ಡಾ. ಬಾಬು ಜಗಜೀವನರಾಮ್ ರವರ 118ನೇ ಜನ್ಮ ದಿನಾಚರಣೆ

Dr. Babu Jagjivanram's 118th birth anniversary

ಡಾ. ಬಾಬು ಜಗಜೀವನರಾಮ್ ರವರ 118ನೇ ಜನ್ಮ ದಿನಾಚರಣೆ 

 ಕೊಪ್ಪಳ  06: ದೇಶದ ಉಪ ಪ್ರಧಾನಿಗಳಾಗಿ ಹಾಗೂ ಕೇಂದ್ರ ಸಚಿವರಾಗಿ ಕೃಷಿ ಕ್ಷೇತ್ರದಲ್ಲಿ ಬಹು ದೊಡ್ಡ ಕ್ರಾಂತಿಯನ್ನೇ ಮಾಡಿರುವ ಇತಿಹಾಸ ಡಾ. ಬಾಬು ಜಗಜೀವನರಾಮ್ ಅವರದ್ದಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್‌. ತಂಗಡಗಿ ಹೇಳಿದರು. 

ಅವರು ಶನಿವಾರ ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಕೊಪ್ಪಳ ನಗರಸಭೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಹಸಿರು ಕ್ರಾಂತಿಯ ಹರಿಕಾರ ಹಾಗೂ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಮ್ ರವರ 118ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.   

ದೇಶದಲ್ಲಿ ಹಸಿರು ಕ್ರಾಂತಿಯನ್ನು ಮಾಡಿರುವಂತಹ ಮಹಾನ ಪುರುಷ ಯಾರಾದರು ಇದ್ದರೇ, ಅದು ಡಾ. ಬಾಬು ಜಗಜೀವನರಾಮ್ ರವರು. ಜವಾಹರಲಾಲ್ ನೆಹರು ರವರ ಸಚಿವ ಸಂಪುಟದಲ್ಲಿ ಕಿರಿಯ ವಯಸ್ಸಿನಲ್ಲಿಯೇ ಕೇಂದ್ರ ಸಚಿವರಾಗಿ ಅವರು ಕೆಲಸ ಮಾಡಿದ್ದಾರೆ. ಭಾರತ ಸಂವಿಧಾನ ಸಮಿತಿ ಸದಸ್ಯರಿ ಸಹ ಆಗಿದ್ದರು. 1971ರಲ್ಲಿ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಭಾರತದ ರಕ್ಷಣಾ ಸಚಿವರಾಗಿ ಕೆಲಸವನ್ನು ಮಾಡಿದವರು. ಕೃಷಿ ಸಚಿವರಾಗಿ ಹೊಸ-ಹೊಸ ಕಲ್ಪನೆಗಳು, ಯೋಜನೆಗಳನ್ನು ತರುವುದರ ಮೂಲಕ ಕೃಷಿಯಲ್ಲಿ ಅಧುನಿಕರಣ ತರುವಂತಹ ಕೆಲಸವನ್ನು ಮಾಡಿದ್ದಾರೆ. ಕೃಷಿಯೊಂದಿಗೆ ನೀರಾವರಿ ಖಾತೆಯನ್ನು ನೀಡಿ ಎಂದು ಹಠ ಹಿಡಿದಿದ್ದರು. 1974ರಲ್ಲಿ ದೇಶದಲ್ಲಿ ಬರಗಾಲ ಸಂಭವಿಸಿದ ಸಂದರ್ಭದಲ್ಲಿ ಆಹಾರ ವಿತರಣೆಗೆ ಬಹಳಷ್ಟು ತೊಂದರೆಯಾಗುತ್ತಿತ್ತು. ಈ ಪರಿಸ್ಥಿತಿಯನ್ನು ಯಾರು ನಿಭಾಯಿಸುವರು ಎಂಬ ಚರ್ಚೆಗಳಾಗಿದ್ದವು. ಆ ಸಂದರ್ಭದಲ್ಲಿ ಜಗಜೀವನರಾಮ್ ರವರು ಆಹಾರ ಸಚಿವರಾಗಿ ಅಂದಿನ ಬಿಕ್ಕಟ್ಟುನ್ನು ಸರಿಪಡಿಸುವಂತ ಕಾರ್ಯವನ್ನು ಮಾಡುವುದರ ಮೂಲಕ ದೇಶಕ್ಕೆ ಮಹತ್ತರವಾದ ಕೊಡುಗೆಗಳನ್ನು ನೀಡಿದ್ದಾರೆ ಎಂದರು. 

