ವಿವೇಕಾನಂದರ ಆದರ್ಶ ವಿಶ್ವಕ್ಕೆ ಮಾದರಿ: ಪ್ರೊ.ರಾಬರ್ಟ್‌ ಜೋಸ್

ವಿವೇಕಾನಂದರ ಆದರ್ಶ ವಿಶ್ವಕ್ಕೆ ಮಾದರಿ: ಪ್ರೊ.ರಾಬರ್ಟ್‌ ಜೋಸ್ Model for Vivekananda's Ideal World: Prof. Robert Jose

              ಬಳ್ಳಾರಿ 12:  1893ರಲ್ಲಿ ಶಿಕಾಗೋದಲ್ಲಿ ಜರುಗಿದ್ದ ಮೊದಲ ವಿಶ್ವಧರ್ಮ ಸಭೆಯಲ್ಲಿ ಸ್ವಾಮಿ ವಿವೇಕಾನಂದರು ಭಾರತ ಮತ್ತು ಹಿಂದೂ ಧರ್ಮವನ್ನು ಪ್ರತಿನಿಧಿಸಿ ಯುವಕರಿಗೆ ಸ್ಪೂರ್ತಿಯಾಗಿ ವಿಶ್ವಕ್ಕೆ ಮಾದರಿಯಾಗಿದ್ದಾರೆ ಎಂದು ವಿಶ್ವವಿದ್ಯಾಲಯದ ಇಂಗ್ಲೀಷ್ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ ರಾಬರ್ಟ್‌ ಜೋಸ್ ಅವರು ಹೇಳಿದರು.ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಆಡಳಿತ ಭವನದಲ್ಲಿ ಸೋಮವಾರ ಆಯೋಜಿಸಿದ್ದ ‘164ನೇ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ’ ಕಾರ್ಯಕ್ರಮವನ್ನು ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ಜೀವನ, ಆಧ್ಯಾತ್ಮಿಕತೆ ಮತ್ತು ರಾಷ್ಟ್ರ ನಿರ್ಮಾಣ ಕುರಿತು ತಮ್ಮ ಬೋಧನೆಗಳ ಮೂಲಕ ಹಲವಾರು ಪೀಳಿಗೆಗೆ ಸ್ಪೂರ್ತಿ ನೀಡಿದ ಮಹಾನ್ ತತ್ವಜ್ಞಾನಿ, ಸನ್ಯಾಸಿ ಹಾಗೂ ಯುವಕರಿಗೆ ಮಾದರಿಯಾಗಿದ್ದಾರೆ.

              ಹಿಂದೂ ಧರ್ಮದ ವಿಚಾರಗಳನ್ನು ವಿಶ್ವದ ಯುವಜನರಿಗೆ ಪರಿಚಯಿಸಿದರು. ಅವರು ಯಾವುದೇ ಒಂದು ರಾಷ್ಟ್ರ, ಜನಾಂಗ, ಧರ್ಮಕ್ಕೆ ಸೀಮಿತವಾಗದೆ ಕರ್ಮ ಯೋಗದ ಕುರಿತು ಅಪಾರ ಆಸಕ್ತಿ ಹೊಂದಿ, ಸಾಧನೆ ಮಾಡಿದರು ಎಂದು ಹೇಳಿದರು.ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಪೀರ್ ಬಾಷಾ ಅವರು ಮಾತನಾಡಿ, ವಿವೇಕಾನಂದರು ಭಾರತದ ಸಂಸ್ಕೃತಿಯ ಪ್ರತೀಕವಾಗಿದ್ದರು. ದೇಶದ ವೇದ ಪಂಡಿತರು ಅವರಿಗೆ ಮಾನ್ಯತೆ ನೀಡಲಿಲ್ಲ. ಅವರ ವೈಚಾರಿಕ ಚಿಂತನೆಗಳು ಅಮೇರಿಕಾದಲ್ಲಿ ಹೆಚ್ಚು ಪ್ರಭಾವಕ್ಕೆ ಒಳಗಾಗಿದ್ದವು. ದೇಶದ ಅತಿದೊಡ್ಡ ಪಿಡುಗಾದ ಜಾತಿಪದ್ದತಿಯನ್ನು ವಿವೇಕಾನಂದರು ಎಂದಿಗೂ ಅನುಕರಿಸಲಿಲ್ಲ ಎಂದರು. ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಮುನಿರಾಜು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿವೇಕಾನಂದರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಕೊಳ್ಳುವ ಮೂಲಕ ದೇಶ ಕಟ್ಟುವ ಕೆಲಸವಾಗಬೇಕು. ಯುವಕರಲ್ಲಿ ಸಾಧಿಸುವ ಉತ್ಸಾಹ ಎದೆಗುಂದಬಾರದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.