ದತ್ತಾಂಶಗಳ ಸುರಕ್ಷತೆಗೂ ಆದ್ಯತೆ ಅಗತ್ಯ: ವಾಗೀಶ ಶಿವಾಚಾರ್ಯ

ದತ್ತಾಂಶಗಳ ಸುರಕ್ಷತೆಗೂ ಆದ್ಯತೆ ಅಗತ್ಯ: ವಾಗೀಶ ಶಿವಾಚಾರ್ಯ Priority Must Be Given to Data Security: Vagisha Shivacharya

         ಬಳ್ಳಾರಿ  03: ಇಂದಿನ ದಿನಗಳಲ್ಲಿ ಆಡಳಿತಾತ್ಮಕ ದತ್ತಾಂಶಗಳ ಸಂಗ್ರಹಣೆ ಎಷ್ಟು ಮುಖ್ಯವೋ, ಅಷ್ಟೇ ಪ್ರಾಮುಖ್ಯತೆಯನ್ನು ದತ್ತಾಂಶಗಳ ಸುರಕ್ಷತೆಗೂ ನೀಡಬೇಕಾಗಿದೆ. ದತ್ತಾಂಶಗಳ ಸುರಕ್ಷತೆಯ ಬಗ್ಗೆ ನಾವೆಲ್ಲರೂ ಅಷ್ಟೇ ಕಾಳಜಿವಹಿಸುವುದು ಇಂದಿನ ಅಗತ್ಯವಾಗಿದೆ ಎಂದು ಜಿ.ಪಂ.ಮುಖ್ಯ ಯೋಜನಾಧಿಕಾರಿ ವಾಗೀಶ ಶಿವಾಚಾರ್ಯ ಅವರು ಹೇಳಿದರು. 

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳನ್ನೊಳಗೊಂಡಂತೆ ಪ್ರೊ.ಪಿ.ಸಿ.ಮಹಾಲನೋಬಿಸ್ ಅವರ ಜನ್ಮದಿನಾಚರಣೆ ಅಂಗವಾಗಿ ‘20ನೇ ರಾಷ್ಟ್ರೀಯ ಸಾಂಖ್ಯಿಕ ದಿನಾಚರಣೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಯಾವುದೇ ದೇಶದ ಪ್ರಗತಿಗೆ ನಿಖರವಾದ ಅಂಕಿ-ಅಂಶಗಳು ಅತ್ಯಗತ್ಯ. ಕೃಷಿ, ಕೈಗಾರಿಕೆ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಂಖ್ಯಿಕ ದಿನಾಚರಣೆಯಂತಹ ಕಾರ್ಯಕ್ರಮಗಳು ಹೊಸ ದಿಕ್ಸೂಚಿಯನ್ನು ಒದಗಿಸುತ್ತವೆ ಎಂದರು. 

ಈ ವರ್ಷದ ಮುಖ್ಯ ವಿಷಯವಾದ ‘ಆಡಳಿತಾತ್ಮಕ ದತ್ತಾಂಶಗಳ ಸಾಮರ್ಥ್ಯವನ್ನು ಅನಾವರಣಗೊಳಿಸುವುದು’ ಎಂಬ ವಿಷಯದ ಕುರಿತು ತೆಕ್ಕಲಕೋಟೆಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ನಾಗೇಶ್ವರ ರಾವ್ ಅವರು ವಿಶೇಷ ಉಪನ್ಯಾಸ ನೀಡಿದರು. 

ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎನ್‌. ಕೆ. ಪತ್ರಿಬಸಪ್ಪ ಅವರು, ಸಾಂಖ್ಯಿಕ ಇಲಾಖೆಯಿಂದ ಸಂಗ್ರಹಿಸಲಾಗುತ್ತಿರುವ ವಿವಿಧ ದತ್ತಾಂಶಗಳ ಮಹತ್ವ ಮತ್ತು ಅವುಗಳ ಬಳಕೆಯ ಕುರಿತು ಸವಿವರವಾಗಿ ಮಾತನಾಡಿದರು. 

ಕಾರ್ಯಕ್ರಮದಲ್ಲಿ ಬಳ್ಳಾರಿ ಎನ್‌.ಎಸ್‌.ಎಸ್‌.ಓ ಕಚೇರಿಯ ಸಹಾಯಕ ನಿರ್ದೇಶಕ ಸಮೀರ್ ಪಟೇಲ್, ಎಸ್‌.ಓ ಮಿತಿಲೇಶ್, ಸಾಂಖ್ಯಿಕ ಇಲಾಖೆಯ ಸಹಾಯಕ ನಿರ್ದೇಶಕ ಸರಸ್ವತಿ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಎಲ್ಲಾ ತಾಲೂಕು ಯೋಜನಾಧಿಕಾರಿಗಳು ಹಾಗೂ ಕಚೇರಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.