ಅಸ್ಪೃಶ್ಯತೆಯನ್ನು ಹೋಗಲಾಡಿಸಬೇಕು, ಸಮಾಜಕ್ಕೆ ಕೊಡುಗೆಯನ್ನು ಕೊಡಬೇಕೆಂಬ ಉದ್ದೇಶದಿಂದ ಜಗಜೀವನರಾಮ್ ರವರು ಹಲವಾರು ಹೋರಾಟಗಳನ್ನು ಮಾಡಿದ್ದಾರೆ. ಇಂತಹ ಮಹಾನ ವ್ಯಕ್ತಿಗಳು ಕೇವಲ ಒಂದೇ ಸಮುದಾಯಕ್ಕೆ ಸೀಮಿತವಲ್ಲ. ಈ ಹಿನ್ನೆಲೆಯಲ್ಲಿ ಮಹನಿಯರ ಆದರ್ಶಗಳನ್ನು ಸಾರ್ವಜನಿಕರಿಗೆ ವಿಶೇಷವಾಗಿ ಯುವ ಜನಾಂಗಕ್ಕೆ ಪರಿಚಯಿಸಲು ಜಯಂತಿಗಳನ್ನು ಸರ್ಕಾರದಿಂದ ಆಚರಿಸಲಾಗುತ್ತದೆ. ಡಾ. ಬಿ.ಆರ್‌.ಅಂಬೇಡ್ಕರ್, ಡಾ. ಬಾಬು ಜಗಜೀವನರಾಮ್, ಕನಕದಾಸರು, ವಾಲ್ಮೀಕಿ ಮಹರ್ಷಿಗಳು, ಬಸವಣ್ಣನವರು, ಪುರಂದರದಾಸರು, ಮಹಾತ್ಮ ಗಾಂಧಿಜೀ ಸೇರಿದಂತೆ ಹಲವಾರು ಮಹನಿಯರ ಆದರ್ಶಗಳನ್ನು ಮುಂದಿನ ಯುವ ಪಿಳಿಗೆಗೆ ತಿಳಿಸುವಂತಹ ಕೆಲಸವಾಗಬೇಕು ಎಂದು ಹೇಳಿದರು.  

ಕೊಪ್ಪಳ ಸಂಸದರಾದ ಕೆ.ರಾಜಶೇಖರ ಬಸಬವರಾಜ ಹಿಟ್ನಾಳ ಅವರು ಮಾತನಾಡಿ, ಡಾ. ಬಾಬು ಜಗಜೀವನರಾಮ್ ರವರು ಉಪ ಪ್ರಧಾನಿಗಳಾಗಿ, ಕೇಂದ್ರ ಮಂತ್ರಿಗಳಾಗಿ 8 ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದವರು. ದೇಶದಲ್ಲಿ ಆಹಾರದ ಕೊರತೆಯಿದ್ದ ಸಂದರ್ಭದಲ್ಲಿ ಹಲವಾರು ವಸ್ತುಗಳನ್ನು ಇತರೆ ದೇಶಗಳಿಂದ ಆಮದು ಮಾಡಿಕೊಳ್ಳುವ ಸ್ಥಿತಿಯಿತ್ತು. ಆಗ ಕೃಷಿ ಸಚಿವರಾಗಿದ್ದ ಡಾ. ಬಾಬು ಜಗಜೀವನರಾಮ್ ರವರು ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೈಗೊಂಡು ಹಸಿರು ಕ್ರಾಂತಿಯನ್ನುಂಟು ಮಾಡಿ, ಭಾರತವನ್ನು ಸ್ವಾಭಿಮಾನ ದೇಶವನ್ನಾಗಿ ಮಾಡಿದ್ದಾರೆ. ಅಸ್ಪೃಶ್ಯತೆ ನಿವಾರಣೆಗಾಗಿ ಜಗಜೀವನರಾಮ್ ರವರ ಹೋರಾಟದ ಪರಿ ಮಹತ್ವದ್ದಾಗಿತ್ತು. ಈ ಹೋರಾಟಕ್ಕೆ ಗಾಂಧಿಜೀಯವರು ಆಕರ್ಷಿತರಾಗಿ, ಜಗಜೀವನರಾಮ್ ರವರು ‘ಬೆಂಕಿಯಲ್ಲಿ ಹದಗೊಳಿಸಿರುವ ಚಿನ್ನ' ಎಂದು ಹೇಳಿದ್ದರು. ಜಗಜೀವನರಾಮ್ ರವರು ಸಮಾಜವನ್ನು ಒಗ್ಗೂಡಿಸುವಂತಹ ಕೆಲಸವನ್ನು ಮಾಡಿದ್ದಾರೆ ಎಂದರು. 

ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಅವರು ಮಾತನಾಡಿ, ಅತಿ ಹೆಚ್ಚು ಕಾಲ ಕೇಂದ್ರ ಸಚಿವರಾಗಿ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ಕೀರ್ತಿ ಡಾ. ಬಾಬು ಜಗಜೀವನರಾಮ್ ರವರದ್ದು. 1979 ರಿಂದ ಜುಲೈ ವರೆಗೂ ಉಪ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. 1971ರಲ್ಲಿ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ರಕ್ಷಣಾ ಮಂತ್ರಿಗಳಾಗಿ ಪ್ರಮುಖ ಪಾತ್ರ ವಹಿಸಿದ್ದರು. ಬಾಂಗ್ಲಾ ದೇಶದಲ್ಲಿ ರಚನೆಯಲ್ಲಿಯೂ ಅವರು ಪ್ರಮುಖರು. ಕೃಷಿಯಲ್ಲಿ ಮಹತ್ವದ ಕೊಡುಗೆಯನ್ನು ನೀಡಿದ್ದಾರೆ. 

ಜಗಜೀವನರಾಮ್ ರವರು ಶಾಲಾ ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ದಲಿತರಿಗೆ ಶಾಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇರಲಿಲ್ಲ. ಶಾಲೆಯಲ್ಲಿ ಇರಿಸಿದ್ದ ಎರಡು ನೀರಿನ ಮಡಿಕೆಗಳಲ್ಲಿ ಒಂದು ಮುಸ್ಲಿಂ ವಿದ್ಯಾರ್ಥಿಗಳಿಗೆ ಇನ್ನೊಂದು ಹಿಂದೂ ವಿದ್ಯಾರ್ಥಿಗಳಿಗೆ ಮೀಸಲಿರಿಸಲಾಗಿತ್ತು. ಆಗ ಇವರು ಧ್ವನಿ ಎತ್ತಿದಾಗ, ಇವರಿಗಾಗಿ ಶಾಲೆಯಲ್ಲಿ ಮತ್ತೊಂದು ಮಡಿಕೆಯನ್ನು ಇರಿಸಲಾಯಿತು. ಇದರ ವಿರುದ್ಧವಾಗಿ ಮತ್ತೆ ಧ್ವನಿ ಎತ್ತಿ, ಎರಡು ಮಡಿಕೆಗಳನ್ನು ಹೊಡೆದು ಹಾಕಿ, ಒಂದೇ ಮಡಿಕೆಯಲ್ಲಿ ಎಲ್ಲರೂ ಸೇರಿ ನೀರು ಕುಡಿಯಬೇಕು ಎಂಬ ಪರಿಕಲ್ಪನೆಯೊಂದಿಗೆ ಜಗಜೀವನರಾಮ್ ರವರು ಬಾಲ್ಯದಲ್ಲಿಯೇ ಹೋರಾಟಗಳನ್ನು ಆರಂಭಿಸಿದರು. ಅಲ್ಲದೇ ವಿವಿಧ ಸಂಘಟನೆಗಳನ್ನು ಮಾಡಿ ಸಮಾನತೆಗಾಗಿ ಅವರು ಶ್ರಮಿಸಿದ್ದಾರೆ ಎಂದು ಹೇಳಿದರು. 

