ಬಾಲ್ಯದಲ್ಲಿ ಮಗು ತನ್ನ ಸುತ್ತಮುತ್ತಲಿನ ಪರಿಸರದಲ್ಲಿ ಶಿಕ್ಷಣ ಪಡೆಯಲಿ
ಬ್ಯಾಡಗಿ : ಮಕ್ಕಳನ್ನು ಡಾಕ್ಟ್ರು, ಇಂಜನೀಯರ್, ದೊಡ್ಡ ದೊಡ್ಡ ಅಧಿಕಾರಿಗಳನ್ನಾಗಿ ಮಾಡಿಸುವ ಉದ್ದೇಶದಿಂದ ಮನೆಯಿಂದ ದೂರ ಇಟ್ಟು ಶಿಕ್ಷಣ ಕೊಡಿಸುವುದರಿಂದ ಅವರು ವಿದ್ಯಾವಂತರಾಗುತ್ತಾರೆ ವಿನಹ ಸಂಸ್ಕಾರವಂತರಾಗಲಾರರು. ಮಕ್ಕಳನ್ನು ಮನೆಯಲ್ಲಿಯೇ ಇಟ್ಟುಕೊಂಡು ಉತ್ತಮ ಸಂಸ್ಕಾರದೊಂದಿಗೆ ಶಿಕ್ಷಣ ಕೊಡಿಸಿದಾಗ ಅವರು ಉತ್ತಮ ಪ್ರಜೆಯಾಗಿ ಹೊರಹೊಮ್ಮಲು ಸಾಧ್ಯ ಎಂದು ಶಿಕ್ಷಕಿ ರಾಜೇಶ್ವರಿ ಎನ್.ಬಿಲಹಳ್ಳಿ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತು ಬ್ಯಾಡಗಿ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಂಡೇನಹಳ್ಳಿ ಇವರ ಸಹಯೋಗದಲ್ಲಿ ನಡೆದ ದಿ. ಶ್ರೀ ರಾಜಶೇಖರಗೌಡ್ರು.ಗು.ಪಾಟೀಲ,ದಿ.ಶ್ರೀ ಜಟ್ಟೆಪ್ಪಗೌಡ್ರು ಗು ಪಾಟೀಲ ಹಾಗೂದಿ.ಶ್ರೀಮತಿ ಪುಟ್ಟಮ್ಮ ದುಂಡೆಪ್ಪ ರೊಡ್ಡನವರ ಇವರ ದತ್ತಿ ವಿಷಯ ಹಿರಿಯರ ಆರೈಕೆ,ಸ್ಮರಣೆ ಮತ್ತು ನಮ್ಮ ಪರಂಪರೆ ಮುಂದುವರಿಯಲಿ ವಿಷಯ ಕುರಿತು ಉಪನ್ಯಾಸ ನೀಡುತ್ತಾ ಮಕ್ಕಳಿಗೆ ಬಾಲ್ಯದಲ್ಲಿ ಎಲ್ಲರ ಪ್ರೀತಿ ಮತ್ತು ಸಂಬಂಧಗಳ ಅರಿವು ಆಗುತ್ತದೆ. ಆಗ ಮಕ್ಕಳಿಗೆ ಹಿರಿಯರ ಬಗ್ಗೆ ಗೌರವ ಹೆಚ್ಚುತ್ತದೆ ಎಂದರು. ಕ.ಸಾ.ಪ.ತಾಲೂಕ ಘಟಕದ ಅಧ್ಯಕ್ಷ ಬಿ.ಎಂ .ಜಗಾಪೂರ ಪ್ರಾಸ್ತಾವಿಕವಾಗಿ ಮಾತನಾಡುತ್ತ ಕಸಾಪ ದತ್ತಿ ನಿಧಿಯ ಬಡ್ಡಿ ಹಣದಿಂದ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ಗ್ರಾಮೀಣ ಭಾಗದಲ್ಲಿ ಸಂಘಟಿಸಲು ಸಾಧ್ಯವಾಗುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದ್ದು ಕನ್ನಡ ಭಾಷೆ, ನೆಲ- ಜಲದ ಪರವಾಗಿ ಕಾರ್ಯಗಳನ್ನು ಮಾಡುತ್ತಿದೆ. ಬದಲಾದ ಕಾಲಘಟ್ಟದಲ್ಲಿ ಯುವ ಜನಾಂಗ ನಮ್ಮ ಹಿರಿಯರ ಸಂಸ್ಕಾರ - ಸಂಸ್ಕೃತಿ ಮರೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು. ಶಿವಾನಂದ ನಾಗಪ್ಪ ರೊಡ್ಡನವರ ಉದ್ಘಾಟನೆ ನೆರವೇರಿಸಿ ತಾಯಿ ಮಗುವಿನಲ್ಲಿ ಒಳ್ಳೆ ಗುಣಗಳನ್ನು ಬಿತ್ತಿದಾಗ ಸಮಾಜ ಮೆಚ್ಚುವ ಪ್ರಜೆಯಾಗಲು ಸಾಧ್ಯ ಎಂದರು. ಎಸ್ಡಿಎಂಸಿ ಅಧ್ಯಕ್ಷ ಪ್ರಶಾಂತ ಹೊಸಮನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಮಲ್ಲಪ್ಪ ಕರೇಣ್ಣನವರ,ಮುಖ್ಯೋಪಾಧ್ಯಾಯಿನಿ ಎನ್.ಬಿ.ಅಬಲೂರ ಮಾತನಾಡಿದರು. ಕ.ಸಾ.ಪ ಸಂಘಟನಾ ಕಾರ್ಯದರ್ಶಿ ರಾಜಶೇಖರ ಹೋಸಳ್ಳಿ, ಶಿಕ್ಷಕರಾದ ಹೊನ್ನಪ್ಪ, ಕೆ.ಎಸ್.ಪಾಟೀಲ ಚೈತ್ರಾರಾವ ಟಿ.ಎಸ್.ಚೈತ್ರಾ ಕೆ.ಎಂ. ಡಿ.ಜಿಕಮದೋಡ ಸುನಿತಾ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.