ಬಳ್ಳಾರಿಯಲ್ಲಿ ಸಂಭ್ರಮದ ಮಹಾವೀರ ಜಯಂತ್ಯೋತ್ಸವ ಸರಳ ಮತ್ತು ಶಾಂತಿಯುತ ಜೀವನ ನಡೆಸಿ: ಮೇಯರ್ ಮುಲ್ಲಂಗಿ ನಂದೀಶ್
ಬಳ್ಳಾರಿ 10: ಮಹಾವೀರ ಜಯಂತಿ ಕೇವಲ ಧಾರ್ಮಿಕ ಹಬ್ಬವಲ್ಲ, ಬದಲಾಗಿ ಕರುಣೆ, ನೈತಿಕತೆ ಮತ್ತು ಅಹಿಂಸೆಯನ್ನು ಪ್ರತಿಬಿಂಬಿಸುವ ದಿನವಾಗಿದ್ದು, ಸತ್ಯ, ಕ್ಷಮೆ ಮತ್ತು ಭೌತಿಕತೆಯಿಂದ ನಿರ್ಲಿಪ್ತತೆಯ ಮಾರ್ಗವನ್ನು ಅನುಸರಿಸುವ ಮೂಲಕ ಸರಳ ಮತ್ತು ಶಾಂತಿಯುತ ಜೀವನವನ್ನು ನಡೆಸಲು ಕಲಿಸುತ್ತದೆ ಎಂದು ಮಹಾನಗರ ಪಾಲಿಕೆಯ ಮಹಾಪೌರರಾದ ಮುಲ್ಲಂಗಿ ನಂದೀಶ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ತೇರುಬೀದಿ ರಸ್ತೆಯ ಪಾರ್ಶ್ವನಾಥ್ ಭವನ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮವನ್ನು ಮಹಾವೀರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಮಹಾವೀರರು ತಮ್ಮ 30 ನೇ ವಯಸ್ಸಿನಲ್ಲಿ ಜ್ಞಾನೋದಯವನ್ನು ಹುಡುಕುತ್ತಾ ತಮ್ಮ ಐಷರಾಮಿ ಜೀವನವನ್ನು ತ್ಯಜಿಸಿ 12 ವರ್ಷಗಳ ತೀವ್ರ ಧ್ಯಾನ ಮತ್ತು ತಪಸ್ಸಿನ ನಂತರ, ಅವರು ಕೇವಲ ಜ್ಞಾನ ಪಡೆದು ತಮ್ಮ ಜೀವನದ ಉಳಿದ ಭಾಗವನ್ನು ಅಹಿಂಸೆ, ಸತ್ಯ ಮತ್ತು ಸ್ವಯಂ-ಶಿಸ್ತಿನ ಬೋಧನೆಗಳನ್ನು ಹರಡಲು ಕಳೆದರು ಎಂದು ಮಹಾವೀರರ ಜೀವನದ ಬಗ್ಗೆ ಪರಿಚಯಿಸಿದರು.
ಸಾಧ್ವಜಿ ಸೂರ್ಯಪ್ರಭ ಶ್ರೀಜಿ ಅವರು ಕಾರ್ಯಕ್ರಮದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಜೈನ ಧರ್ಮದ ಇಪ್ಪತ್ತನಾಲ್ಕನೇ ತೀಥಂರ್ಕರರಾದ ಭಗವಾನ್ ಮಹಾವೀರರು ಚಿಕ್ಕ ವಯಸ್ಸಿನಲ್ಲಿಯೇ ಸನ್ಯಾಸ ಸ್ವೀಕರಿಸಿದವರು. ಸಹಾನುಭೂತಿಯ ಹೊಸ ಧರ್ಮವನ್ನು ಜಗತ್ತಿಗೆ ಪರಿಚಯಿಸಿದ್ದ ಭಗವಾನ್ ಮಹಾವೀರರು ಅಹಿಂಸೆ, ಪ್ರೀತಿ ಮತ್ತು ತಪಸ್ವಿ ಆಗಿದ್ದರು ಎಂದರು.