ಗಂಗಾವತಿಯ ವೈದ್ಯಾಧಿಕಾರಿಗಳಾದ ಡಾ. ರಾಜಶೇಖರ ನಾರಿನಾಳ ಅವರು ಡಾ.ಬಾಬು ಜಗಜೀವನರಾಮ್ ರವರ ಕುರಿತು ವಿಶೇಷ ಉಪನ್ಯಾಸ ನೀಡಿ, ಸೋಭಿರಾಮ್ ಮತ್ತು ವಸಂತಿ ದೇವಿ ದಂಪತಿಗಳ ಮಗನಾಗಿ 1908ರ ಏಪ್ರಿಲ್ 5ರಂದು ಬಿಹಾರದಲ್ಲಿ ಡಾ. ಬಾಬು ಜಗಜೀವನರಾಮ್ ಅವರು ಜನಿಸಿದರು. ಇವರು ಸಂಘಟನಾ ಚತುರರಾಗಿದ್ದು, 1931ರಲ್ಲಿ ತಮ್ಮ ಪಿ.ಹೆಚ್‌.ಡಿ ಪದವಿ ಪೂರ್ಣಗೊಳಿಸಿದ ನಂತರ ಸಭೆ ಮಾಡಿ, ಸಂಘಟನೆಯನ್ನು ಕಟ್ಟುತ್ತಾರೆ. ಅಂದಿನ ಕಾಲದಲ್ಲಿ ಬನಾರಸ್‌ನಲ್ಲಿ ಅಸ್ಪೃಶ್ಯ ಆಚರಣೆಯಿಂದಾಗಿ ಕೆಲ ಸಮುದಾಯದ ಜನರಿಗೆ ಕ್ಷೌರ ಮಾಡಲು ನಿರಾಕರಿಸಿದಾಗ, ಜಗಜೀವನರಾಂ ರವರು ಕ್ಷೌರಕರನ್ನೇ ಬಹಿಷ್ಕರಿಸುವು ಮೂಲಕ ಅವರ ವಿರುದ್ಧ ಹೋರಾಟ ಮಾಡಿದ್ದರು. ನೇರ ನಿಷ್ಠುರರಾಗಿದ್ದ ಜಗಜೀವನರಾಮ್ ರವರು ಅಸ್ಪೃಶ್ಯತೆ ನಿವಾರಣೆಗಾಗಿ ಮೊದಲು ಕುಲವನ್ನು ತ್ಯಜಿಸಬೇಕು, ಸ್ವಪಂಥಿಯ ಭೋಜನ ತ್ಯಜಿಸಬೇಕು, ಅಸ್ಪೃಶ್ಯರಿಗೆ ಪ್ರತ್ಯೇಕ ಕಾಲೋನಿಗಳನ್ನು ನಿರ್ಮಿಸುವುದು ನಿಲ್ಲಬೇಕು. ಅಂತರಜಾತಿ ಮದುವೆಗಳು ಕಡ್ಡಾಯವಾಗಬೇಕು, ಸ್ವಜಾತಿ ಮದುವೆಗಳು ಕಾನೂನು ಬಾಹಿರ ಎಂದಾಗಬೇಕು. ಹೀಗೆ ವಿವಿಧ ಗುರಿಗಳನ್ನಿಟ್ಟುಕೊಂಡು ಹೋರಾಟಗಳನ್ನು ಮಾಡಿದ್ದಾರೆ ಎಂದರು.       

