ವಿಜಯಪುರ: ಭಾರತೀಯ ಸಂಸ್ಕೃತಿ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠ: ಈಶ್ವರಪ್ಪ

ಲೋಕದರ್ಶನ ವರದಿ

ವಿಜಯಪುರ 13: ಭಾರತೀಯರಾದ ನಾವು ನೀರು, ಜಲ, ಮಣ್ಣು ಹೀಗೆ ಪ್ರತಿಯೊಂದರಲ್ಲಿಯೂ ದೈವತ್ವವನ್ನು ಕಂಡವರು. ಈ ಶ್ರೇಷ್ಠ ಸಂಸ್ಕೃತಿಯಿಂದ ಜಗತ್ತಿನಲ್ಲಿಯೇ ಶ್ರೇಷ್ಠತೆಯನ್ನು ಸಾಧಿಸಿದ್ದೇವೆ ಎಂದು ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದರು.

ಅವರು ಸೋಮವಾರ ವಿಜಯಪುರ ತಾಲೂಕಿನ ಶಿವಣಗಿ ಗ್ರಾಮದಲ್ಲಿ ಶ್ರೀ ಹಾಲಮರಡಿ ಸಿದ್ದೇಶ್ವರ ದೇವಾಲಯದ ನೂತನ ಕಟ್ಟಡ ಲೋಕಾರ್ಪಣೆ, ಕಳಸಾರೋಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು, 

ಭೂಮಿಯನ್ನು ತಾಯಿ ಎನ್ನುತ್ತೇವೆ, ಎಂದು, ಬೆಂಕಿಯನ್ನು ಅಗ್ನಿದೇವ ಎಂದು,  ವಾಯುವನ್ನು ವಾಯುದೇವ ಎಂದು ಭಕ್ತಿಭಾವ, ಗೌರವದಿಂದ ಕಾಣುತ್ತೇವೆ. ಈ ಸಂಸ್ಕೃತಿಯ ಶ್ರೇಷ್ಠತೆಯೇ ಭಾರತವನ್ನು ವಿಶ್ವದಲ್ಲಿಯೇ ಅತ್ಯಂತ ಗೌರವಯುತ ಸ್ಥಾನದಲ್ಲಿ ನಿಲ್ಲಿಸಿದೆ ಎಂದರು.

ಭಾರತೀಯ ಸಂಸ್ಕೃತಿ ಅತ್ಯಂತ ಶ್ರೇಷ್ಠವಾಗಿದೆ. ವಿದೇಶದಲ್ಲಿ ಒಂದು ರಾತ್ರಿ ಮದುವೆ, ಮಾರನೇಯ ದಿನವೇ ವಿಚ್ಛೇದನ ನಡೆಯುತ್ತಿವೆ. ಆದರೆ ಭಾರತದಲ್ಲಿ ಸಪ್ತಪದಿ ತುಳಿದ ಸತಿ ತನ್ನ ಪತಿಯನ್ನು ಆರಾಧ್ಯದೈವವಾಗಿ ಸ್ವೀಕರಿಸುತ್ತಾಳೆ, ಆತನೊಂದಿಗೆ ಕೊನೆಯವರೆಗೂ ಬಾಳುತ್ತಾಳೆ ಎಂದರು. 

ಈ ಹಿಂದೆ ಭಾರತದ ಪ್ರಧಾನಿಗಳು ವಿದೇಶಕ್ಕೆ ಹೋದರೆ ಎಲ್ಲಿ ಸಾಲ ಕೇಳಲು ಬರುತ್ತಿದ್ದಾರೋ ಎಂದು ವಿದೇಶಿಗರು ಭಯ ಪಡುತ್ತಿದ್ದರು. ಆದರೆ ಈಗ ಭಾರತ 112 ರಾಷ್ಟ್ರಗಳಿಂದ ಪಡೆದಿದ್ದ ಸಾಲವನ್ನು ತೀರಿಸಿ, ಸಶಕ್ತ ದೇಶವಾಗಿ ಬೆಳೆದು 12 ರಾಷ್ಟ್ರಗಳಿಗೆ ಸಾಲ ನೀಡುವ ಮಟ್ಟಕ್ಕೆ ಬೆಳೆದಿದೆ. ಇದಕ್ಕೆಲ್ಲಾ ಭಾರತೀಯರ ಸಂಸ್ಕೃತಿ, ಕಾಯಕವನ್ನು ನಂಬಿದ ಫಲವೇ ಕಾರಣ ಎಂದು ಈಶ್ವರಪ್ಪ ಹೇಳಿದರು.

