ಕುಂಬಳಾವತಿ ದ್ಯಾಮವ್ವ ದೇವಿ ಜಾತ್ರೆಯಲ್ಲಿ ಪ್ರಾಣಿ ಬಲಿ ತಡೆಗೆ ಆಗ್ರಹ : ದಯಾನಂದ ಸ್ವಾಮೀಜಿ

Demand to stop animal sacrifice in Kumbalavati Dyamavva Devi Jatra: Dayananda Swamiji

ಕುಂಬಳಾವತಿ ದ್ಯಾಮವ್ವ ದೇವಿ ಜಾತ್ರೆಯಲ್ಲಿ ಪ್ರಾಣಿ ಬಲಿ ತಡೆಗೆ ಆಗ್ರಹ : ದಯಾನಂದ ಸ್ವಾಮೀಜಿ

ಕೊಪ್ಪಳ 14: ಜಿಲ್ಲೆಯ ಕುಷ್ಟಗಿ ತಾಲೂಕಿನ ಕುಂಬಳಾವತಿಯಲ್ಲಿ ಫೆಬ್ರವರಿ18, 19, 20 ನಡೆಯುವ ದ್ಯಾಮವ್ವ ದೇವಿ ಜಾತ್ರೆಯಲ್ಲಿ ನಡೆಯುವ ಪ್ರಾಣಿ ಬಲಿ ತಡೆಯಬೇಕೆಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಪಶು ಪ್ರಾಣಿ ಬಲಿ ನಿರ್ಮೂಲನ ಜಾಗೃತಿ ಮಹಾಸಂಘ ಹಾಗೂ ಬಸವ ಧರ್ಮ ಜ್ಞಾನಪೀಠದ ಅಧ್ಯಕ್ಷ ದಯಾನಂದ ಸ್ವಾಮೀಜಿ ಅವರು ಜಿಲ್ಲಾಡಳಿತ ಹಾಗೂ ಪೋಲಿಸ್ ಇಲಾಖೆಗೆ ಮನವಿ ಮಾಡಿರುವುದಾಗಿ ತಿಳಿಸಿದರು.  

ಅವರು ಶುಕ್ರವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ, ಉದ್ದೇಶಿಸಿ ಮಾತನಾಡಿ ಈ ಜಾತ್ರೆಗೆ ಸಾಕಷ್ಟು ಭಕ್ತರು ಆಗಮಿಸಿ ದೇವಿಗೆ ಪೂಜಾದಿ ಧಾರ್ಮಿಕ ಸೇವಾ ಕೈಕರ್ಯಗಳು ಸಲ್ಲಿಸಲಿದ್ದಾರೆ, ಇದೇ ಸಂದರ್ಭದಲ್ಲಿ ಹಲವು ಭಕ್ತರು ದೇವರು ಮತ್ತು ಧರ್ಮದ ಹೆಸರಿನಲ್ಲಿ ಹರಕೆಯ ರೂಪದಲ್ಲಿ ಆಡು, ಕುರಿ, ಕೋಳಿ, ಕೋಣ ಮುಂತಾದ ಪ್ರಾಣಿಗಳ ಬಲಿ ನೀಡಲಿದ್ದು ಇದು ಕರ್ನಾಟಕ ಪ್ರಾಣಿ ಬಲಿಗಳ ಪ್ರತಿಬಂಧಕ ಅಧಿನಿಯಮ 1959 ಮತ್ತು ನಿಯಮಗಳು 1963 ಹಾಗೂ ತಿದ್ದುಪಡಿ ಕಾಯ್ದೆ 1975 ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ.  

ಈ ಪ್ರಾಣಿ ಬಲಿಯನ್ನು ಮೇಲ್ಕಂಡ ಕಾನೂನು ಹಾಗೂ ಹೈಕೋರ್ಟ್‌ ಆದೇಶಗಳ ಅಡಿಯಲ್ಲಿ ಸಂಪೂರ್ಣವಾಗಿ ತಡೆಗಟ್ಟಬೇಕು ಹಾಗೂ ಪ್ರಾಣಿಗಳನ್ನು ಜಾತ್ರಾ ಪರಿಸರಕ್ಕೆ ಬಾರದಂತೆ ಕಟ್ಟೆಚ್ಚರ ವಹಿಸಬೇಕು. ಪ್ರಾಣಿ ಬಲಿಯೂ ಅನಾಗರಿಕವು, ಅಂಧಶ್ರದ್ಧೆಯು, ಪರಿಸರ ಮಾಲಿನ್ಯಕಾರಕ ಆಗಿದ್ದು ಇದು ಕಾನೂನು ಮತ್ತು ಧರ್ಮ ವಿರೋಧಿಯಾಗಿದೆ ಆದ್ದರಿಂದ ಭಕ್ತಾದಿಗಳು ಪ್ರಾಣಿ ಬಲಿ ತ್ಯಜಿಸಿ ಸಾತ್ವಿಕ ಪೂಜೆ ಸಲ್ಲಿಸಬೇಕು.  

ಈ ಕುರಿತು ಈಗಾಗಲೇ ರಾಜ್ಯ ಸರ್ಕಾರ, ಗೃಹ ಇಲಾಖೆ, ಪಶು ಸಂಗೋಪನ ಇಲಾಖೆ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಕೊಪ್ಪಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಈ ಕುರಿತು  ಜನತೆಯಲ್ಲಿ ಜಾಗೃತಿ ಮೂಡಿಸಲು ಇಂದಿನಿಂದ ಒಂದು ವಾರಗಳ ಕಾಲ ಜಿಲ್ಲೆಯ ಕುಷ್ಟಗಿ ತಾಲೂಕಿನ ವಿವಿಧ ಭಾಗಗಳಲ್ಲಿ ಹಾಗೂ ದ್ಯಾಮವ್ವ ದೇವಿ ಜಾತ್ರಾ ಪರಿಸರ ಮತ್ತು ಸುತ್ತಮುತ್ತಲಿನ ಊರುಗಳಲ್ಲಿ ಅಹಿಂಸಾ ಪ್ರಾಣಿ ದಯಾ ಸಂದೇಶ ಯಾತ್ರೆಯನ್ನು ಕೈಗೊಳ್ಳುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಶರಣಪ್ಪ ಕಮ್ಮಾರ್ ಉಪಸ್ಥಿತರಿದ್ದರು.