ಮಕ್ಕಳ ಶ್ರೇಯೋಭಿವೃದ್ಧಿಗೆ ದುಡಿಯುತ್ತಿರುವುದು ಸಂತಸ: ಮಹಾಲಿಂಗಪ್ಪ ಸನದಿ

ಮಕ್ಕಳ ಶ್ರೇಯೋಭಿವೃದ್ಧಿಗೆ ದುಡಿಯುತ್ತಿರುವುದು ಸಂತಸ: ಮಹಾಲಿಂಗಪ್ಪ ಸನದಿ Happy to be working for the betterment of children: Mahalingappa Sanadi

            ಮಹಾಲಿಂಗಪುರ 18: ನಾವು ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ಇಂತಹ ಯಾವುದೇ ಸೌಲಭ್ಯಗಳೂ ನಮಗಿರಲಿಲ್ಲ ಆದರೆ ಇಂದಿನ ಮಕ್ಕಳು ಅದೃಷ್ಟವಂತರು. ಇಲಾಖೆ, ಸಮುದಾಯ, ಸಂಘ ಸಂಸ್ಥೆಗಳು ಇಂದು ಮಕ್ಕಳ ಶ್ರೇಯೋಭಿವೃದ್ಧಿಗೆ ದುಡಿಯುತ್ತಿರುವುದು ಸಂತಸ ಎಂದು ಸೈದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಾಲಿಂಗಪ್ಪ ಸನದಿ ಹೇಳಿದರು. 

          ಸಮೀಪದ ಸಮೀರವಾಡಿಯ ಸೋಮಯ್ಯಾ ಶಿಶುನಿಕೇತನ ವಿದ್ಯಾಮಂದಿರದಲ್ಲಿ ಜರುಗಿದ ಸೈದಾಪುರ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಸೋಮಯ್ಯಾ ಸಕ್ಕರೆ ಕಾರ್ಖಾನೆಯ ಪಾತ್ರ ತುಂಬಾ ದೊಡ್ಡದು. ಈ ಕಾರ್ಖಾನೆಯ ಅಭಿವೃದ್ಧಿಗೆ ಮತ್ತು ಅವರ ಕಾರ್ಯಗಳಿಗೆ ತಾವು ಸದಾ ಕೈಜೋಡಿಸುವುದಾಗಿ ಹೇಳಿದರು. 

           ಸಕ್ಕರೆ ಕಾರ್ಖಾನೆಯ ಸಿಟಿಒ ದಿನೇಶ್ ಶರ್ಮಾ ಮಾತನಾಡಿ, ಈ ಸ್ಪರ್ಧಾ ಜಗತ್ತಿಗೆ ಪಠ್ಯ ಕಲಿಕೆ ಮಾತ್ರ ಸಾಲದು, ಮಗುವಿನ ಅಂತಃಶಕ್ತಿಯ ಅಭಿವ್ಯಕ್ತಿಗೆ ಅವಕಾಶ ಒದಗಿಸಿ ಸೋಲನ್ನು ಸ್ವೀಕರಿಸುವ ಗುಣ ಬೆಳೆಸುವ ಹಾಗೂ ಮಕ್ಕಳ ಸವಾಂರ್ಗೀಣ ಅಭಿವೃದ್ಧಿ ಆತ್ಮವಿಶ್ವಾಸದೊಂದಿಗೆ ದೇಶ ಪ್ರತಿನಿಧಿಸುವ ಮಟ್ಟಕ್ಕೆ ಈ ಕಾರ್ಯಕ್ರಮಗಳು ಬುನಾದಿಯಾಗಲಿವೆ, ಇಲಾಖೆಯ ಈ ಮಹೋನ್ನತ ಕಾರ್ಯದ ಪೂರ್ಣ ಫಲ ಮಕ್ಕಳು ಪಡೆಯಬೇಕೆಂದರು.  ಸಿಆರ್ ಪಿ ಬಿ.ಕೆ.ಸಬರದ ಮಾತನಾಡಿದರು. 

            ಗ್ರಾಪಂ ಸದಸ್ಯರಾದ ರೂಪಾ ಶಿಂಧೆ, ಕವಿತಾ ಕಾಂಬಳೆ, ಶಾಲೆಯ ಸಂಯೋಜಕ ಡಿ.ಎಚ್‌.ನದಾಫ್, ಮುಖ್ಯೋಪಾಧ್ಯಾಯರಾದ ವಿವೇಕಾನಂದ ಎಚ್‌. ಭಜಂತ್ರಿ, ಎಸ್‌.ಎಂ.ನ್ಯಾಮಗೌಡ, ಪತ್ರಕರ್ತ ನಾರನಗೌಡ ಉತ್ತಂಗಿ ಇತರರಿದ್ದರು. ಕಾವೇರಿ ಚವ್ಹಾಣ ಪ್ರಾರ್ಥಿಸಿ, ಶಿಕ್ಷಕ ಸೋಮು ಕನಕರಡ್ಡಿ ನಿರೂಪಿಸಿ, ಶಿಕ್ಷಕಿ ಶಶಿಕಲಾ ಮೋಜನಿದಾರ ವಂದಿಸಿದರು. ನಂತರ ಜರುಗಿದ ಸ್ಪರ್ಧೆಗಳಲ್ಲಿ ಮಕ್ಕಳು ಭಾಗವಹಿಸಿ ಗಮನ ಸೆಳೆದರು.