ನನ್ನ ತಾಯಿ ನನ್ನನ್ನು ಕಷ್ಟಪಟ್ಟು ಬೆಳೆಸಿದಳು, ಹೊಸ ಸೀರೆ ಖರೀದಿಸಲಿಲ್ಲ, ಅನೇಕ ಬಾರಿ ಹೊಟ್ಟೆ ತುಂಬ ಊಟ ಮಾಡಲಿಲ್ಲ. ನಾನು ಎಸ್ಎಸ್ಎಲ್ಸಿ ಮುಗಿಸಿ ನೌಕರಿ ಮಾಡುತ್ತೇನೆ ಎಂದಾಗ ಕಪಾಳಕ್ಕೆ ಬಿಗಿದಳು, ನೀನು ಮೊದಲು ಓದು ಎಂದು ಗದರಿಸಿದಳು. ಆಕೆಯ ಫಲವಾಗಿಯೇ ನಾನು ಈಶ್ವರಪ್ಪ ನಿಮ್ಮ ಮುಂದೆ ನಿಂತಿದ್ದೇನೆ ಎಂದು ಭಾವುಕರಾಗಿ ನುಡಿದರು.

ಶಿವಣಗಿಯಲ್ಲಿ ಭವ್ಯ ಮರಡಿಸಿದ್ದೇಶ್ವರ ದೇವಾಲಯ ನಿಮರ್ಾಣಗೊಂಡಿರುವುದು ಸಂತೋಷದ ಸಂಗತಿ. ದೇವಾಲಯದ ಅಭಿವೃದ್ಧಿಗಾಗಿ ಸರ್ಕಾರಿ ಮಟ್ಟದಲ್ಲಿ ಏನಾದರೂ ಕೆಲಸವಿದ್ದರೆ ನನ್ನನ್ನು ಸಂಪರ್ಕಿಸಿ  ಎಂದು ಈಶ್ವರಪ್ಪ ಹೇಳಿದರು.

ಆರೋಗ್ಯ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಭಕ್ತಿ ಮುಕ್ತಿಯ ಮಾರ್ಗ. ಭಕ್ತಿಗೆ ಹಲವಾರು ಸ್ವರೂಪಗಳಿವೆ. ಪರೋಪಕಾರ, ದಯೆ, ತ್ಯಾಗ ಮೊದಲಾದವುಗಳು ಭಕ್ತಿಯ ಸ್ವರೂಪಗಳಾಗಿವೆ ಎಂದರು. 

ಸರೂರ ಶ್ರೀ ರೇವಣಸಿದ್ದೇಶ್ವರ ಜಗದ್ಗುರುಗಳು ಸಾನಿಧ್ಯ ವಹಿಸಿದ್ದರು. ಮಾಜಿ ಶಾಸಕ ವಿಠ್ಠಲ ಕಟಕದೊಂಢ, ಜಿ.ಪಂ. ಮಾಜಿ ಅಧ್ಯಕ್ಷೆ ನೀಲಮ್ಮ ಮೇಟಿ, ಕಾಂಗ್ರೆಸ್ ಮುಖಂಡ ಸೋಮನಾಥ ಕಳ್ಳೀಮನಿ, ಮಲಕೇಂದ್ರರಾಯಗೌಡ ಪಾಟೀಲ, ಜಿ.ಪಂ. ಸದಸ್ಯ ಸಾಬು ಮಾಶ್ಯಾಳ, ಮಲ್ಲಣ್ಣ ಸಾಲಿ, ಕೆಂಚಪ್ಪ ಲೋಗಾಂವಿ, ರವಿ ಕಿತ್ತೂರ, ಸಿದ್ಧು ಬುಳ್ಳಾ ಮೊದಲಾದವರು ಉಪಸ್ಥಿತರಿದ್ದರು.