ಉಜ್ಜಯನಿ ಜಗದ್ಗುರುಗಳ ದ್ವಾದಶ ಪಟ್ಟಾಧಿಕಾರದ ವರ್ಧಂತಿ ಮಹೋತ್ಸವ
ಹಾವೇರಿ 24 : ಧರ್ಮ ಎಂಬುದು ಗುಡಿಗೋಪುರದಲ್ಲಿ, ಮಠಮಂದಿರದಲ್ಲಿ ಇಲ್ಲ, ಧರ್ಮ ಎಂಬುದು ಪ್ರತಿ ಜೀವರಾಶಿಯಲ್ಲಿದೆ. ಪ್ರತಿಯೊಬ್ಬನೂ ತನ್ನ ಕರ್ತವ್ಯವನ್ನು ನುಡಿದಂತೆ ನಡೆದರೆ ಅದು ಧರ್ಮವಾಗುತ್ತದೆ. ಉತ್ತಮ ಸಾಮಾಜಿಕ ಮತ್ತು ಕೌಟುಂಬಿಕ ಮೌಲ್ಯಗಳನ್ನು ಅನುಸರಿಸುವದೇ ನಿಜವಾದ ಧರ್ಮ ಎಂದು ಉಜ್ಜಯನಿ ಸಧರ್ಮ ಪೀಠದ 1008 ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿರುವ ಉಜ್ಜಯನಿ ಜಗದ್ಗುರುಗಳ ದ್ವಾದಶ ಪಟ್ಟಾಧಿಕಾರದ ವರ್ಧಂತಿ ಮಹೋತ್ಸವ ಮತ್ತು ಭಾವೈಕ್ಯತಾ ಸಮಾರಂಭದ ಎರಡನೇ ದಿನದ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ದಾನಗಳಲ್ಲಿ ಶ್ರೇಷ್ಠವಾದ ದಾನಗಳು ಬಹಳಷ್ಟು ಇವೆ. ಸಂದರ್ಭಾನುಸಾರ ಅದರ ಮಹತ್ವ ಗೊತ್ತಾಗುತ್ತದೆ. ದೇಶ ಕಟ್ಟುವಲ್ಲಿ ಚುನಾವಣೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಯಾವದೇ ಆಸೆ ಆಮಿಷಗಳಿಗೆ ಒಳಗಾಗದೇ ಮತದಾನ ಮಾಡುವದೇ ಶ್ರೇಷ್ಠ ದಾನವಾಗುತ್ತದೆ. ಹಾಗೇಯೇ ದೇಶದ ಬೆನ್ನೆಲುಬು ರೈತ. ಆತನಿಗೆ ಕನ್ಯಾದಾನ ಮಾಡುವದೂ ಸಹ ಅತ್ಯಂತ ಶ್ರೇಷ್ಠ ದಾನವಾಗುತ್ತದೆ. ದುರ್ಯೋಧನ ವೀರನಾದರೂ ಪ್ರವೃತ್ತಿಯಲ್ಲಿ ಅಧರ್ಮಿಯಾಗಿದ್ದ. ಕರ್ಣ ದಾನಶೂರನಾಗಿದ್ದರೂ ಅಧರ್ಮದಲ್ಲಿ ಪಾಲುದಾರನಾಗಿದ್ದರಿಂದ ಖಳನಾಯಕನಾದ ಎಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ಹರಿಹರದ ವಿಶ್ರಾಂತ ಪ್ರಾಚಾರ್ಯ ಪ್ರೊ. ಎಚ್.ಎ. ಬಿಕ್ಷಾವರ್ತಿಮಠ ಮಾತನಾಡಿದರು.ಕೂಡಲದ ಗುರು ನಂಜೇಶ್ವರಮಠದ ಗುರು ಮಹೇಶ್ವರ ಸ್ವಾಮೀಜಿ ಮಾತನಾಡಿ ಮರಿಕಲ್ಯಾಣ ಖ್ಯಾತಿಯ ಹಾವೇರಿಯು ಕೇವಲ ಯಾಲಕ್ಕಿ ಕಂಪು ಮಾತ್ರವಲ್ಲ ಭಕ್ತಿಯ ಕಂಪಿನ ನಗರವಾಗಿದೆ. ದ್ವಾದಶ ಪಟ್ಟಾಧಿಕಾರ ಮಹೋತ್ಸವದ ಯಶಸ್ಸು ನಗರಕ್ಕೆ ಮತ್ತೊಂದು ಗರಿಯನ್ನು ನೀಡುತ್ತದೆ ಎಂದು ಹೇಳಿದರು.
ಮಾನಿಹಳ್ಳಿಯ ಡಾ. ಮಳೆಯೋಗೀಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ನೆಗಳೂರಿನ ಗುರುಶಾಂತೇಶ್ವರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.ಹಿರೇಕುರುವತ್ತಿಯ ಸಿದ್ಧನಂದೀಶ್ವರ ಸ್ವಾಮೀಜಿ, ದಿಂಡನಹಳ್ಳಿಯ ಪಶುಪತಿ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಅಕ್ಕಿಆಲೂರಿನ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ತಮ್ಮಣ್ಣ ಮುದ್ದಿ, ಸಂತೋಷ ಹಿರೇಮಠ, ಮಲ್ಲಿಕಾರ್ಜುನಯ್ಯ ಹಿರೇಮಠ, ಶಿವಯೋಗಿ ಯರೇಶೀಮಿ, ಶಂಭುಲಿಂಗಪ್ಪ ಅಂಗಡಿ, ಉಮೇಶ ಹತ್ತಿಮತ್ತೂರ, ನಾಗರಾಜ ಕುಸನೂರ, ಶಂಭುಲಿಂಗಪ್ಪ ಕೌದಿ, ಕರಬಸನಗೌಡ ಪಾಟೀಲ, ಶಿವಯೋಗಿ ಹೂಲಿಕಂತಿಮಠ ಮತ್ತಿತರರು ಉಪಸ್ಥಿತರಿದ್ದರು.ರೇಣುಕಾ ಮಡಿವಾಳರ ಪ್ರಾರ್ಥಿಸಿದರು. ವಿರುಪಾಕ್ಷಪ್ಪ ಹತ್ತಿಮತ್ತೂರ ಸ್ವಾಗತಿಸಿದರು. ಶೋಭಾ ಜಾಗಟಗೇರಿ ನಿರೂಪಿಸಿದರು. ತಮ್ಮಣ್ಣ ಮುದ್ದಿ ಕೊನೆಯಲ್ಲಿ ವಂದಿಸಿದರು.