ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಪ್ರತಿಯೊಬ್ಬರೂ ಆದ್ಯತೆ ನಿಡಬೇಕು: ನ್ಯಾ.ಮಹಾಂತೇಶ ದರಗದ

ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಪ್ರತಿಯೊಬ್ಬರೂ ಆದ್ಯತೆ ನಿಡಬೇಕು: ನ್ಯಾ.ಮಹಾಂತೇಶ ದರಗದ Everyone should prioritize mental and physical health: Justice Mahantesh Dargada

ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಪ್ರತಿಯೊಬ್ಬರೂ ಆದ್ಯತೆ ನಿಡಬೇಕು: ನ್ಯಾ.ಮಹಾಂತೇಶ ದರಗದ 

ಕೊಪ್ಪಳ 11: ಖಿನ್ನತೆ ಮತ್ತು ಒತ್ತಡವು ಆತ್ಮಹತ್ಯೆಗೆ ಮುಖ್ಯ ಕಾರಣವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಮಾನಸಿಕ ಹಾಗೂ ಬೌದ್ಧಿಕ ಆರೋಗ್ಯಕ್ಕೆ ಒತ್ತು ನೀಡಿ, ಸದೃಢರಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾಂತೇಶ ದರಗದ ಅವರು ಹೇಳಿದರು.ಗುರುವಾರದಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳ ಕಛೇರಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕೊಪ್ಪಳ ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ದದೇಗಲ್, ಕೊಪ್ಪಳ ಇವರ ಸಹಯೋಗದಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ ದಿನಾಚರಣೆ ಅಂಗವಾಗಿ ದದೇಗಲ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಮಾನಸಿಕ ಆರೋಗ್ಯ ವ್ಯಕ್ತಿಯ ವ್ಯಕ್ತಿತ್ವದ ಕನ್ನಡಿಯಾಗಿರುತ್ತದೆ. ಮಾನಸಿಕ ಸದೃಢತೆಯು ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಖಿನ್ನತೆಯಿಂದ ಕೂಡಿದ ಮಾನಸಿಕ ಸ್ಥಿತಿಯು ಆತ್ಮಹತ್ಯೆಯಂತಹ ಕೆಟ್ಟ ಆಲೋಚನೆಗಳಿಗೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳಬೇಕು. ವ್ಯಕ್ತಿಯು ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿದ್ದರೆ, ಆತ್ಮಹತ್ಯೆಯ ಯೋಚನೆಗಳು ಬರುವುದಿಲ್ಲ. ಆತ್ಮಹತ್ಯೆಗೆ ಖಿನ್ನತೆ ಮತ್ತು ಒತ್ತಡವು ಕಾರಣವಾಗಬಹುದು, ಈ ನಿಟ್ಟಿನಲ್ಲಿ ಒಬ್ಬ ವ್ಯಕ್ತಿಯು ಮಾನಸಿಕ ಬೆಳವಣಿಗೆಗೆ ಹಾಗೂ ಬೌದ್ಧಿಕ ಬೆಳವಣಿಗೆಗೆ ಆದ್ಯತೆ ನೀಡಬೇಕೆಂದು ತಿಳಿಸಿದ ಅವರು 2018 ರ ಮಾನಸಿಕ ಆರೋಗ್ಯ ಕಾಯ್ದೆಗಳ ಬಗ್ಗೆ ಮಾಹಿತಿ ನೀಡಿದರು.     