“ಗೆಳೆಯ ನೀನು ಹಳೆಯ ನಾನು” ನಾಟಕ
ಬೆಳಗಾವಿ 01: ನಗರದ ರಂಗಸಂಪದದವರು ವಿಶ್ವರಂಗಭೂಮಿ ದಿನಾಚರಣೆ ಮತ್ತು ರಂಗಸಖ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿ. 29 ಶನಿವಾರದಂದು ಸಾ. 6.30 ಕ್ಕೆ ಕೋನವಾಳ ಬೀದಿಯಲ್ಲಿರುವ ಲೋಕಮಾನ್ಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ರಂಗಸಂಪದ ತಂಡದವರಿಂದ ಶ್ರೀರಂಗರು ರಚಿಸಿದ್ದ ’ಗೆಳೆಯ ನೀನು ಹಳೆಯ ನಾನು’ ನಾಟಕ ಪ್ರದರ್ಶನ ಗೊಂಡಿತು.ಸಂಶಯವೆಂಬುದು ಮನುಷ್ಯನನ್ನು ಹೇಗೆ ತಿನ್ನುತ್ತದೆ. ಮನೆತನದ ವಾತಾವರಣವನ್ನು ಹಾಳು ಮಾಡುತ್ತದೆ ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಡುವ ನಾಟಕವೇ ’ಗೆಳೆಯ ನೀನು ಹಳೆಯ ನಾನು’ ಸುಮಾರು ನಾಲ್ವತ್ತು ವರ್ಷಗಳ ಹಿಂದೆಯೇ ಶ್ರೀರಂಗರು ರಚಿಸಿರುವ ನಾಟಕವಿದು. ಯಾವುದೇ ಒಂದು ಭಾಷೆಯನ್ನು ನಾಟಕ ಮುಗಿಯುವವರೆಗೆ ಅದೇ ಭಾಷೆಯನ್ನು ಬಳೆಸಿಕೊಂಡು ಹೋಗುವುದು ತುಂಬ ಕಷ್ಟದ ಕೆಲಸ. ಉತ್ತರ ಕರ್ನಾಟಕದ ಭಾಷೆಯನ್ನು ಬಳೆಸುವಲ್ಲಿ ಯೋಗೇಶ ದೇಶಪಾಂಡೆಯವರು ನೂರಕ್ಕೆ ನೂರು ಅಂಕ ಪಡೆದರು. ಪಾತ್ರಕ್ಕೆ ತಕ್ಕಂತೆ ಭಾವನಾತ್ಮಕ ಅಭಿನಯದಲ್ಲಿ ಪವಿತ್ರಾ ರೇವಣಕರ, ನೈಜ ಅಭಿನಯದಲ್ಲಿ ಪದ್ಮಾ ಕುಲಕರ್ಣಿ ಎಲ್ಲರ ಗಮನ ಸೆಳೆದರು. ರಾಮಚಂದ್ರ ಭಟ್, ಅರವಿಂದ ಪಾಟೀಲ, ಪ್ರಸಾದ ಕಾರಜೋಳ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯವನ್ನೊದಗಿಸಿದರು. ಶ್ರೀರಂಗರ ನಾಟಕವನ್ನು ರಂಗರೂಪಕ್ಕೆ ತರುವುದು ತುಂಬ ಕಷ್ಟದ ಕೆಲಸ. ಈ ನಾಟಕವನ್ನು ರಂಗರೂಪಕ್ಕೆ ತಂದ ಡಾ. ಅರವಿಂದ ಕುಲಕರ್ಣಿಯವರು ತಾವೊಬ್ಬ ಸಮರ್ಥ ನಿರ್ದೇಶಕರೆಂಬುದನ್ನು ಸಾಬೀತು ಪಡಿಸಿದರು. ರಂಗಸಂಪದ ಸಂಸ್ಥಾಪಕರಾದ ಶ್ರೀಪತಿ ಮಂಜನಬೈಲು ಉಪಸ್ಥಿತರಿದ್ದರು.