ಮಹಾಲಿಂಗಪುರ ತಾಲೂಕು ಘೋಷಣೆ ನೆನೆಗುದಿಗೆ ಸರ್ಕಾರದ ವಿರುದ್ಧ ಅಗಷ್ಟ 13ಕ್ಕೆ ಎತ್ತಿನಬಂಡಿ ಮೆರವಣಿಗೆ, ಬಾರುಕೋಲು ಚಳವಳಿ

ಮಹಾಲಿಂಗಪುರ ತಾಲೂಕು ಘೋಷಣೆ ನೆನೆಗುದಿಗೆ  ಸರ್ಕಾರದ ವಿರುದ್ಧ ಅಗಷ್ಟ 13ಕ್ಕೆ ಎತ್ತಿನಬಂಡಿ ಮೆರವಣಿಗೆ, ಬಾರುಕೋಲು ಚಳವಳಿ Bullock cart procession, stick movement on August 13 against the government to commemorate the Maha

ಮಹಾಲಿಂಗಪುರ ತಾಲೂಕು ಘೋಷಣೆ ನೆನೆಗುದಿಗೆ  ಸರ್ಕಾರದ ವಿರುದ್ಧ ಅಗಷ್ಟ 13ಕ್ಕೆ ಎತ್ತಿನಬಂಡಿ ಮೆರವಣಿಗೆ, ಬಾರುಕೋಲು ಚಳವಳಿ. 

ಮಹಾಲಿಂಗಪುರ: ಪಟ್ಟಣದ ನೂತನ ತಾಲೂಕು ರಚನೆ ಕುರಿತು ಇತ್ತಿಚೆಗೆ ನಡೆದ ಮಹಾಲಿಂಗಪುರ ಬಂದ್ ಸಂದರ್ಭದಲ್ಲಿ ಮಧ್ಯಸ್ಥಿಕೆ ವಹಿಸಿ ಸಿಎಂ ಸಿದ್ದರಾಮಯ್ಯ ಅವರ ಭೇಟಿಗೆ ಉಸ್ತುವಾರಿ ಸಚಿವ ಆರ್‌. ಬಿ. ತಿಮ್ಮಾಪುರ ನೀಡಿದ ಗಡುವು ಮುಗಿದ ಹಿನ್ನಲೆಯಲ್ಲಿ, ತಾಲೂಕು ಹೋರಾಟ ಸಮಿತಿ ಅಗಷ್ಟ 13 ರಂದು ಬಾರುಕೋಲ್ ಚಳವಳಿ ಹಮ್ಮಿಕೊಳ್ಳಲಿದೆ ಎಂದು ಅಧ್ಯಕ್ಷ ಸಂಗಪ್ಪ ಹಲ್ಲಿ ಹೇಳಿದರು. 

ಆದರೆ ಜವಾಬ್ದಾರಿ ಸ್ಥಾನದಲ್ಲಿರುವ ಯಾವೊಬ್ಬ ಜನಪ್ರತಿನಿಧಿ ಮಹಾಲಿಂಗಪುರ ನೂತನ ತಾಲೂಕು ರಚನೆಗೆ ಮನಸ್ಸು ಮಾಡುತ್ತಿಲ್ಲವೆಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿ, ಅಗಷ್ಟ 06 ರಂದು ಸಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಂಗಣದಲ್ಲಿ ಸಭೆ ಸೇರಿ ಚಳವಳಿಯನ್ನು ಹಮ್ಮಿಕೊಳ್ಳುವ ಮತ್ತು ಅದರ ಅಗತ್ಯತೆಗಳ ಬಗ್ಗೆ ರೂಪುರೇಷೆಗಳನ್ನು ತಯಾರಿಸಲು ಸಭೆ ನಿರ್ಧರಿಸಿತು ಎಂದರು. 

 ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಸರ್ಕಾರ ಘೋಷಿಸಬೇಕೆಂದು ಆಗ್ರಹಿಸಿ ಇತ್ತಿಚಿಗೆ ಜನತೆ ಮಹಾಲಿಂಗಪೂರ ಪಟ್ಟಣವನ್ನು ಸಂಪೂರ್ಣ ಬಂದ್ ಮಾಡಿ ಮುಷ್ಕರ ಕೈಗೊಂಡಿದ್ದರು, ಇದು ಯಶಸ್ವಿಯೂ ಆಗಿತ್ತು. ತಾಲೂಕು ಘೋಷಣೆಗೆ ಸರ್ಕಾರ ಮಾಡುತ್ತಿರುವ ವಿಳಂಬದ ವಾಸ್ತವ ಸ್ಥಿತಿಯನ್ನು ಮಾತ್ರ ಸಾರ್ವಜನಿಕಗೊಳಿಸಲು, ಅಂದು ಹೋರಾಟಗಾರರು ಉಸ್ತುವಾರಿ ಸಚಿವ ಆರ್‌. ಬಿ.ತಿಮ್ಮಾಪುರ ಮತ್ತು ಶಾಸಕ ಸಿದ್ದು ಸವದಿ ಅವರನ್ನು ಸ್ಥಳಕ್ಕೆ ಆಹ್ವಾನಿಸಿದ್ದರು. 

