ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರುಗಳಿಗೆ ತರಬೇತಿ ಕಾರ್ಯಕ್ರಮ
ನೇಸರಗಿ 6 : ಸಮೀಪದ ಮತ್ತಿಕೊಪ್ಪದ ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮೂರು ದಿನಗಳವರೆಗೆ ಜಲಾನಯನ ಕಾರ್ಯಕಾರಿ ಸಮಿತಿಯ ಸದಸ್ಯರು, ಬಳಕೆದಾರರ ಗುಂಪಿನ ಸದಸ್ಯರು ಹಾಗೂ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರುಗಳಿಗೆ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಭಾರತೀಯ ಕೃಷಿ ಅನುಸಂಧಾನ ಪರಿಷತ್ನ ಅಟಾರಿ-ಬೆಂಗಳೂರಿನ ಪ್ರಧಾನ ವಿಜ್ಞಾನಿ ಡಾ. ಬಿ. ಟಿ. ರಾಯುಡು ಮಾತನಾಡಿ, ಕೇಂದ್ರ ಸರ್ಕಾರದ ಭಾರತೀಯ ಕೃಷಿ ಅನುಸಂಧಾನ ಪರಿಷತ್ ದೇಶದಲ್ಲಿರುವ 731 ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ಆಯಾ ಜಿಲ್ಲೆಗಳಲ್ಲಿ ಕ್ಷೇತ್ರ ಪರೀಕ್ಷೆ, ಮುಂಚೂಣಿ ಪ್ರಾತ್ಯಕ್ಷಿಕೆಗಳನ್ನು ಕೈಗೊಂಡು ವಿವಿಧ ತರಬೇತಿಗಳ ಮೂಲಕ ರೈತರಿಗೆ ತಂತ್ರಜ್ಞಾನದ ಮಾಹಿತಿಯನ್ನು ವಿಸ್ತರಿಸುವ ಗಮನಾರ್ಹವಾದ ಕೆಲಸವನ್ನು ಮಾಡಲಾಗುತ್ತಿದೆ ಎಂದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಮಂಜುನಾಥ ಚೌರಡ್ಡಿ ಮಾತನಾಡಿ, ಕೇಂದ್ರದಲ್ಲಿ ಮಣ್ಣು ಮತ್ತು ನೀರು ಸಂರಕ್ಷಣೆ ಪದ್ಧತಿಗಳ ಕುರಿತು ರೈತರಿಗೆ ಉಪಯುಕ್ತ ಮಾಹಿತಿ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಹಿಂದಿನ ಕುಲಪತಿಗಳಾದ ಡಾ. ಪಿ. ಎಸ್. ಹೂಗಾರ, ಕೇಂದ್ರದ ತೋಟಗಾರಿಕಾ ವಿಜ್ಞಾನಿ ಪ್ರವೀಣ ಯಡಹಳ್ಳಿ, ಕ್ಷೇತ್ರ ವ್ಯವಸ್ಥಾಪಕ ಶಂಕರಗೌಡ ಪಾಟೀಲ ಮತ್ತು ರೈತರು ಉಪಸ್ಥಿತರಿದ್ದರು.
ಕೇಂದ್ರದ ವಿಜ್ಞಾನಿ ಎಸ್. ಎಮ್. ವಾರದ ಮಾತನಾಡಿದರು. ವಿಜ್ಞಾನಿ ಜಿ. ಬಿ. ವಿಶ್ವನಾಥ ಸ್ವಾಗತಿಸಿದರು. ವಿನೋದ ಕೋಚಿ ವಂದಿಸಿದರು.
ನೇಸರಗಿ ಸಮೀಪದ ಮತ್ತಿಕೊಪ್ಪದ ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರುಗಳಿಗೆ ತರಬೇತಿ ಕಾರ್ಯಕ್ರಮವನ್ನು ಭಾರತೀಯ ಕೃಷಿ ಅನುಸಂಧಾನ ಪರಿಷತ್ನ ಅಟಾರಿ- ಬೆಂಗಳೂರಿನ ಪ್ರಧಾನ ವಿಜ್ಞಾನಿ ಡಾ. ಬಿ. ಟಿ. ರಾಯುಡು ಉದ್ಘಾಟಿಸಿದರು.