ಏ.10 ರಂದು ಸಂಭ್ರಮ ಸಡಗರದಲ್ಲಿ ಭಗವಾನ ಮಹಾವೀರ ಜನ್ಮ ಕಲ್ಯಾಣಕ ಮಹೋತ್ಸವ ಆಚರಣೆ
ಬೆಳಗಾವಿ 01: ಜೈನ ಧರ್ಮದ 24 ನೇ ತೀರ್ಥಂಕರರಾದ ಭಗವಾನ ಮಹಾವೀರರ 2624 ನೇ ಜನ್ಮ ಕಲ್ಯಾಣಕ ಮಹೋತ್ಸವವನ್ನು ಇದೇ ಏಪ್ರಿಲ 10 ರಂದು ಸಂಭ್ರಮ ಸಡಗರದಲ್ಲಿ ಆಚರಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜನ್ಮ ಕಲ್ಯಾಣಕ ಮಹೋತ್ಸವ ಮಧವರ್ತಿ ಉತ್ಸವ ಸಮಿತಿಯ ಗೌರವ ಕಾರ್ಯದರ್ಶಿ ರಾಜೇಂದ್ರ ಜೈನ ಅವರು ಇಂದಿಲ್ಲಿ ಹೇಳಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏ.3 ರಂದು ಭರತೇಶ ಶಿಕ್ಷಣ ಸಂಸ್ಥೆ ಹಾಗೂ ಏ.7 ರಂದು ಗೋಮಟೇಶ ವಿದ್ಯಾಪೀಠ ಹಿಂದವಾಡಿ ಈ ಎರಡು ಸ್ಥಳಗಳಲ್ಲಿ ಬೃಹತ್ತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಏ.5 ರಂದು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಭಜನಾ ಸ್ಪರ್ಧೆ, ಟೆಲೆಂಟ್ ಶೋ, ಡೈನಾಮಿಕ ಡ್ಯೂ, ಹಬ್ಬಗಳ ಆಚರಣೆ , ಜೈನ ಅಡುಗೆ ಸ್ಪರ್ಧೆಗಳನ್ನು ನಡೆಸಲಾಗುವುದು ಎಂದು ಅವರು ತಿಳಿಸಿದರು.
ಏ. 6 ರಂದು ಬೃಹತ್ ಬೈಕ ರಾ್ಯಲಿಯನ್ನು ಹಮ್ಮಿಕೊಳ್ಳಲಾಗಿದ್ದು, ಈ ರಾ್ಯಲಿಯಲ್ಲಿ ಸುಮಾರು 500 ಜನರು ಭಾಗವಹಿಸಲಿದ್ದಾರೆ. ಈ ರಾ್ಯಲಿ ಬೆಳಿಗ್ಗೆ 8 ಗಂಟೆಗೆ ಸಿಪಿಎಡ್ ಮೈದಾನದಿಂದ ಪ್ರಾರಂಭಗೊಂಡು ಸದಾಶಿವನಗರ ವಿಶ್ವೇಶ್ವರಯ್ಯ ನಗರ, ರಾಣಿ ಚೆನ್ನಮ್ಮ ವೃತ್ತ ಮುಖಾಂತರ ನಗರದ ಪ್ರಮುಖ ಬೀದಿಯಲ್ಲಿ ಸುತ್ತಾಡಿ ಕೊನೆಗೆ ಮಹಾವೀರ ಭವನದಲ್ಲಿ ಮುಕ್ತಾಯಗೊಳ್ಳಲಿದೆ. ಅಂದು ಮಹಾವೀರ ಭವನದಲ್ಲಿ ರಂಗೋಲಿ ಸ್ಪರ್ಧೆ, ಆಗಮ ಶಾಸ್ತ್ರ ಅಲಂಕಾರ ಸ್ಫರ್ಧೆ, ನೃತ್ಯ ಸ್ಪರ್ಧೆ ನಡೆಯಲಿವೆ. ಏ.7 ರಂದು ಫ್ಯಾನ್ಸಿ ಡ್ರೆಸ್, ಮತ್ತು ನಾಟಕದ ಸ್ಪರ್ಧೆಗಳು ನಡೆಯಲಿವೆ. ಏ.8 ರಂದು ಸಾಯಂಕಾಲ7 ಗಂಟೆಗೆ ಜಿನಯಕ್ಷಿ ಜ್ವಾಲಾಮಾಲಿನಿ ನಾಟಕ ನಡೆಯಲಿದೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಉತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಮಾಜಿ ಶಾಸಕ ಸಂಜಯ ಪಾಟೀಲ ಅವರು ಮಾತನಾಡಿ, ಇತ್ತಿಚಿನ ದಿನಗಳಲ್ಲಿ ಬೆಸಿಲು ಹೆಚ್ಚಾಗುತ್ತಿರುವ ಕಾರಣ ಪ್ರಮುಖ ಮೆರವಣಿಗೆಯ ಮಾರ್ಗವನ್ನು ಬದಲಾಯಿಸಲಾಗಿದೆ. ಈ ವರ್ಷ ಏಪ್ರಿಲ 10 ರಂದು ಉತ್ಸವದ ಪ್ರಮುಖ ಮೆರವಣಿಗೆ ನಗರದ ಟಿಳಕಚೌಕ ದಿಂದ ಪ್ರಾರಂಭಗೊಂಡು, ಶೇರಿ ಗಲ್ಲಿ, ಶನಿ ಮಂದಿರ ರಸ್ತೆ, ಎಸ್.ಪಿ.ಎಂ.ರೋಡ, ಕೋರೆ ಗಲ್ಲಿ ಶಹಾಪೂರ, ಬಸವೇಶ್ವರ ಸರ್ಕಲ ಮೂಲಕ ಮಹಾವೀರ ಭವನದಲ್ಲಿ ಮುಕ್ತಾಯಗೊಳ್ಳಲಿದೆ. ಈ ಮೆರವಣಿಗೆಯಲ್ಲಿ ಸುಮಾರು 40 ಕ್ಕೂ ಹೆಚ್ಚು ಸ್ಥಬ್ದ ಚಿತ್ರಗಳ ಶೋಭಾರಥಗಳು ಭಾಗವಹಿಸಲಿವೆ ಎಂದರುಹಿರಿಯ ನ್ಯಾಯವಾದಿ ರವಿರಾಜ ಪಾಟೀಲ ಅವರು ಮಾತನಾಡಿ, ಮಹಾವೀರ ಜನ್ಮಕಲ್ಯಾಣಕ ಮಹೋತ್ಸವದ ಮೆರವಣಿಗೆ ನಂತರ ಅಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಪ್ರತಿ ವರ್ಷ ಅಂದಾಜು 20 ಸಾವಿರಕ್ಕೂ ಹೆಚ್ಚು ಜನರು ಪ್ರಸಾದವನ್ನು ಸ್ವೀಕರಿಸುತ್ತಾರೆ. ಈ ವರ್ಷವೂ ಸಹ 25 ಸಾವಿರ ಜನರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿತೋ ಪ್ರಧಾನ ಕಾರ್ಯದರ್ಶಿ ಅಭಯ ಆದಿಮನಿ ಅವರು ಮಾತನಾಡಿ, ಏ.9 ರಂದು ಬೆಳಿಗ್ಗೆ 7-30 ಗಂಟೆಗೆ ವಿಶ್ವ ನಮೋಕಾರ ದಿವಸವನ್ನು ಆಚರಿಸಲಾಗುತ್ತಿದ್ದು, ಈ ಕಾರ್ಯಕ್ರಮದಲ್ಲಿ ಸುಮಾರು 10 ಸಾವಿರ ಜನರು ಭಾಗವಹಿಸುವ ನೀರೀಕ್ಷೆ ಇದೆ. ಇದೊಂದು ಜೈನ ಸಮಾಜದ ಅತಿ ಮಹತ್ವದ ಕಾರ್ಯಕ್ರಮವಾಗಿದೆ ಎಂದು ಹೇಳಿದ ಅವರು ಭಗವಾನ ಮಹಾವೀರ ಜನ್ಮ ಕಲ್ಯಾಣಕ ಮಹೋತ್ಸವ ಹಾಗೂ ವಿಶ್ವ ನವಕಾರ ದಿವಸ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕೆಂದು ಅವರು ವಿನಂತಿಸಿಕೊಂಡರು.
ಪತ್ರಿಕಾಗೋಷ್ಟಿಯಲ್ಲಿ ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ, ಉತ್ಸವ ಸಮಿತಿಯ ಸಹ ಕಾರ್ಯದರ್ಶಿ ಹೀರಾಚಂದ ಕಲಮನಿ,ರಾಜು ಖೋಡಾ, ಸುರೇಖಾ ಗೌರಗೊಂಡಾ ಅರುಣಾ ಶಹಾ , ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.