ಶಾಸಕರು ಬಂದು ಬೆಂಬಲ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ತಿಳಿಸಿ ಹೋದರೆ, ಉಸ್ತುವಾರಿ ಸಚಿವ ತಿಮ್ಮಾಪುರ ಸ್ಥಳಕ್ಕಾಗಮಿಸಲಿಲ್ಲ.ಬದಲಾಗಿ ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಯಲ್ಲಣ್ಣಗೌಡ ಪಾಟೀಲ್ ಮೂಲಕ ಸಿಎಂ ಭೇಟಿಗೆ ಭರವಸೆ ನೀಡಿದ್ದರು. ಕೊಟ್ಟ 8/10 ದಿವಸಗಳ ಗಡುವೂ ಮುಗಿದು ಹೋಯಿತು.  

ನಂಬಿದ ಕೈಗಳಂತು ಹೋರಾಟಕ್ಕೆ ನೀಡುವ ಸಹಕಾರದಿಂದ ದೂರ ಸರಿದವು. ಇದರಿಂದ ಹೋರಾಟಗಾರರು ಮತ್ತು ಜನಸಾಮಾನ್ಯರಿಗೆ ಅಪಾರ ಬೇಸರ ತರಿಸಿದ್ದಂತೂ ದಿಟ.ಇದರ ಪರಿಣಾಮವಾಗಿ ಮುಂದಿನ ಹೋರಾಟದ ರೂಪುರೇಷೆಗಳಲ್ಲಿಯೂ ಬದಲಾವಣೆಗೊಂಡಿದೆ, ಅದುವೇ ಎತ್ತಿನ ಬಂಡಿ ಮೆರವಣಿಗೆ ಮತ್ತು ಬಾರುಕೋಲು ಚಳವಳಿ. 

ಸುತ್ತಮುತ್ತಲಿನ ಗ್ರಾಮಗಳ ನೂರಕ್ಕೂ ಹೆಚ್ಚು ಎತ್ತಿನ ಬಂಡಿಗಳು ಭಾಗವಹಿಸಲಿದ್ದು. ‘ಅಂದು ಬೆಳಿಗ್ಗೆ 9 ಗಂಟೆಗೆ ಎಪಿಎಂಸಿ ಗಣಪತಿ ದೇವಸ್ಥಾನದಿಂದ ಚನ್ನಮ್ಮ ವೃತ್ತದವರೆಗೆ ಎತ್ತಿನ ಬಂಡಿ ಮೆರವಣಿಗೆ ನಡೆಯಲಿದೆ. ಹೋರಾಟದ ಬೇಡಿಕೆಗೆ ಉಸ್ತುವಾರಿಯಿಂದ ಸೂಕ್ತ ಸ್ಪಂದನೆ ದೊರಕದೆ ಹೋದರೆ ಚನ್ನಮ್ಮ ವೃತ್ತದಲ್ಲಿಯೇ ಒಲೆ ಹೂಡಿ ವಾಸ್ತವ್ಯ ಹೂಡಲಾಗುವುದು ಎಂದರು. 

ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ, ಮಹಾದೇವ ಮಾರಾಪುರ, ನಿಂಗಪ್ಪ ಬಾಳಿಕಾಯಿ, ಗಂಗಾಧರ ಮೇಟಿ, ದುಂಡಪ್ಪ ಜಾಧವ, ಭೀಮಶಿ ಸಸಾಲಟ್ಟಿ, ವೀರೇಶ ಆಸಂಗಿ, ರಫೀಕ ಮಾಲದಾರ, ಮಹಾಲಿಂಗಪ್ಪ ಅವರಾದಿ, ಗೌಡಪ್ಪ ಚನ್ನಾಳ, ಶ್ರೀಶೈಲ ಸತ್ತಿಗೇರಿ, ಭೀಮಶಿ ಸಸಾಲಟ್ಟಿ, ಮಹಾಲಿಂಗಪ್ಪ ಬಾಡಗಿ ಮತ್ತು ಪರಸಪ್ಪ ಕೊಣ್ಣೂರ ಇದ್ದರು.