ಕ್ಷೇತ್ರದ ಕೆರೆ ತುಂಬಿಸುವ ಯೋಜನೆಗೆ ಒತ್ತು : ಶಾಸಕ ಕೆ. ರಾಘವೇಂದ್ರ ಹಿಟ್ನಾಳ

Emphasis on constituency lake filling project: MLA K. Raghavendra Hitna

ಕ್ಷೇತ್ರದ ಕೆರೆ ತುಂಬಿಸುವ ಯೋಜನೆಗೆ ಒತ್ತು : ಶಾಸಕ ಕೆ. ರಾಘವೇಂದ್ರ ಹಿಟ್ನಾಳ 

ಕೊಪ್ಪಳ 17: ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಅವರು ಕೊಪ್ಪಳ ವಿಧಾನಸಭ ಕ್ಷೇತ್ರದ ಲೇಬಗೇರಿ ಜಿ. ಪಂ. ವ್ಯಾಪ್ತಿಯ ಹನುಮನಹಳ್ಳಿ, ಟನಕನಕಲ್, ಕಲಿಕೇರಿ, ಹಟ್ಟಿ ದೇವಲಾಪುರ ಹಾಗೂ ಚಿಲವಾಡಗಿ ಗ್ರಾಮಗಳಲ್ಲಿ ಅಂದಾಜು ಮೊತ್ತ 5.47 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳ ಅಡಿಗಲ್ಲು ನೆರವೇರಿಸಿದರು. 

ಕಲಿಕೇರಿ ಗ್ರಾಮದಲ್ಲಿ 1.50 ಕೋಟಿ ವೆಚ್ಚದಲ್ಲಿ ಕಲಿಕೇರಿ ಕೆರೆ ತುಂಬಿಸುವ ಯೋಜನೆಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಕ್ಷೇತ್ರದಲ್ಲಿನ ಎಲ್ಲಾ ಗ್ರಾಮಗಳ ಕೆರೆಗಳನ್ನು ಅಭಿವೃದ್ಧಿ ಪಡಿಸಿ ಕೆರೆಗಳನ್ನು ತುಂಬಿಸುತ್ತೇವೆ, ಕೆರೆಗಳಲ್ಲಿ ನೀರು ಇದ್ದರೆ ರೈತರ ಹೊಲದಲ್ಲಿರುವ ಬೋರವೆಲ್ ಗಳು ರಿಚಾರ್ಜ್‌ ಆಗಿ ಉತ್ತಮ ಬೆಳೆ ಬೆಳೆಯಲು ಸಹಕಾರಿ ಆಗುತ್ತೆ ಇದಲ್ಲದೆ ದನ -ಕರುಗಳಿಗೂ ಕೂಡ ಬೇಸಿಗೆ ದಿನದಲ್ಲೂ ಕುಡಿಯಲು ನೀರು ಸಿಗುವ ಉದ್ದೇಶದಿಂದ ಕಕೆರೆ ತುಂಬಿಸುವ ಯೋಜನೆಗೆ ಹೆಚ್ಚಿನ ಮಹತ್ವ ನೀಡಿದ್ದೇವೆ. 290 ಕೋಟಿ ವೆಚ್ಚದಲ್ಲಿ ಕೊಪ್ಪಳ -ಯಲಬುರ್ಗ ಕೆರೆ ತುಂಬಿಸುವ ಕಾಮಗಾರಿ ಕೂಡ ವೇಗವಾಗಿ ಸಾಗುತ್ತಿದೆ ಒಟ್ಟಾರೆ 13 ಕೆರೆಗಳಲ್ಲಿ ಕೊಪ್ಪಳ ತಾಲೂಕಿನ ಕೊಪ್ಪಳದ ಹುಲಿಕೇರಿ ಕೆರೆ, ಗಿಣಗೇರಿ ಕೆರೆ ಸೇರಿದಂತೆ ಸುಮಾರು 5 ಕೆರೆಗಳು ಇವೆ ಎಂದರು. 