ಜಿಲ್ಲಾ ಕುಷ್ಠರೋಗ ನಿವಾರಣಾ ಅಧಿಕಾರಿಗಳು ಮತ್ತು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳಾದ ಡಾ.ಹೆಚ್‌.ಪ್ರಕಾಶ ಅವರು ಮಾತನಾಡಿ, ಜೀವನದಲ್ಲಿ ನಿರಾಶೆ, ಒತ್ತಡ, ಮಾದಕ ವಸ್ತುಗಳ ವ್ಯಸನ, ಇನ್ನೂ ಅನೇಕ ಕಾರಣಗಳಿಂದ ವ್ಯಕ್ತಿಯು ಆತ್ಮಹತ್ಯೆಗೆ ಒಳಗಾಗುವ ಸಾಧ್ಯತೆ ಇದೆ. ಇಂತಹ ಸನ್ನಿವೇಶದಲ್ಲಿ ಇತರರೊಂದಿಗೆ ತಮ್ಮ ಭಾವನೆಗಳನ್ನು ಹಂಚಿಕೊಳ್ಳಬೇಕು. ಅವಶ್ಯವಿದ್ದಲ್ಲಿ ಆಪ್ತ ಸಮಾಲೋಚಕರನ್ನು ಭೇಟಿಯಾಗಬೇಕು.  ಆರೋಗ್ಯ ಇಲಾಖೆಯಿಂದ ನೀಡಿರುವ ಉಚಿತ ಟೋಲ್ ಫ್ರೀ ಸಂಖ್ಯೆ 14416 ಕ್ಕೆ ಕರೆ ಮಾಡಿ ಸೂಕ್ತ ಸಮಯಕ್ಕೆ ಆಪ್ತ ಸಮಾಲೋಚನೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ರವೀಂದ್ರನಾಥ ಎಮ್‌.ಹೆಚ್‌. ಅವರು ಮಾತನಾಡಿ, ಜೀವನದಲ್ಲಿ ನೀರೀಕ್ಷೆಗಳು ಕಡಿಮೆಯಾದರೆ, ಯೋಜನೆಗಳು ನಿಖರವಾಗಿದ್ದರೆ ಜೀವನ ವ್ಯವಸ್ಥಿತವಾಗಿರುತ್ತದೆ. ಶಿಸ್ತು, ಕ್ರಮಬದ್ಧ ಜೀವನ ಶೈಲಿ, ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಆರೋಗ್ಯಕರ ಜೀವನ ನಡೆಸಲು ಅನುಕೂಲ ಮಾಡಿಕೊಡುತ್ತವೆ ಎಂದು ತಿಳಿಸಿದರು.ಕಾರ್ಯಕ್ರಮಕ್ಕೆ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯರಾದ ಡಾ.ಲಕ್ಷ್ಮೀದೇವಿ ಎಂ.ಪಾಟೀಲ ಅವರು, ಆತ್ಮಹತ್ಯೆಯ ಬಗ್ಗೆ ಇರುವ ಅಪನಂಬಿಕೆಗಳು ಮತ್ತು ಕಳಂಕವನ್ನು ದೂರ ಮಾಡುವುದು ಅತೀ ಅಗತ್ಯ. ಆತ್ಮಹತ್ಯೆಗೆ ಮೊರೆ ಹೋಗುವ ಅಪಾಯದಂಚಿನಲ್ಲಿರುವವರ ಜೊತೆಗೆ ಸಹನೆ ಹಾಗೂ ಸಹಾನೂಭೂತಿಯಿಂದ ಮಾತನಾಡುವುದು,  ಕೌಟುಂಬಿಕ ಬೆಂಬಲ ನೀಡುವುದು, ಒಂಟಿಯಾಗಿರಲು ಬಿಡದಿರುವುದು, ಅತೀ ಮುಖ್ಯವಾಗಿರುತ್ತದೆ. ಅಗತ್ಯವಿದ್ದಲ್ಲಿ ಸೂಕ್ತವಾದ ಮನೋವೈದ್ಯಕೀಯ ಚಿಕಿತ್ಸೆ ನೀಡಬಹುದಾಗಿದೆ ಎಂದು ತಿಳಿಸಿದರು.      ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ದದೇಗಲ್‌ನ ಪ್ರಾಚಾರ್ಯರಾದ  ಕೆ. ವೀರೇಶಕುಮಾರ್ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ.ಶಶಿಧರ ಆಲೂರು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ ಪೂಜಾರ, ಮನಃಶಾಸ್ತ್ರಜ್ಞರಾದ ಪುಷ್ಪಾ ಥೆರೇಸಾ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಸಿಬ್ಬಂದಿ ವರ್ಗದವರು, ಸುರೇಶ ಬಿ. ಶಶಿಧರ ಪೂಜಾರ ಮತ್ತು ಸಂಸ್ಥೆಯ ಸಿಬ್ಬಂದಿ ವರ್ಗದವರು ಸೇರಿದಂತೆ ವಿರ್ದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.  

