ಜುಲೈ 1 ರಂದು ವೈದ್ಯರ ಹಾಗೂ ಪ್ರತಿಕಾ ದಿನಾಚರಣೆ

ಮೂಡಲಗಿ 29: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮೂಡಲಗಿ ತಾಲೂಕಾ ಘಟಕದಿಂದ ಜುಲೈ 1 ರಂದು ಪ್ರತಿಕಾ ದಿನಾಚರಣೆ ಹಾಗೂ ವೈದ್ಯರ ದಿನಾಚರಣೆ ನಿಮಿತ್ಯ ತಾಲೂಕಿನ ಪತ್ರಕರ್ತರಿಗೆ ಮತ್ತು ವೈದ್ಯರಿಗೆ ಸತ್ಕಾರ ಸಮಾರಂಭವನ್ನು ಪಟ್ಟಣದ ಶಿವಬೋಧರಂಗ ಅರ್ಬನ್ ಸೊಸಾಯಿಟಿಯ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕ.ಕಾ.ನಿ.ಪ ಸಂಘದ ಅಧ್ಯಕ್ಷ ಕೃಷ್ಣಪ್ಪ ಗಿರೆಣ್ಣವರ ಹೇಳಿದರು. 

ಶನಿವಾರದಂದು ಪಟ್ಟಣದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಾಲಯ ದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಡಲಗಿ ಪಟ್ಟಣವು ತಾಲೂಕಾದ ಬಳಿಕ ಸ್ಥಾಪನೆಯಾದ ಕ.ಕಾ.ನಿ.ಪ ಸಂಘದಿಂದ ತಾಲೂಕಾ ಮಟ್ಟದಲ್ಲಿ ಉತ್ತಮವಾದ ಸಾಮಾಜಿಕ ಕಾರ್ಯ ಮಾಡುತ್ತಿದ್ದು, ಮೊದಲ ಬಾರಿ ಸಂಘ ನೇತೃತ್ವದಲ್ಲಿ ಈ ಸಮಾರಂಭವನ್ನು ಅದ್ದೂರಿಯಾಗಿ ಮಾಡಲು ಸಂಘದ ಎಲ್ಲ ಪದಾಧಿಕಾರಿಗಳು ಮತ್ತು ಸದಸ್ಯರ ನಿರ್ಣಯದ ಮೇರಿಗೆ ಹಮ್ಮಿಕೊಳ್ಳಾಗಿದ್ದು, ತಾಲೂಕಿನ ಎಲ್ಲ ಪತ್ರಕರ್ತರು ಹಾಗೂ ವೈದ್ಯರು ಭಾಗವಹಿಸಬೇಕಂದು ತಿಳಿಸಿದರು. 

ಸಂಘದ ಉಪಾಧ್ಯಕ್ಷ ಲಿಂಗಪ್ಪ ಗಾಡವಿ ಮಾತನಾಡಿ, ಸಮಾರಂಭದ ಸಾನ್ನಿಧ್ಯವನ್ನು ಪಟ್ಟಣದ ಶಿವಬೋಧರಂಗ ಮಠದ ಪೀಠಾಧಿಪತಿ ದತ್ತಾತ್ರೇಯಬೋಧ ಸ್ವಾಮಿಜಿ, ಶ್ರೀಧರಬೋಧ ಸ್ವಾಮಿಜಿ ಅವರು ವಹಿಸುವವರು. ಹಿರಿಯ ವೈದ್ಯ ಡಾ. ಕೆ.ವಿ. ದಂತಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಕ.ಕಾ.ನಿ.ಪ ಸಂಘದ ಗೌರವಾಧ್ಯಕ್ಷ ಸರ್ವೋತ್ತಮ್ ಜಾರಕಿಹೊಳಿ ಅಧ್ಯಕ್ಷತೆಯನ್ನು ಹಾಗೂ ಮುಖ್ಯ ಅತಿಥಿಗಳಾಗಿ ಕ.ಕಾ.ನಿ.ಪ ಸಂಘದ ರಾಜ್ಯ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ, ಜಿಲ್ಲಾಧ್ಯಕ್ಷ ದೀಲೀಪ್ ಕುರಂದವಾಡಿ, ಗೋಕಾಕ ಘಟಕದ ಅಧ್ಯಕ್ಷ ಗುರುರಾಜ ಪೂಜೇರಿ, ಶಿವಬೋಧರಂಗ ಅರ್ಬನ್ ಸೊಸಾಯಿಟಯ ಅಧ್ಯಕ್ಷ ಬಸವರಾಜ ಗುಲಗಾಜಂಬಗಿ, ಮೂಡಲಗಿ ತಹಶೀಲ್ದಾರ ಮಹಾದೇವ ಸನ್ನಮುರಿ, ತಾಲೂಕಾ ವೈದ್ಯರ ಸಂಘದ ಅಧ್ಯಕ್ಷ ಪ್ರಕಾಶ ಬುದ್ನಿ, ಶ್ರೀನಿವಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಂಗಣ್ಣ ಸೋನವಾಲ್ಕರ, ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಸಂಗಮೇಶ ಗುಜಗೊಂಡ ಸೇರಿದಂತೆ ಮೂಡಲಗಿ ತಾಲೂಕಾ ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದರು. 

ಕ.ಕಾ.ನಿ.ಪ ಸಂಘ ಮೂಡಲಗಿ ತಾಲೂಕಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲು ಬೋಳನವರ, ಕಾರ್ಯದರ್ಶಿ ಅಲ್ತಾಫ್ ಹವಾಲ್ದಾರ, ಖಜಾಂಚಿ ಮಹಾದೇವ ನಡುವಿನಕೇರಿ, ಸದಸ್ಯರಾದ ಚಂದ್ರಶೇಖರ ಪತ್ತಾರ, ಈಶ್ವರ ಢವಳೇಶ್ವರ ಇದ್ದರು.