ಮಹಾವೀರ ಕ್ರಿ.ಪೂ 599 ರಲ್ಲಿ ಬಿಹಾರದ ಲಿಚ್ಚಾವಿ ರಾಜವಂಶದ ಮಹಾರಾಜ ಸಿದ್ಧಾರ್ಥ ಮತ್ತು ರಾಣಿ ತ್ರಿಶಾಲಾ ದಂಪತಿಗೆ ಜನಿಸಿದರು ಎಂದು ಇತಿಹಾಸದ ಪುಟಗಳು ಹೇಳುತ್ತವೆ. ಬಾಲ್ಯದಲ್ಲಿ ಮಹಾವೀರರ ಹೆಸರು ವರ್ಧಮಾನ್. ಮಹಾವೀರರು. ಸಮೃದ್ಧ ಜೀವನ ಮತ್ತು ಶಾಂತಿಯ ಮಾರ್ಗಕ್ಕಾಗಿ ಐದು ತತ್ವಗಳನ್ನು ನೀಡಿದ್ದಾರೆ. ಆ ತತ್ವಗಳೆಂದರೆ ಅಹಿಂಸೆ, ಸತ್ಯ, ಅಸ್ಥಿತ್ವ, ಬ್ರಹ್ಮಚರ್ಯ ಮತ್ತು ಭೌತಿಕವಲ್ಲದ ವಸ್ತುಗಳಿಂದ ದೂರವಿರುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಳ್ಳಾರಿ ಕೆ.ಸುಧಾ ತಂಡದಿಂದ ಭಗವಾನ್ ಮಹಾವೀರರ ಕುರಿತ ಭಕ್ತಿ ಗೀತೆಗಳನ್ನು ಪ್ರಸ್ತುತ ಪಡಿಸಿದರು ಮತ್ತು ಜೈನ ಸಮುದಾಯದ ಮಕ್ಕಳಿಂದ ಸಾಂಸ್ಕೃತಿಕ ನೃತ್ಯ ಪ್ರದರ್ಶನ ನಡೆಯಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯರಾದ ಗಾದೆಪ್ಪ.ಪಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಜೈನ್ ಸಂಘದ ಅಧ್ಯಕ್ಷ ಉತ್ಸವ್ ಲಾಲ್ ಜೀ ವರ್ಗೇಚ ಸೇರಿದಂತೆ ಸಮುದಾಯ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಇತರರು ಉಪಸ್ಥಿತರಿದ್ದರು.
*ಸಂಭ್ರಮದ ಮೆರವಣಿಗೆ:*
ಮಹಾವೀರ ಜಯಂತಿಯ ಅಂಗವಾಗಿ ಏರಿ್ಡಸಿದ್ದ ಮೆರವಣಿಗೆಯು ವಿವಿಧ ಸಾಂಸ್ಕೃತಿಕ ಕಲಾ ತಂಡಗಳನ್ನೊಳಗೊಂಡು ನಗರದಲ್ಲಿ ಸಂಭ್ರಮದಿಂದ ನಡೆಯಿತು.
ಮೆರವಣಿಗೆಯು ನಗರದ ಪಾರ್ಶ್ವನಾಥ್ ಭವನದಿಂದ ಆರಂಭವಾಗಿ ತೇರು ಬೀದಿ, ಕಾಳಮ್ಮ ಬೀದಿ, ಬೆಂಗಳೂರು ರಸ್ತೆ, ಬ್ರೂಸ್ ಪೇಟೆ ಪೋಲಿಸ್ ಠಾಣೆ ರಸ್ತೆ ಮೂಲಕ ಪಾರ್ಶ್ವನಾಥ್ ಭವನ ಸಭಾಂಗಣಕ್ಕೆ ತಲುಪಿ ಸಂಪನ್ನಗೊಂಡಿತು.