಾಟೀಲರ 83ನೇ ವರ್ಧಂತಿ ಉತ್ಸವ

ಲೋಕದರ್ಶನ ವರದಿ

ಶೇಡಬಾಳ 05: ಚಿಕ್ಕ ವಯಸ್ಸಿನಿಂದಲೇ ಸಿದಗೌಡಾ ಪಾಟೀಲ ಇವರು ಸಮಾಜದ ಹಾಗೂ ಗ್ರಾಮದ ಸೇವೆಯಲ್ಲಿಯೇ ಜೀವನ ಸಾಗಿಸಿ 83 ವರ್ಷಗಳನ್ನು ಪೂರೈಸಿದರೂ ಕುಂದದ ಉತ್ಸಾಹ ಇಂದಿನ ಯುವಕರಿಗೆ ಮಾದರಿಯಾಗಬೇಕು. ಅವರು ಇನ್ನೂ ನೂರ್ಕಾಲು ಬಾಳಿ ಬದುಕಿ ಸಮಾಜದ ಸೇವೆಯಲ್ಲಿ ನಿರತರಾಗಿ ಸಮಾಜಕ್ಕೆ ಮಾದರಿಯಾಗಲಿ ಎಂದು ಪರಮಾನಂದವಾಡಿಯ ಬ್ರಹ್ಮಾನಂದಾಶ್ರಮದ ಅಭಿನವ ಬ್ರಹ್ಮಾನಂದ ಮಹಾಸ್ವಾಮಿಗಳು ಹೇಳಿದರು.

ಅವರು ತಾಲೂಕಿನ ಜುಗೂಳ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಫೆ.04 ರಂದು ನಡೆದ ಗ್ರಾಮದ ಹಿರಿಯರಾದ ಸಿದಗೌಡಾ ಪಾಟೀಲ (ಕಾಡಾಪೂರೆ) ಇವರ 83ನೇ ವರ್ಧಂತಿ ಉತ್ಸವ ಹಾಗೂ ತುಲಾಭಾರ ಸಮಾರಂಭದಲ್ಲಿ ಸಾನಿಧ್ಯವಹಿಸಿ ಮಾತನಾಡುತ್ತಿದ್ದರು. ಕಳೆದ 50 ವರ್ಷಗಳಿಂದ ಗ್ರಾಮದ ವಿವಿಧ ಧಾರ್ಮಿಕ ಹಾಗೂ ಇತರೆ ಸಮಾಜದ ಸಮಾರಂಭದಗಲ್ಲಿ ಯಾವುದೇ ಫಲಾಪೇಕ್ಷ ಬಯಸದೇ ಯುವಕರನ್ನು ನಾಚಿಸುವಂತೆ ಮುಂದಾಳತ್ವ ವಹಿಸಿಕೊಂಡು ಬಂದಿರುತ್ತಾರೆ. ಅವರ ಸೇವೆ ಕಂಡು ಯುವಕರು ಕೂಡಾ ನಾಚಬೇಕು ಎಂದು ಕಾಗವಾಡದ ಗುರುದೇವಾಶ್ರಮದ ಯತೀಶ್ವರಾನಂದ ಶ್ರೀಗಳು ಹೇಳಿದರು. ಸಮಾರಂಭದಲ್ಲಿ ಟಾಕಳಿಯ ಗುರುದೇವಾಶ್ರಮದ ಶಿವದೇವ ಮಹಾಸ್ವಾಮಿಗಳು, ಚಿಕ್ಕೋಡಿ ಸಿ.ಕೆ.ಎಸ್.ಎಸ್.ಕೆ.ಯ ನಿರ್ದೇಶಕ ಅಣ್ಣಾಸಾಬ ಪಾಟೀಲ, ಎ.ಪಿ.ಎಂ.ಸಿ. ನಿರ್ದೇಶಕ ಅನೀಲ ಕಡೋಲೆ, ತಾತ್ಯಾಸಾಬ ಪಾಟೀಲ, ಸುಧಾಕರ ಗಣೇಶವಾಡಿ, ಬಾಬಾಸಾಬ ಪಾಟೀಲ, ರಾಜು ಕಡೋಲೆ, ಬಾಳಗೌಡಾ ಪಾಟೀಲ, ರವೀಂದ್ರ ವ್ಹಾಂಟೆ, ಅರುಣ ಗಣೇಶವಾಡಿ ಮತ್ತು ಗ್ರಾಮದ ವಿವಿಧ ಸಂಘ ಸಂಸ್ಥೆಗಳ ಸಿಬ್ಬಂದಿ ವರ್ಗದವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಿದಗೌಡಾ ಪಾಟೀಲ ಅವರನ್ನು ಗ್ರಾಮದ ಎಲ್ಲ ಸಂಘ ಸಂಸ್ಥೆಗಳಿಂದ ಸನ್ಮಾನಿಸಿ, ಬೆಲ್ಲದಿಂದ ತುಲಾಭಾರ ಮಾಡಲಾಯಿತು.