ವಿವಿಧ ಬೇಡಿಕೆ ಈಡೇರಿಕೆಗೆ ಡಿ.8 ರಂದು ರೈತರಿಂದ ಪ್ರತಿಭಟನೆ

ವಿವಿಧ ಬೇಡಿಕೆ ಈಡೇರಿಕೆಗೆ ಡಿ.8 ರಂದು ರೈತರಿಂದ ಪ್ರತಿಭಟನೆ Farmers protest on December 8th for various demands

                     ಗದಗ:  ಬೆಳಗಾವಿಯಲ್ಲಿ ಡಿ.8 ರಿಂದ ನಡೆಯುವ ಚಳಿಗಾಲ ಅಧಿವೇಶನದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಜಿಲ್ಲಾಧ್ಯಕ್ಷ ನಟರಾಜ ಸವಡಿ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ರೈತರ ಪಂಪ್‌ಸೆಟ್‌ಗಳಿಗೆ ಉಚಿತವಾಗಿ ವಿದ್ಯುತ್ ಪರಿಕರಗಳನ್ನು ಮೊದಲಿನಂತೆ ವಿತರಿಸಬೇಕು. ರೈತರ ಬೆಳೆಗೆ ಸರ್ಕಾರ ಕಾನೂನಾತ್ಮಕ ಬೆಲೆ ನಿಗದಿಪಡಿಸಬೇಕು. ಜಲಜೀವನ ಮಿಷನ್ ಅಡಿಯಲ್ಲಿ ಪ್ರತಿ ಹಳ್ಳಿಗೂ ನೀರಿನ ಸಮರ​‍್ಕವಾಗಿ ಪೂರೈಕೆ ಮಾಡಬೇಕು. ವಿದ್ಯುನ್ಮಾನ ದತ್ತಾಂಶ ಭಂಡಾರ ಮಾಡಿ ಅದರಲ್ಲಿ ರೈತರಿಗೆ ಬೇಕಾದ ಎಲ್ಲ ಪ್ರಮಾಣ ಪತ್ರಗಳನ್ನು ಸಂಗ್ರಹಿಸಿ ಇಡಬೇಕು.

                      ಪ್ರಮಾಣ ಪತ್ರಗಳನ್ನು ನೀಡಲು ಬೇಕಾಗುವ ದಾಖಲೆಯನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಅಥವಾ ಸಿಬ್ಬಂದಿ ರೈತರ ಮನೆ ಬಾಗಿಲಿಗೆ ಬರುವ ಕೆಲಸವನ್ನು ಮಾಡಬೇಕು. ರೈತರ ಬ್ಯಾಂಕ್ ಖಾತೆಯಿಂದ ಆನ್‌ಲೈನ್ ಮೂಲಕ ಬೇರೆ ಖಾತೆಗೆ ಹಣ ವರ್ಗಾವಣೆ ಮಾಡಲು ಅವಕಾಶ ನೀಡಬಾರದು, ರೈತರು ಖುದ್ದಾಗಿ ಬ್ಯಾಂಕ್‌ಗೆ ಹೋಗಿ ತಮ್ಮ ಇಚ್ಛೆಯಂತೆ ಹಣವನ್ನು ಬೇರೆ ಖಾತೆಗೆ ಜಮಾ ಮಾಡಿಸುವಂತಾಗಬೇಕು ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಬಲ್ದೋಟ ದಂತಹ ಕಾರ್ಖಾನೆಗಳ ಸ್ಥಾಪನೆ ಆಗುವ ವಿಸ್ತರಣೆಯನ್ನು ಸ್ಥಗಿತಗೊಳಿಸಬೇಕು ಮತ್ತು ಪರಿಸರ ಸ್ನೇಹಿ ಉದ್ಯಮಗಳ ಸ್ಥಾಪನೆಗೆ ಸರ್ಕಾರ ಒತ್ತು ಕೊಡಬೇಕು ಹಾಗೂ ರೈತ ಹೋರಾಟಗಾರರಿಗೆ ಮಾಸಿಕ 10 ಸಾವಿರ ರೂ. ಗೌರವದನ ನೀಡುವುದು  ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಬೃಹತ್ ಪ್ರತಿಭಟನೆ ಮಾಡಲಾಗುತ್ತದೆ ಎಂದರು. 

             ಪತ್ರಿಕಾಗೋಷ್ಠಿಯಲ್ಲಿ  ಮುಂಡರಗಿ ತಾಲ್ಲೂಕಾಧ್ಯಕ್ಷ ಮಲ್ಲಿಕಾರ್ಜುನ ಹಿರೇಮಠ, ಮಹಿಳಾ ಅಧ್ಯಕ್ಷೆ ನಾಗವೇಣಿ ಕುಡಪಲಿ, ಗದಗ ತಾಲ್ಲೂಕಾಧ್ಯಕ್ಷ ಮೋಹನ ಇಮರಾಪೂರ, ಮಹಿಳಾ ಅಧ್ಯಕ್ಷೆ ರೇಖಾ ಜಡಿ, ಲಕ್ಷ್ಮೇಶ್ವರ ತಾಲ್ಲುಕಾಧ್ಯಕ್ಷ ರುದ್ರಗೌಡ ಪಾಟೀಲ, ನರಗುಂದ ತಾಲ್ಲೂಕಾಧ್ಯಕ್ಷ ಉಮೇಶ ಮರ್ಚಪ್ಪನವರ,  ಶಿರಹಟ್ಟಿ ತಾಲ್ಲುಕಾಧ್ಯಕ್ಷ ಮಹಾರುದ್ರಯ್ಯ ಲಕ್ಕುಂಡಿ, ಸೋಮಶೇಖರ ಕಡಗದ, ಮಹಮ್ಮದ್ ಅಲಿ ಬಾವಾಲೆ, ವಿಶ್ವನಾಥ ಹಿರೇಮಠ, ಸೋಮಶೇಖರ   ಚಿಕ್ಕಮಠ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.