ವಿಜಯಪುರದಲ್ಲಿ ಕಳ್ಳರ ಹಾವಳಿಗೆ ಬಲಿಯಾದ ಸಂತೋಷ ಕನ್ನಾಳ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಹಾಗೂ ಕುಟುಂಬ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಲು ಮನವಿ
ವಿಜಯಪುರ06 : ವಿಜಯಪುರದಲ್ಲಿ ಕಳ್ಳರ ಹಾವಳಿಗೆ ಬಲಿಯಾದ ಸಂತೋಷ ಕನ್ನಾಳ ಅವರ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಹಾಗೂ ಕುಟುಂಬ ಸದಸ್ಯರಿಗೆ ಸರ್ಕಾರಿ ಕೊಡುವ ಮೂಲಕ ನ್ಯಾಯ ಒದಗಿಸಬೇಕೆಂದು ಅಖಿಲ ಭಾರತೀಯ ವಾಲ್ಮೀಕಿ ಸೇವಾ ಸಂಘ (ರಿ) ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಟಗಿ ಮಾತನಾಡಿ, ನಗರ ಹಾಗೂ ಜಿಲ್ಲೆಯ ಹಲವು ಹಳ್ಳಿಗಳಲ್ಲಿ ದರೋಡೆಕೋರರು ರಾತ್ರಿ ಹೊತ್ತು ಕಳೆದು ಒಂದು ತಿಂಗಳಿನಿಂದ ಅಮಾಯಕ ನಾಗರಿಕರ ಮನೆಗಳಿಗೆ ನುಗ್ಗಿ ನಗ, ನಾಣ್ಯ, ಬಂಗಾರ ಬೆಳ್ಳಿ, ಸೇರಿದಂತೆ ಅಮೂಲ್ಯ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದು, ಇದರಿಂದ ಸಾರ್ವಜನಿಕರ ನೆಮ್ಮದಿಗೆ ಭಂಗವುಂಟಾಗಿದೆ, ಜೊತೆಗೆ ಜಿಲ್ಲೆಯಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ದರೋಡೆಕೋರರಿಗೆ ಕಾನೂನಿನ ಭಯವಿಲ್ಲದಂತಾಗಿದೆ. ಕಳೆದ ಜನೇವರಿ 16 ರಂದು ನಗರದ ಹೊರ ವಲಯದ ಜೈನಾಪೂರ ಲೇಓಟ್ನ ಸಂತೋಷ ಕನ್ನಾಳ ಎಂಬುವರ ಮನೆಗೆ ನುಗ್ಗಿ ಕಳ್ಳತನ ಮಾಡುವಾಗ ಅದಕ್ಕೆ ಅಡ್ಡಿ ಪಡಿಸಿದ ಸಂತೋಷನಿಗೆ ಕಳ್ಳರು ಚಾಕು ಇರಿದಿದ್ದರಿಂದ ಮಹಡಿ ಮೇಲಿನಿಂದ ಕೆಳಗೆ ಒಗೆದು, ಗಂಭೀರ ಗಾಯಗೊಂಡು ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ನಂತರ ಬೆಂಗಳೂರಿನ ಖಾಸಗಿ ಆಸ್ಪತ್ರೆ ಅಪೋಲೋದಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದರು. ಸದರಿಯವರಿಗೆ ಚಿಕಿತ್ಸೆ ಪಲಕಾರಿಯಾಗದೆ ಫೆಬ್ರುವರಿ - 5 ರಂದು ಸಾವೀಗೀಡಾಗಿದ್ದಾರೆ. ಸದರಿ ಪ್ರಕರಣವನ್ನು ಕೊಲೆ ಎಂದು ಪರಿಗಣಿಸಿ ತಪ್ಪಿತಸ್ಥ ಕಳ್ಳರಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡ ಬಸವಕುಮಾರ ಕಾಂಬಳೆ ಮಾತನಾಡಿ, ಮೃತ ಸಂತೋಷನ ಕುಟುಂಬಕ್ಕೆ ಸರ್ಕಾರದಿಂದ ಒಂದು ಕೋಟಿ ರೂಪಾಯಿ ಪರಿಹಾರ ಅವರ ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಬೇಕು. ಜೊತೆಗೆ ಜಿಲ್ಲೆಯಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆಯನ್ನು ಸರಿಪಡಿಸಲು ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಿ ಜಿಲ್ಲೆಯಲ್ಲಿ ಸಾರ್ವಜನಿಕರು ನೆಮ್ಮದಿಯಿಂದ ಜೀವನ ನಡೆಸಲು ಅನುಕೂಲಮಾಡಿಕೊಡಬೇಕು. ಮುಂದೆ ಈ ರೀತಿ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕೆಂದು ಒತ್ತಾಯಿಸಿದರು.
ಗಂಡನ ಚಿಕಿತ್ಸೆ ವೆಚ್ಚ ಹಾಗೂ ತನ್ನ ಗಂಡನಿಗಾಗಿ ಕಿಡ್ನಿ ದಾನ ಮಾಡಿದ ಹೆಂಡತಿಯ ಸರ್ಕಾರದ ವೆಚ್ಚ ಸಂಪೂರ್ಣ ಸರ್ಕಾರವೇ ಭರಿಸಬೇಕು ಎಂದರು.ಈ ಸಂದರ್ಭದಲ್ಲಿ ದೇವೇಂದ್ರ ಜಗದೇವ ಹಡಲಗಿ, ಹಣಮಂತ ಬಳಗಾನೂರ, ಹಣಮಂತ ದೊಡಮನಿ, ಅಭಿಷೇಕ ಚಕ್ರವರ್ತಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.