ಅಳವಂಡಿ ಹೋಬಳಿಯಲ್ಲಿ ಹೀಗಾಗಲೇ 21.50 ಕೋಟಿ ವೆಚ್ಚದಲ್ಲಿ ಸುಮಾರು 15 ಕೆರೆ ಗಳನ್ನು ತುಂಬಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಕಳೆದ ಹದಿನೈದು ದಿನಗಳ ಹಿಂದೆ ನಮ್ಮ ಕ್ಷೇತ್ರದ ಬಹುದೊಡ್ಡ ಏತ ನೀರಾವರಿ ಯೋಜನೆ ಬಹದ್ದೂರ್ ಬಂಡಿ ನವಲ್ ಕಲ್ ನೀರಾವರಿ ಯೋಜನೆಯ ಪ್ರಾಯೋಗಿಕ ಚಾಲನೆ ನೀಡಿದ್ದೆವು ಅದರಡಿ ಬಹದ್ದೂರ್ ಬಂಡಿ ಹೊಸಳ್ಳಿ ಕೆರೆ ಸೇರಿದಂತೆ ಆ ಭಾಗದ ಎಲ್ಲಾ ಕೆರೆಗಳಿಗೆ ನೀರು ಹರಿಸುವ ಕೆಲಸ ಮಾಡುತ್ತೇವೆ ಎಂದರು. 

ಕೊಪ್ಪಳ ವಿಧಾನಸಭ ಕ್ಷೇತ್ರದಲ್ಲಿ ಅಂದಾಜು 1000 ಕೋಟಿ ವೆಚ್ಚದಲ್ಲಿ ಒಂದು ಲಕ್ಷ ಹದಿನೆಂಟು ಸಾವಿರ ಎಕರೆ ನೀರಾವರಿ ಪ್ರದೇಶಕ್ಕೆ ನೀರಾವರಿ ಯೋಜನೆಗಳ ಕಾಮಗಾರಿ ನಡೆಯುತ್ತಿದೆ ಎಂದರು. ಚಿಲವಾಡಗಿ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಜೊತೆಗೆ ಚರ್ಚಿಸಿದರು. ಅಲ್ಲಿ ಉತ್ತಮ ಶಾಲೆ ಕಟ್ಟಲು ನೀಲನಕ್ಷೆ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು. ಚಿಲವಾಡಗಿ ಶಾಲೆ ಮತ್ತು ಸ್ಮಶಾನದ ಜಾಗ ಸರಿಪಡಿಸಲು ಸಹ ಅಧಿಕಾರಿಗಳಿಗೆ ತಾಕೀತು ಮಾಡಿದರು. 

ಈ ಸಂಧರ್ಭದಲ್ಲಿ ಮಾಜಿ ಜಿ. ಪಂ. ಸದಸ್ಯರುಗಳಾದ ಪ್ರಸನ್ನ ಗಡಾದ್, ರಾಮಣ್ಣ ಚೌಡ್ಕಿ, ಪಿ. ಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ರಾಮಣ್ಣ ಕಲ್ಲನ್ನವರ್, ಗ್ಯಾರಂಟಿ ಸಮಿತಿ ತಾಲೂಖ ಅಧ್ಯಕ್ಷ ಬಾಲಚಂದ್ರನ್ ಮುನಿರಬಾದ್, ಗ್ಯಾರಂಟಿ ಸಮಿತಿ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ್ ಜಿ. ಗೊಂಡಬಾಳ, ಮುಖಂಡರುಗಳಾದ ತೋಟಪ್ಪ ಕಾಮನೂರು, ಶಿವಣ್ಣ ಚರಾರಿ, ಪಂಪಣ್ಣ ಪೂಜಾರ್, ಸೋಮಶೇಖರ್ ಹಿಟ್ನಾಳ, ಯಲ್ಲಪ್ಪ ಹಳೇಮನಿ, ಮುಕ್ಕಣ್ಣ ಚಿಲವಾಡಗಿ, ಉಡಚಪ್ಪ ಬೋವಿ, ಮಲ್ಲು ಪೂಜಾರ್, ಪರಶುರಾಮ್ ಕೆರೆಹಳ್ಳಿ, ತಹಶೀಲ್ದಾರ್ ವಿಠ್ಠಲ್ ಚೌಗಲೆ, ತಾಲೂಕ ಪಂಚಾಯತ್ ಇಓ ದುಂದಪ್ಪ ತುರಾದಿ, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಲ್ಟಾನ್, ಅಧಿಕಾರಿಗಳು ಉಪಸ್ಥಿತರಿದ್ದರು.