ಕಾರ್ಮಿಕ ಸಚಿವರಾಗಿದ್ದಾಗ ಮಹತ್ವದ ಕಾರ್ಮಿಕರಿಗೆ ಭವಿಷ್ಯನಿಧಿಯನ್ನು ರೂಪಿಸಿದರು. ಕನಿಷ್ಠ ವೇತನ ಜಾರಿ, ಎಲ್ಲಾ ಕೃಷಿ ಕಾರ್ಮಿಕರಿಗೆ ಜೀವವಿವೆ ರೂಪಿಸಿದರು. ಎಲ್ಲಾ ವರ್ಗದ ಕಾರ್ಮಿಕರಿಗೆ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ. ಹಸಿರು ಕ್ರಾಂತಿಯನ್ನು ತಮ್ಮ ಉಸಿರಾಗಿಸಿಕೊಂಡಿದ್ದರು. ಭಾರತ ಒಕ್ಕೂಟದ ಸಂವಿಧಾನ ಸಮಿತಿ ಹಾಗೂ ಕಾರ್ಯ ವಿಧಾನ ಸಮಿತಿಯಲ್ಲಿ ಭಾಗವಹಿಸಿದ್ದರು. ಕೆಳವರ್ಗದ ಜನರು ಯಾವಾಗಲೂ ಮೇಲ್ವರ್ಗದವರ ಸೇವೆಯನ್ನು ಮಾಡಬೇಕು ಎಂಬುದು ಅಲಿಖಿತ ನಿಯಮವಾಗಿತ್ತು. ಇಂತಹ ಸಂದರ್ಭದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಂ ಎಂಬ ಎರಡು ಮಹಾನ್ ಚೇತನಗಳು ಶೋಷಿತ ಜನಾಂಗದ ಎರಡು ಕಣ್ಣುಗಳಂತೆ ಇದ್ದರು. ಇಂತಹ ಮಹಾನ ನಾಯಕರನ್ನು ಒಂದು ಸಮುದಾಯಕ್ಕೆ ಮಾತ್ರ ಸಿಮಿತಗೊಳಿಸಬಾರದು ಎಂದು ಹೇಳಿದರು.  

ಕಾರ್ಯಕ್ರಮದಲ್ಲಿ ಕೊಪ್ಪಳ ನಗರಸಭೆ ಅಧ್ಯಕ್ಷರಾದ ಅಮ್ಜದ್ ಪಟೇಲ್, ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್ ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಗಲದ್, ಕೊಪ್ಪಳ ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ್, ನಗರಸಭೆ ಸದಸ್ಯರಾದ ಮುತ್ತುರಾಜ ಕುಷ್ಟಗಿ, ಗುರುರಾಜ ಹಲಗೇರಿ ಹಾಗೂ ವಿರೂಪಾಕ್ಷಪ್ಪ ಮೋರನಾಳ, ಸಮಾಜದ ಮುಖಂಡರಾದ ಗಾಳೆಪ್ಪ ಪೂಜಾರ, ಚನ್ನಬಸಪ್ಪ ಹೊಳೆಯಪ್ಪ, ರಾಮಣ್ಣ ಕಂದಾರಿ, ಗ್ಯಾನಪ್ಪ ಪೂಜಾರಿ, ಲಿಂಗರಾಜ, ಪರಶುರಾಮ ಕೆರಳ್ಳಿ, ಯಲ್ಲಪ್ಪ ಮುದ್ಲಾಪುರ, ನಿಂಗಜ್ಜ ಹರ್ಲಾಪುರ, ಗಣೇಶ ಹೊರತಟ್ನಾಳ, ಮಂಜುನಾಥ ಗೊಂಡಬಾಳ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.  

ಮೆರವಣಿಗೆ: ಕಾರ್ಯಕ್ರಮದ ನಿಮಿತ್ತ ಡಾ.ಬಾಬು ಜಗಜೀವನರಾಮ್ ರವರ ಭಾವಚಿತ್ರದ ಮೆರವಣಿಗೆಯು ತಹಶೀಲ್ದಾರ ಕಛೇರಿಯಿಂದ ಆರಂಭಗೊಂಡು ಸಾಲಾರಜಂಗ್ ರಸ್ತೆ, ಅಶೋಕ ವೃತ್ತದ ಮೂಲಕ ಸಾಹಿತ್ಯ ಭವನದವರೆಗೆ ಅದ್ದೂರಿಯಾಗಿ ನಡೆಯಿತು.