ತಹಶೀಲ್ದಾರ ಕರ್ತವ್ಯಕ್ಕೆ ಅಡ್ಡಿ, ಜೀವ ಬೆದರಿಕೆ: ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹ
ರಾಯಬಾಗ: ತಹಶೀಲ್ದಾರ ಸುರೇಶ ಮುಂಜೆ ಇವರ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಅವರಿಗೆ ಜೀವ ಬೆದರಿಕೆ ಹಾಕಿದ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಾ ನೌಕರರು ಪಟ್ಟಣದ ತಹಶೀಲ್ದಾರ ಕಾರ್ಯಾಲಯದಿಂದ ಝೆಂಡಾ ಕಟ್ಟೆವರೆಗೆ ಮೆರವಣಿಗೆ ನಡೆಸಿ, ರಸ್ತೆ ಬಂದ ಮಾಡಿ ಶನಿವಾರ ಪ್ರತಿಭಟನೆ ನಡೆಸಿದರು.
ಕ.ರಾ.ಸ.ನೌಕರರ ಸಂಘದ ತಾಲೂಕಾಧ್ಯಕ್ಷ ಉಮೇಶ ಪೋಳ ಮಾತನಾಡಿ, ತಹಶೀಲ್ದಾರರವರು ತಮ್ಮ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ರೈತ ಸಂಘದ ಮುಖಂಡರು ಎಂದು ಹೇಳಿಕೊಂಡು ಕೆಲವರು ತಾಲೂಕಿನ ಕಂಕಣವಾಡಿ ಗ್ರಾಮದ ಜಮೀನಿಗೆ ಸಂಬಂಧಿಸಿದ ವಿಷಯವಾಗಿ ಕೆಲಸ ಮಾಡುವಂತೆ ಒತ್ತಾಯಿಸಿದ್ದಾರೆ. ತಹಶೀಲ್ದಾರರವರು ಸದರಿ ಜಮೀನಿನ ಬಗ್ಗೆ ನ್ಯಾಯಾಲಯದಿಂದ ತಡೆಯಾಜ್ಞೆ ಇರುವುದರಿಂದ ಅದರಲ್ಲಿ ಯಾವುದೇ ವಹಿವಾಟು ಮಾಡಲು ಬರುವುದಿಲ್ಲ ಮತ್ತು ತಾವು ಕಚೇರಿ ಕೆಲಸ ನಿಮಿತ್ತ ಬೆಂಗಳೂರಿನ ಹೈಕೋರ್ಟಗೆ ಹೋಗುತ್ತಿದ್ದು, ಬಂದ ನಂತರ ಪರೀಶೀಲಿಸುವುದಾಗಿ ಸೌಜನ್ಯದಿಂದ ಹೇಳಿದರೂ, ಆರೋಪಿಗಳು ತಹಶೀಲ್ದಾರರಿಗೆ ಏರು ಧ್ವನಿಯಲ್ಲಿ ಏಕವಚನದಲ್ಲಿ ನಿಂದಿಸಿ, ಕಚೇರಿ ಮುಖ್ಯ ದ್ವಾರವನ್ನು ಬಂದ ಮಾಡಿ, ಅವರ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದನ್ನು ನೌಕರರ ಸಂಘವು ತೀವ್ರವಾಗಿ ಖಂಡಿಸುವುದಾಗಿ ಹೇಳಿದರು.
ಇಂತಹ ಕಹಿ ಘಟನೆಯಿಂದ ತಾಲೂಕಿನ ಸರ್ಕಾರಿ ನೌಕರರಲ್ಲಿ ಭೀತಿಯುಂಟಾಗಿದ್ದು, ಈ ರೀತಿಯ ಗೂಂಡಾ ವರ್ತನೆಯಿಂದ ಸರ್ಕಾರಿ ನೌಕರರ ಮಾನಸಿಕ ಸ್ಥೈರ್ಯ ಕುಸಿಯುತ್ತಿದೆ. ಸರ್ಕಾರಿ ನೌಕರರಿಗೆ ಸೂಕ್ತ ರಕ್ಷಣೆ ನೀಡಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ನಮ್ಮ ಮನವಿಗೆ ಸರ್ಕಾರ ಸ್ಪಂದಿಸದಿದ್ದರೆ ಮುಂಬರುವ ದಿನಗಳಲ್ಲಿ ಸರ್ಕಾರಿ ನೌಕರರು ಉಗ್ರ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ಸರ್ಕಾರಿ ನೌಕರರ ಪ್ರತಿಭಟನೆಯಲ್ಲಿ ವಕೀಲರ ಸಂಘದ ಸದಸ್ಯರು, ರೈತ ಸಂಘದವರು ಮತ್ತು ಕನ್ನಡ ಪರ ಸಂಘಟನೆ ಪದಾಧಿಕಾರಿಗಳು ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು.
ಸರ್ಕಾರಿ ನೌಕರರ ಸಂಘದ ಮನವಿಯನ್ನು ಸ್ವೀಕರಿಸಿದ ಚಿಕ್ಕೋಡಿ ಉಪವಿಭಾಗಾಧಿಕಾರಿಗಳ ಕಚೇರಿಯ ಗ್ರೇಡ್-2 ತಹಶೀಲ್ದಾರ ಪರಿಮಳಾ ದೇಶಪಾಂಡೆ ಅವರು, ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಪಿ.ಎಮ್.ದರೂರ, ಸಿಪಿಐ ಬಿ.ಎಸ್.ಮಂಟೂರ, ಪಿಎಸ್ಐ ಶಿವಶಂಕರ ಮುಕರಿ, ಆರ್.ಎಸ್.ಶಿರಗಾಂವೆ, ವಿಶ್ವನಾಥ ಹಾರೂಗೇರಿ, ತಾಲೂಕಾಧಿಕಾರಿಗಳಾದ ಕಿರಣ ಚಂದರಗಿ, ಬಸವರಾಜಪ್ಪ ಆರ್., ಕಲ್ಪನಾ ಕಾಂಬಳೆ, ಭಾರತಿ ಕಾಂಬಳೆ, ಶಂಕರಗೌಡ ಪಾಟೀಲ, ಬಿ.ಎಮ್.ಮಾಳಿ, ಪರಮಾನಂದ ಮಂಗಸೂಳಿ, ಡಿ.ಎಸ್.ಮಾಡಲಗಿ, ಎಮ್.ಕೆ.ಶೇತಸನದಿ, ವಿನಾಯಕ ಭಾಟೆ, ವಿನೋದ ಚವ್ಹಾಣ, ಎಮ್.ಎಚ್.ಕೊರಬು, ಎಚ್.ಎಚ್.ನಾಗನ್ನವರ ಸೇರಿದಂತೆ ವಿವಿಧ ಇಲಾಖೆಗಳ ನೌಕರರು ಮತ್ತು ಪಿಡಿಒಗಳು ಪಾಲ್ಗೊಂಡಿದ್ದರು.