ಬೆಟಗೇರಿ ಮತ್ತು ಅಳವಂಡಿ ಸ್ಟೇಷನ್‌: ಇಂದು ವಿವಿಧ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯಕೊಪ್ಪಳ 11 : 110/11 ಕೆವಿ ಬೆಟಗೇರಿ ಸ್ಟೇಷನ್ ಮತ್ತು 33 ಕೆವಿ ಅಳವಂಡಿ ಸ್ಟೇಷನ್‌ನ ದ್ವಿತೀಯ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ನಡೆಯುತ್ತಿರುವ ಪ್ರಯುಕ್ತ ಸೆಪ್ಟೆಂಬರ್ 12ರಂದು ವಿವಿಧ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. 

110/11 ಕೆ.ವಿ ಬೆಟಗೇರಿ ಸ್ಟೇಷನ್‌ಗೆ ಒಳಪಡುವ ಎಫ್‌-1 ಮೋರನಾಳ, ಎಫ್‌-2 ಬೋಚನಹಳ್ಳಿ, ಎಫ್‌-3 ಹನಕುಂಟಿ, ಎಫ್‌-4 ಬೆಟಗೇರಿ ನಗರ ಎನ್‌.ಜೆ.ವೈ(ವಾಟರ್ ಸಪ್ಲೈ), ಎಫ್‌-5 ತಿಗರಿ, ಎಫ್‌-6 ಬೆಟಗೇರಿ ಎನ್‌.ಜೆ.ವೈ, ಎಫ್‌-7 ನೀರಲಗಿ, ಎಫ್‌-8 ಕಾತರಕಿ, ಎಫ್‌-9 ಡಂಬ್ರಳ್ಳಿ, ಎಫ್‌-10 ಮತ್ತೂರ, ಎಫ್‌-11 ಬಿಸರಳ್ಳಿ ಫೀಡರ್ ಮತ್ತು 33 ಕೆ.ವಿ ಆಳವಂಡಿ ಸ್ಟೇಷನ್‌ಗೆ ಒಳಪಡುವ ಎಫ್‌-1 ಬೈರಾಪೂರ, ಎಫ್‌-2 ಅಳವಂಡಿ, ಎಫ್‌-3 ಹಲವಾಗಲಿ, ಎಫ್‌-4 ಬೆಳಗಟ್ಟಿ, ಎಫ್‌-5 ಕವಲೂರ ಮತ್ತು ಎಫ್‌-6 ಹೈದರನಗರ ಈ ಎಲ್ಲಾ ಫೀಡರಗಳ ಮಾರ್ಗಗಳಲ್ಲಿ ಸೆ. 12ರಂದು ಬೆಳಿಗ್ಗೆ 10 ರಿಂದ ಸಾಯಂಕಾಲ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು.ವಿದ್ಯುತ್ ನಿರ್ವಹಣಾ ಕೆಲಸವು ಬೇಗನೆ ಮುಕ್ತಾಯಗೊಂಡಲ್ಲಿ, ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ಥಿ ಕೆಲಸ-ಕಾರ್ಯಗಳನ್ನು ಮಾಡಬಾರದೆಂದು ಈ ಮೂಲಕ ಕೋರಲಾಗಿದೆ. ಒಂದು ವೇಳೆ ವಿದ್ಯುತ್ ಅಪಘಾತ ಸಂಭವಿಸಿದಲ್ಲಿ ಕಂಪನಿಯು ಜವಾಬ್ದಾರರಾಗಿರುವುದಿಲ್ಲ ಎಂದು ಜೆಸ್ಕಾಂ ಕೊಪ್ಪಳ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.